ಧಾರವಾಡ: ಕಿಲ್ಲರ್ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಸಭೆಯ ಬಳಿಕ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಸದ್ಯ ಕೊರೊನಾ ನಿಯಂತ್ರಣದಲ್ಲಿದೆ, ಈಗ ಯಾವುದೇ ಸೋಂಕಿತರು ಪತ್ತೆಯಾಗಿಲ್ಲ. ಹೊಸದಾಗಿ ಗಂಭೀರವಾದ ಪ್ರಕರಣವೂ ದಾಖಲಾಗಿಲ್ಲ ಎಂದು ಹೇಳಿದರು. ಆದರೂ ಜಿಲ್ಲೆಯ ಜನ ಜಾಗೃತರಾಗಿರಬೇಕು ಎಂದು ಹೇಳಿದ ಅವರು, ಕಿರಾಣಿ ಮತ್ತು ತರಕಾರಿ ಖರೀದಿಗೆ ಸಮಸ್ಯೆಯಾಗಿದೆ. ಇದನ್ನು ಕೇಂದ್ರಿಕೃತ ವ್ಯವಸ್ಥೆಯಿಂದ ವಿಕೇಂದ್ರೀಕೃತ ವ್ಯವಸ್ಥೆ ಮಾಡಬೇಕಿದೆ ಎಂದು ಹೇಳಿದರು.
ವಾರ್ಡ್ ಮತ್ತು ಬೂತ್ ಮಟ್ಟದಲ್ಲೇ ವ್ಯಾಪಾರಿಗಳು ತಳ್ಳು ಗಾಡಿ ಅಥವಾ ಬೇರೆ ವಾಹನ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕಿದೆ. ಜನರಿದ್ದಲ್ಲಿ ಹೋಗಿ ತರಕಾರಿ ತಲುಪಿಸಿದರೆ ತರಕಾರಿ ನೆಪದಲ್ಲಿ ಹೊರಗೆ ಸುತ್ತುವುದು ನಿಲ್ಲುತ್ತದೆ. ಇದಕ್ಕಾಗಿ ತರಕಾರಿ ವ್ಯಾಪಾರಿಗಳಿಗೆ ಪಾಸ್ ಕೊಡಲಾಗುವುದು, ಹೋಂ ಡೆಲಿವರಿಯಲ್ಲಿ ದಿನಸಿ ತಲುಪಿಸುವ ವ್ಯವಸ್ಥೆಯೂ ಆಗಲಿದೆ ಎಂದರು.
ಗ್ರಾಮೀಣ ಭಾಗಕ್ಕೆ ಅಗತ್ಯ ವಸ್ತುಗಳ ಪೂರೈಕೆಗೆ ಎಲ್ಲ ಅನುವೂ ಇದೆ. ಜಿಲ್ಲೆಯಲ್ಲಿ ಮಾಸ್ಕ್, ಮತ್ತು ಹ್ಯಾಂಡ್ ಗ್ಲೌಸ್ ಸಮಸ್ಯೆಯಾಗದಂತೆ ನೋಡುತ್ತೇವೆ. ಸರ್ಕಾರದಿಂದಲೂ ಮಾಸ್ಕ್ಗಳು ಬರಬೇಕಿದೆ ಎಂದರು. ಪೊಲೀಸರಿಂದ ಲಾಠಿ ಚಾರ್ಜ್ ವಿಚಾರವಾಗಿ ಪ್ರತಿಕ್ರಿಯೆಸಿದ ಜಗದೀಶ್ ಅವರು, ಜನರೇ ಜಾಗೃತರಾಗಬೇಕು, ಜನ ಅರ್ಥ ಮಾಡಿಕೊಂಡರೇ ಇದ್ಯಾವುದು ಆಗುವುದಿಲ್ಲ ಎಂದರು ತಿಳಿಸಿದರು.