ಶಕ್ತಿ ಯೋಜನೆ ಪರಿಷ್ಕರಣೆ ಇಲ್ಲ – ಸಿಎಂ ಸ್ಪಷ್ಟನೆ

Public TV
2 Min Read

ಬೆಂಗಳೂರು: ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಡಿಸಿಎಂ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಕುರಿತು ಡಿಕೆ ಶಿವಕುಮಾರ್ (DCM DK Shivakumar) ಹೇಳಿಕೆ ವಿಚಾರವಾಗಿ, ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ. ನಿನ್ನೆಯ ಕಾರ್ಯಕ್ರದಲ್ಲಿ ನಾನು ಇರಲಿಲ್ಲ. ನಾನು ಮಂತ್ರಿಗಳ ಜೊತೆ ಮಾತಾಡುತ್ತೇನೆ. ಪರಿಷ್ಕರಣೆಯ ಯಾವುದೇ ಉದ್ದೇಶವಿಲ್ಲ. ಆ ರೀತಿ ಪ್ರಸ್ತಾಪವೂ ಸರ್ಕಾರದ ಮುಂದೆ ಇಲ್ಲ ಎಂದು ಪ್ರತಿಕ್ರಿಯಿಸಿದರು.ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ – ವರ್ಷದ ಹಿಂದೆಯೇ ಪ್ರಧಾನಿ ಗಮನ ಸೆಳೆಯಲು ಯತ್ನ

ವಕ್ಫ್ ವಿಚಾರವಾಗಿ ಬಿಜೆಪಿಯಿಂದ ಪ್ರತಿಭಟನೆ ವಿಚಾರ:
ಬಿಜೆಪಿಯವರು ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ (BJP) ಕಾಲದಲ್ಲೂ ನೋಟೀಸ್ ಕೊಟ್ಟಿದ್ದರೂ ಅದಕ್ಕೇನು ಹೇಳುತ್ತಾರೆ? 200ಕ್ಕೂ ಹೆಚ್ಚು ನೋಟಿಸ್ ಕೊಟ್ಟಿದ್ದರು. ಇಂತಹ ರಾಜಕೀಯ ಬಿಜೆಪಿ ಮಾಡಬಾರದು. ಅವರ ಕಾಲದಲ್ಲಿಯೇ ನೋಟಿಸ್ ಕೊಡುವುದಕ್ಕೆ ಆರಂಭ ಆಗಿದ್ದು, ನಾನು ಈಗಾಗಲೇ ಎಲ್ಲಾ ನೋಟಿಸ್ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದೇನೆ. ಯಾರನ್ನು ಒಕ್ಕಲೆಬ್ಬಿಸುವುದಿಲ್ಲ. ಇದರಲ್ಲಿ ಇನ್ನೇನು ವಿವಾದವಿಲ್ಲ. ಯಾವುದೇ ಜಿಲ್ಲೆಯಲ್ಲಿ ನೋಟಿಸ್ ಕೊಟ್ಟಿದ್ದರೂ ಅದನ್ನು ವಾಪಸ್ ಪಡೆಯುತ್ತೇವೆ ಎಂದರು.

ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಬಿಜೆಪಿ ಅವರು ನೋಟಿಸ್ ಕೊಟ್ಟಿದ್ದರು. ಯಾಕೆ ಕೊಟ್ಟಿದ್ದರು? ಈ ಇಬ್ಬಂದಿ ರಾಜಕೀಯ ಯಾಕೆ ಮಾಡುತ್ತಾರೆ? ನ.4 ರಂದು ಪ್ರತಿಭಟನೆ ಮಾಡುತ್ತಿದ್ದಾರೆ. 3 ಉಪಚುನಾವಣೆ ಮತ್ತು ಮಹಾರಾಷ್ಟ್ರ ಚುನಾವಣೆ ಇದೆಯಲ್ಲ ಅದಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಇದೆಲ್ಲಾ ರಾಜಕೀಯ ಮಾಡುವ ಕಾರಣಕ್ಕಾಗಿ ಮಾಡುತ್ತಾರೆ. ಅವರು ಯಾವತ್ತು ಸತ್ಯ ಹೇಳುವುದಿಲ್ಲ. ಬರೀ ಸುಳ್ಳನ್ನೇ ಹೇಳುತ್ತಾರೆ. ವಿಷಯ ಇಲ್ಲದೇ ಇದ್ದರೂ ವಿವಾದ ಮಾಡುತ್ತಾರೆ. ಮುಡಾದಲ್ಲಿ ವಿವಾದ ಇರಲಿಲ್ಲ. ಆದರೂ ಬಿಜೆಪಿಯವರು ಅದನ್ನು ವಿವಾದವನ್ನಾಗಿ ಮಾಡಿದರು. ಅದೇ ಅವರ ಗುಣ ಎಂದು ವಾಗ್ದಾಳಿ ನಡೆಸಿದರು.

ಇನ್ನೂ ಅಜ್ಜಂಪೀರ್ ಖಾದ್ರಿಯವರನ್ನು ಕಾಂಗ್ರೆಸ್ ಅವರು ಕಿಡ್ನಾಪ್ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಕುಮಾರಸ್ವಾಮಿ ಸುಳ್ಳು ಹೇಳುವುದನ್ನು ಬಿಟ್ಟು ಇನ್ನೇನು ಮಾಡುವುದಿಲ್ಲ. ಕುಮಾರಸ್ವಾಮಿ, ಬಿಜೆಪಿಯವರು ಬರೀ ಸುಳ್ಳನ್ನೇ ಹೇಳುತ್ತಾರೆ. ಯಾವತ್ತಾದರೂ ಯಾವುದಾದರೂ ವಿಷಯವನ್ನು ಬಿಜೆಪಿ ಅವರು, ಕುಮಾರಸ್ವಾಮಿ ಲಾಜಿಕಲ್ ಎಂಡ್ ತಗೊಂಡು ಹೋಗಿದ್ದಾರಾ? ಬರೀ ಸುಳ್ಳು ಆರೋಪ ಮಾಡುತ್ತಾರೆ ಅಷ್ಟೆ ಎಂದು ಕಿಡಿಕಾರಿದರು.ಇದನ್ನೂ ಓದಿ: ದೇವಿರಮ್ಮನ ಬೆಟ್ಟದಲ್ಲಿ ಪ್ರಜ್ಞೆ ತಪ್ಪಿದ ಯುವತಿ – ಬೆಟ್ಟದ ತುದಿಯಿಂದ ಹೊತ್ತು ತಂದ ಪೊಲೀಸರು!

Share This Article