ನಿಮಗೆ ಹಿಂದಿ ಬರದಿದ್ದರೆ ದೇಶ ಬಿಟ್ಟು ತೊಲಗಿ: ಯುಪಿ ಸಚಿವ

Public TV
2 Min Read

ಲಕ್ನೋ: ಹಿಂದಿಯನ್ನು ಇಷ್ಟಪಡದವರು ವಿದೇಶಿಯರೆಂದು ನಾನು ಭಾವಿಸುತ್ತೇನೆ. ಭಾಷೆ ಬಾರದವರು ದೇಶವನ್ನು ಬಿಟ್ಟು ಹೋಗಬಹುದು ಎಂದು ಹೇಳುವ ಮೂಲಕ ಉತ್ತರ ಪ್ರದೇಶದ ಮೀನುಗಾರಿಕೆ ಸಚಿವ ಸಂಜಯ್ ನಿಶಾದ್ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ.

ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಕನ್ನಡ ನಟ ಕಿಚ್ಚ ಸುದೀಪ್ ಅವರ ಟ್ವೀಟ್ ವಾರ್ ಈಗ ಎಲ್ಲಕಡೆ ದೊಡ್ಡ ಸುದ್ದಿಯಾಗಿದೆ. ಈ ವಾರ್ ಸಿನಿರಂಗದಲ್ಲಿ ಮಾತ್ರವಲ್ಲ ರಾಜಕೀಯಕ್ಕೂ ಪ್ರವೇಶ ಮಾಡಿದ್ದು ಭಾಷಾ ಚರ್ಚೆ ನಡೆಯುತ್ತಿದೆ. ಪರಿಣಾಮ ಈ ಕುರಿತು ನಿಶಾದ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಅವರು, ಭಾರತದಲ್ಲಿ ವಾಸಿಸಲು ಬಯಸುವವರು ಹಿಂದಿಯನ್ನು ಪ್ರೀತಿಸಬೇಕಾಗುತ್ತದೆ. ನೀವು ಹಿಂದಿಯನ್ನು ಪ್ರೀತಿಸದಿದ್ದರೆ, ನೀವು ವಿದೇಶಿ ಅಥವಾ ವಿದೇಶಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದೀರಿ ಎಂದು ಭಾವಿಸಲಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಜಮೀನು ಹಣ ನೀಡಲ್ಲ ಎಂದು ತಂದೆಯ 13 ಲಕ್ಷ ರೂ. ಕದ್ದ ಮಗ 

ನಾವು ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತೇವೆ. ಆದರೆ ಈ ದೇಶ ಒಂದೇ ಮತ್ತು ಭಾರತದ ಸಂವಿಧಾನವು ಭಾರತವು ಹಿಂದೂಸ್ಥಾನ್‌ ಎಂದು ಹೇಳುತ್ತದೆ. ಅಂದರೆ ಹಿಂದಿ ಮಾತನಾಡುವವರಿಗೆ ಒಂದು ಸ್ಥಳ. ಹಿಂದೂಸ್ಥಾನವು ಹಿಂದಿ ಮಾತನಾಡದವರಿಗೆ ಇರುವ ಸ್ಥಳವಲ್ಲ. ಅವರು ಈ ದೇಶವನ್ನು ಬಿಟ್ಟು ಬೇರೆಡೆ ಹೋಗಬೇಕು ಎಂದು ಆಕ್ರೋಶ ಹೊರಹಾಕಿದರು.

ಕಾನೂನಿನ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಾಗಿದೆ. ಕಾನೂನನ್ನು ಉಲ್ಲಂಘಿಸುವ ಯಾರಾದರೂ ಅವರು ಎಷ್ಟೇ ದೊಡ್ಡ ರಾಜಕಾರಣಿ ಅಥವಾ ಶಕ್ತಿಶಾಲಿಯಾಗಿದ್ದರೂ ಅವರನ್ನು ಕಂಬಿ ಹಿಂದೆ ಹಾಕಬೇಕು. ಕೆಲವರು ಹಿಂದಿ ಮಾತನಾಡಲು ನಿರಾಕರಿಸುವ ಮೂಲಕ ದೇಶದ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಅಂಶಗಳು ದೇಶದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸುತ್ತೆ. ಆದರೆ ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ಹೇಳಿದರು.

ಸಂಜಯ್ ನಿಶಾದ್ ಅವರು ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್(NISHAD) ದಳದ ಮುಖ್ಯಸ್ಥರಾಗಿದ್ದಾರೆ. ಈ ಪಕ್ಷವನ್ನು ಸಾಮಾನ್ಯವಾಗಿ ಎಲ್ಲರೂ ನಿಶಾದ್ ಪಕ್ಷ ಎಂದೇ ಕರೆಯುತ್ತಾರೆ. ಈ ಪಕ್ಷವು ಆಡಳಿತಾರೂಢ ಬಿಜೆಪಿಯೊಂದಿಗೆ ಮಿತ್ರ ಪಕ್ಷವಾಗಿ ಉತ್ತರಪ್ರದೇಶದಲ್ಲಿ ಕೆಲಸ ಮಾಡುತ್ತಿದೆ. ಇದನ್ನೂ ಓದಿ:  ವಿದ್ಯುತ್ ಸಮಸ್ಯೆಗೆ ಮೋದಿ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ: ಚಿದಂಬರಂ ವ್ಯಂಗ್ಯ

ಸಂವಿಧಾನವು ಯಾವುದೇ ಭಾಷೆಗೆ ‘ರಾಷ್ಟ್ರೀಯ ಭಾಷೆ’ ಸ್ಥಾನಮಾನವನ್ನು ನೀಡುವುದಿಲ್ಲ. ಎಂಟನೇ ಶೆಡ್ಯೂಲ್ 22 ‘ಅಧಿಕೃತ ಭಾಷೆಗಳನ್ನು’ ಪಟ್ಟಿ ಮಾಡಲಾಗಿದೆ. ಅಧಿಕೃತ ಭಾಷೆಗಳ ಕಾಯಿದೆ, 1963, ಕೇಂದ್ರ ಸರ್ಕಾರದ ಅಧಿಕೃತ ಉದ್ದೇಶಗಳಿಗಾಗಿ ಬಳಸಲು ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಗೊತ್ತುಪಡಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *