ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯಲ್ಲಿರುವ ಮಸೀದಿ ಬಗೆಗಿನ ವಿವಾದಕ್ಕೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಹೈಕೋರ್ಟ್ನಲ್ಲಿ ವಿಹೆಚ್ಪಿ ಪರವಾಗಿ ಹಿರಿಯ ವಕೀಲ ವಿವೇಕ್ ರೆಡ್ಡಿ ವಾದ ಮಂಡಿಸಿದ್ದಾರೆ. ಮಳಲಿ ಮಸೀದಿ ಬಗ್ಗೆ ಮಂಗಳೂರಿನ ಸಿವಿಲ್ ಕೋರ್ಟ್ ವಿಚಾರಣೆ ಮಾತ್ರವೇ ಮಾಡಬೇಕು. ಈ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸುವಂತಿಲ್ಲ ಎಂದು ಮಂಗಳೂರು ಜಿಲ್ಲಾ ಮೂರನೇ ಸಿವಿಲ್ ಕೋರ್ಟ್ಗೆ ಹೈಕೋರ್ಟ್ ಸೂಚನೆ ನೀಡಿದೆ.
ಮಳಲಿ ಮಸೀದಿ ಪುನರ್ ನಿರ್ಮಾಣಕ್ಕೆ ಮಸೀದಿ ಆಡಳಿತ ಮಂಡಳಿ ಮುಂದಾಗಿತ್ತು. ಆದರೆ ಇದಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಮಸೀದಿಯ ನಡೆಯನ್ನು ಪ್ರಶ್ನಿಸಿ ಮಂಗಳೂರು ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಅರ್ಜಿ ವಿಚಾರಣೆ ಸಂದರ್ಭ ಮಸೀದಿ 700 ವರ್ಷಗಳ ಹಿಂದಿನಿಂದ ಇದೆ ಎಂದು ಮಸೀದಿ ಪರ ವಕೀಲರು ವಾದಿಸಿದ್ದರು. ಇದನ್ನೂ ಓದಿ: ಶಿಕ್ಷಕರು, ಪದವೀಧರ ಕ್ಷೇತ್ರಕ್ಕೆ ಯಶಸ್ವಿ ಮತದಾನ – ಜೂನ್ 15ಕ್ಕೆ ಫಲಿತಾಂಶ
ಮಸೀದಿಯೇ 700 ವರ್ಷಗಳಷ್ಟು ಹಳೆಯದಾಗಿದ್ದರೆ, ಅದರಲ್ಲೇ ಇದ್ದ ದೇವಾಯ ಅದಕ್ಕಿಂತಲೂ ಹಳೆಯದು ಎಂದು ಹಿಂದೂ ಪರ ವಕೀಲರು ವಾದಿಸಿದ್ದಾರೆ. ದೇವಸ್ಥಾನ ಎಷ್ಟು ವರ್ಷಗಳ ಹಿಂದೆ ಇತ್ತು? ದೇವಸ್ಥಾನ ಒಡೆದು ಮಸೀದಿ ಕಟ್ಟಲಾಗಿದೆಯಾ? ಎಂಬೆಲ್ಲಾ ಪ್ರಶ್ನೆಗೆ ಉತ್ತರ ತಿಳಿಯಲು ಹಿಂದೂ ಸಂಘಟನೆ ಪರ ವಕೀಲರು ಕಮಿಷನ್ ಒಂದನ್ನು ನೇಮಕ ಮಾಡಲು ಮನವಿ ಮಾಡಿದ್ದರು.
ಕೆಳಹಂತದ ನ್ಯಾಯಾಲಯ ಮಳಲಿ ಮಸೀದಿಯ ವಾಸ್ತವ ಸ್ಥಿತಿಯನ್ನು ಮುಂದುವರೆಸಬಹುದು ಎಂದು ಸೂಚನೆ ನೀಡಿತ್ತು. ಆದರೆ ಕೆಳ ಹಂತದ ಸೂಚನೆಯನ್ನು ಒಪ್ಪದ ವಕೀಲರು ಹೈಕೋರ್ಟ್ ಮೆಟ್ಟಿಲು ಏರಿದ್ದರು ಹಾಗೂ ಸಾರ್ವಜನಿಕ ಪೂಜಾಸ್ಥಳ ಅಧಿನಿಯಮ 1991ರ ಪ್ರಕಾರ ಅರ್ಜಿ ಸಲ್ಲಿಸಿದ್ದರು. 100 ವರ್ಷ ಮೇಲ್ಪಟ್ಟ ದೇವಾಲಯಗಳಿಗೆ ಅಧಿನಿಯಮ ಅನ್ವಯವಾಗುತ್ತದೆ. ಹೀಗಾಗಿ 700 ವರ್ಷಗಳ ಹಿಂದೆ ಇದ್ದ ದೇವಾಲಯಕ್ಕೆ ಕಮಿಷನ್ ನೇಮಕ ಮಾಡಲು ವಿವೇಕ್ ರೆಡ್ಡಿ ಹೈಕೋರ್ಟ್ನಲ್ಲಿ ಮನವಿ ಮಾಡಿದ್ದರು. ಇದನ್ನೂ ಓದಿ: ಜೋಗ ಜಲಪಾತ ಮುಂಗಾರಿನ ವಿಸ್ಮಯ – ಬೀಸುವ ಗಾಳಿಗೆ ಮೇಲಕ್ಕೆ ಹಾರುತ್ತಿದೆ ಶರಾವತಿ!
ಇದೀಗ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮಂಗಳೂರು ಕೋರ್ಟ್ಗೆ ಯಾವುದೇ ಆದೇಶವನ್ನು ನೀಡುವಂತಿಲ್ಲ ಎಂದು ಸೂಚನೆ ನೀಡಿದೆ. ಮಸೀದಿಯ ಯಥಾಸ್ಥಿತಿಯನ್ನು ಮುಂದುವರಿಸುವಂತೆ ಸೂಚನೆ ನೀಡಿದ್ದು, ವಿವರವಾದ ವಿಚಾರಣೆ ನಡೆಯುವವರೆಗೆ ಕೆಳಹಂತದ ನ್ಯಾಯಾಲಯ ಯಾವುದೇ ಆದೇಶ ನೀಡುವಂತಿಲ್ಲ ಎಂದಿದೆ.
ಮಳಲಿ ಮಸೀದಿ ವಿಚಾರಣೆ ಜ್ಞಾನವಾಪಿ ರೀತಿಯಲ್ಲಿ ನಡೆಯುತ್ತಿದ್ದು, ದೇವಾಲಯದ ಇತಿಹಾಸ ಮೊದಲು ತಿಳಿಯಬೇಕು, ಕಮಿಷನ್ ನೇಮಕವಾಗಿ ವರದಿ ಕೊಡುವ ತನಕ ಯಾವುದೇ ಕಾರ್ಯಚಟುವಟಿಕೆಗಳನ್ನು ನಡೆಸಬಾರದು ಎಂದು ಆದೇಶಿಸಿದೆ.