132 ಗ್ರಾಮಗಳಲ್ಲಿ 3 ತಿಂಗಳಿನಿಂದ ಒಂದೇ ಒಂದು ಹೆಣ್ಣು ಮಗು ಜನಿಸಿಲ್ಲ

Public TV
2 Min Read

ಉತ್ತರಕಾಶಿ: ಉತ್ತರಾಖಂಡ್‍ನ ಉತ್ತರಕಾಶಿ ಜಿಲ್ಲೆಯ 132 ಗ್ರಾಮಗಳಲ್ಲಿ ಕಳೆದ ಮೂರು ತಿಂಗಳಿನಿಂದ ಒಂದು ಹೆಣ್ಣು ಮಗು ಸಹ ಜನಿಸಿಲ್ಲ ಎಂಬ ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ.

ಕೇಂದ್ರ ಸರ್ಕಾರ ಲಿಂಗಾನುಪಾತವನ್ನು ಸರಿದೂಗಿಸಲು ಹಾಗೂ ಹೆಣ್ಣು ಮಕ್ಕಳನ್ನು ವಿದ್ಯಾಂತರನ್ನಾಗಿಸಲು ‘ಬೇಟಿ ಬಚಾವೋ ಬೇಟಿ ಪಡಾವೋ’ ದಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಸಹ ಲಿಂಗಾನುಪಾತವನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಇದರ ಬೆನ್ನಲ್ಲೇ ಇದೀಗ ಉತ್ತರಕಾಶಿ ಜಿಲ್ಲೆಯ 132 ಗ್ರಾಮಗಳಲ್ಲಿ ಕಳೆದ ಮೂರು ತಿಂಗಳಿಂದ ಒಂದು ಹೆಣ್ಣು ಮಗು ಸಹ ಜನಿಸಿಲ್ಲ ಎಂಬ ಸಂಗತಿ ತಿಳಿದು ಬಂದಿದೆ.

ಅಂಕಿ ಅಂಶಗಳ ಪ್ರಕಾರ, ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯ 132 ಹಳ್ಳಿಗಳಲ್ಲಿ 216 ಮಕ್ಕಳು ಜನಸಿದ್ದು, ಇದರಲ್ಲಿ ಒಂದು ಸಹ ಹೆಣ್ಣು ಮಗುವಿನ ಜನನವಾಗಿಲ್ಲ.

ಪರಿಸ್ಥಿತಿಯನ್ನರಿತ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಕ್ ಚೌಹಾಣ್ ಈ ಕುರಿತು ಮಾತನಾಡಿ, ಯಾವ ಗ್ರಾಮಗಳಲ್ಲಿ ಹೆಣ್ಣು ಮಕ್ಕಳು ಜನಿಸಿಲ್ಲ ಹಾಗೂ ಯಾವ ಗ್ರಾಮಗಳಲ್ಲಿ ಒಂದಂಕಿಯೊಳಗೆ ಹೆಣ್ಣು ಮಗು ಜನಿಸಿದೆ ಎಂಬುದರ ಕುರಿತು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಅಂತಹ ಗ್ರಾಮಗಳ ಕಡೆ ಹೆಚ್ಚು ಗಮನಹರಿಸಿ ನಿರ್ವಹಣೆ ಮಾಡಿ, ಯಾವ ಕಾರಣಕ್ಕೆ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುತ್ತಿದೆ ಎಂಬುದರ ಕುರಿತು ಪತ್ತೆ ಹಚ್ಚಲಾಗುವುದು. ಈ ಕುರಿತು ವಿಸ್ತøತ ಸರ್ವೇ ಹಾಗೂ ಅಧ್ಯಯನ ನಡೆಸಿ ಇದರ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.

ಈ ಕುರಿತು ಚರ್ಚಿಸಲು ಆಶಾ ಕಾರ್ಯಕರ್ತೆಯವರೊಂದಿಗೆ ತುರ್ತು ಸಭೆ ಕರೆಯಲಾಗಿದ್ದು, ಈ ಪ್ರದೇಶಗಳಲ್ಲಿ ಹೆಚ್ಚು ಜಾಗರೂಕತೆ ವಹಿಸುವಂತೆ ಹಾಗೂ ದತ್ತಾಂಶಗಳ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಗಂಗೋತ್ರಿ ಶಾಸಕ ಗೋಪಾಲ್ ರಾವತ್ ಸಹ ಈ ಸಭೆಯಲ್ಲಿ ಭಾಗವಹಿಸಿ ವಿಚಾರಿಸಿದ್ದಾರೆ.

ಸಮಾಜ ಸೇವಕಿ ಕಲ್ಪನಾ ಠಾಕೂರ್ ಅವರು ಈ ಕುರಿತು ಪ್ರತಿಕ್ರಿಯಿಸಿ, ಒಂದೂ ಹೆಣ್ಣು ಮಗು ಜನಿಸದಿರುವುದು ಸ್ತ್ರೀ ಭ್ರೂಣ ಹತ್ಯೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಳ್ಳಿಗಳಲ್ಲಿ ಮೂರು ತಿಂಗಳ ವರೆಗೆ ಯಾವುದೇ ಹೆಣ್ಣು ಮಗು ಜನಿಸಿಲ್ಲ ಎಂಬುದು ಕೇವಲ ಕಾಕತಾಳಿಯವಲ್ಲ. ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹುತವಾಗಿ ನಡೆಯುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಈ ಕುರಿತು ನಿರ್ಲಕ್ಷ್ಯ ವಹಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರಿಯ ಪತ್ರಕರ್ತ ಶಿವ್ ಸಿಂಗ್ ಥನ್ವಲ್ ಈ ಕುರಿತು ಪ್ರತಿಕ್ರಿಯಿಸಿ, ಇಂತಹ ಪದ್ಧತಿಯನ್ನು ತೊಲಗಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಲಿಂಗಾನುಪಾತ ಈ ಮಟ್ಟಕ್ಕೆ ಕುಸಿದಿರುವುದು ಭಯದ ವಾತಾವರಣವನ್ನು ಸೃಷ್ಟಿಸಿದೆ. ಕೇಂದ್ರ ಸರ್ಕಾರದ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯನ್ನೇ ಪ್ರಶ್ನಿಸುವಂತಹ ಸ್ಥಿತಿ ತಲುಪಿದ್ದೇವೆ. ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದನ್ನು ಸಂಖ್ಯೆಗಳು ಸ್ಪಷ್ಟವಾಗಿ ತೋರಿಸುತ್ತಿವೆ. ಇದನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *