ಸಿದ್ದರಾಮಯ್ಯ ಆಗಮನದಿಂದ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯಲ್ಲಿ ನ್ಯೂ ರೂಲ್ಸ್

Public TV
2 Min Read

ಮಂಗಳೂರು: ಧರ್ಮಸ್ಥಳದ ಶಾಂತಿವನ ಇದೀಗ ಅಕ್ಷರಶಃ ಅಶಾಂತಿಯ ತಾಣವಾಗಿ ಮಾರ್ಪಾಡಾಗಿದೆ. ಶಾಂತಿ ಬೇಕು ಎಂದು ಇಲ್ಲಿಗೆ ಬರುವವರಿಗೆ ಶಾಂತಿ ಇಲ್ಲದಂತಾಗಿದೆ. ಪ್ರಕೃತಿ ಚಿಕಿತ್ಸೆಯ ಈ ತಾಣ ಕಳೆದ ಕೆಲ ದಿನಗಳಿಂದ ರಾಜಕೀಯ ತಾಣವಾಗಿ ಬದಲಾಗಿದೆ. ರಾಜಕೀಯ ಮೇಲಾಟದಿಂದಾಗಿ ಶಾಂತಿನವದ ಆಡಳಿತ ಮಂಡಳಿಯೇ ಕಂಗಾಲಾಗಿದೆ. ಇನ್ನು ಮುಂದೆ ರಾಜಕಾರಣಿಗಳಿಗೆ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡೊದೇ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ 12 ದಿನಗಳ ಕಾಲ ಈ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆರಾಮವಾಗಿ ಇದ್ದು ಫಿಟ್ ಆಗಿ ಹೊರ ಬರಬೇಕೆಂದಿದ್ದ ಸಿದ್ದರಾಮಯ್ಯ ಮಾತ್ರ ಶಾಂತಿವನದ ಒಳಗೂ ರಾಜಕೀಯದ ಚದುರಂಗ ಆಟವಾಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ಮೈತ್ರಿ ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದು, ಮಾಧ್ಯಮಗಳ ಮೂಲಕ ಬಹಿರಂಗಗೊಂಡಿತ್ತು.

ಸಿದ್ದರಾಮಯ್ಯ ಶಾಂತಿವನಕ್ಕೆ ದಾಖಲಾದ ದಿನದಿಂದ ಡಿಸ್ಚಾರ್ಜ್ ಆಗುವ ಇಂದಿನವರೆಗೂ ಶಾಂತಿವನದ ವೈದ್ಯರು, ಸಿಬ್ಬಂದಿ, ರೋಗಿಗಳು ಸೇರಿದಂತೆ ಯಾರಿಗೂ ಶಾಂತಿ ಇಲ್ಲದಂತಾಗಿದೆ. ಪ್ರತಿದಿನ ಸಿದ್ದರಾಮಯ್ಯನವರ ಆಪ್ತರು, ಶಾಸಕರುಗಳು, ಬೆಂಬಲಿಗರು ಮತ್ತು ಮಾಧ್ಯಮದವರು ಸೇರಿದಂತೆ ಎಲ್ಲರೂ ಮುಗಿಬಿದ್ದು ಬರುತ್ತಿದ್ದರು.ಶಾಂತಿಯಾಗಿರಬೇಕಾಗಿದ್ದ ಶಾಂತಿವನದಲ್ಲಿ ಅಶಾಂತಿ ಹುಟ್ಟಿಸಿತ್ತು. ಸ್ವತಃ ಸಿದ್ದರಾಮಯ್ಯನವರೂ ಯಾರನ್ನೇ ನೋಡಿದರೂ ಎಗರಾಡುತ್ತಿದ್ದರು. ಮಾಧ್ಯಮದವರಿಗಂತು ನಾನೇನು ಮಾತಾಡಲ್ಲರಿ ಎಂದು ಗರಂ ಆಗುತ್ತಿದ್ದರು.

ಸಿದ್ದರಾಮಯ್ಯನವರ ಅಸಮಧಾನದ ಸುದ್ದಿ ಹೊರ ಬೀಳುತ್ತಿದ್ದಂತೆ ಮೈತ್ರಿ ಸರ್ಕಾರದಲ್ಲೂ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಈ ವಿವಾದದಿಂದಲೇ ಪ್ರಕೃತಿ ಚಿಕಿತ್ಸಾಲಯ ರಾಜ್ಯದಲ್ಲಿ ಸುದ್ದಿ ಆಯಿತು. ರಾಜಕಾರಣಿಗಳು ಇಲ್ಲಿ ಚಿಕಿತ್ಸೆಗೆಂದು ದಾಖಲಾದರೆ ಏನೆಲ್ಲಾ ತೊಂದರೆಗಳಾಗುತ್ತೆ ಅನ್ನೋದನ್ನು ಶಾಂತಿವನ ಆಡಳಿತ ಮಂಡಳಿ ಈ ಘಟನೆಯಿಂದ ಕಂಡುಕೊಂಡಿದೆ. ಹೀಗಾಗಿ ಇನ್ನು ಮುಂದೆ ಶಾಂತಿವನ ಪ್ರಕೃತಿ ಚಿಕಿತ್ಸಾಲಯದಲ್ಲಿ ಯಾವುದೇ ರಾಜಕಾರಣಿಗಳಿಗೂ ಚಿಕಿತ್ಸೆ ನೀಡಬಾರದು ಎಂದು ಆಡಳಿತ ಮಂಡಳಿ ನಿರ್ಧರಿಸಿದೆ.

ಸಿದ್ದರಾಮಯ್ಯ ಇಲ್ಲಿ ದಾಖಲಾದ ಬಳಿಕವಂತೂ ರಾಜಕಾರಣದ ತಲೆನೋವುಗಳನ್ನು ನೋಡಿದ ಶಾಂತಿವನದ ಆಡಳಳಿತ ಮಂಡಳಿ ರಾಜಕಾರಣಿಗಳನ್ನು ಸೇರಿಕೊಳ್ಳುವುದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದೆ. ಮುಂದೆ ಈ ರೀತಿ ರಾಜಕೀಯ ಈ ಶಾಂತಿವನದಲ್ಲಿ ನಡೆಯಬಾರದೆಂದು ಶಾಂತಿವನದ ಆಡಳಿತ ಮಂಡಳಿ ನಿರ್ಧರಿಸಿದೆ. ಇದಕ್ಕೆ ಸಾಕ್ಷಿಯಾಗಿದ್ದು, ಬುಧವಾರ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಲು ದಿನ ನಿಗದಿಗೆ ಬಂದಿರುವ ಎಲ್ಲಾ ರಾಜಕಾರಣಿಗಳೂ ಆಡಳಿತ ಮಂಡಳಿ ದಿನ ನಿಗದಿಪಡಿಸದೆ ವಾಪಾಸ್ಸು ಕಳಿಸಿದೆ. ಸಿದ್ದರಾಮಯ್ಯನವರಂತೆ ನಾನು ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದೇನೆ ಎಂದಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಇಂದು ವಾಪಾಸ್ಸು ಹೋಗಿದ್ದು, ಮತ್ತೊಂದು ದಿನ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತೇನೆ ಎಂದಿದ್ದಾರೆ.

ಶಾಂತಿವನದಲ್ಲಿ ದಾಖಲಾದ ಪ್ರತಿ ರೋಗಿಯೂ ಅಲ್ಲಿನ ಎಲ್ಲಾ ಸೂಚನೆಗಳನ್ನು ಪಾಲಿಸಬೇಕು. ಆದರೆ ಸಿದ್ದರಾಮಯ್ಯನವರು ಮಾತ್ರ ಇಲ್ಲಿನ ಯಾವುದೇ ಸೂಚನೆಗಳನ್ನು ಪಾಲಿಸದೆ ಹೆಚ್ಚಿನ ಕಾಲ ರಾಜಕೀಯ ಮಾಡುವುದರಲ್ಲೇ ಕಳೆದಿದ್ದಾರೆ ಅನ್ನೋದನ್ನು ಆಡಳಿತ ಮಂಡಳಿ ಕಂಡುಕೊಂಡಿದೆ. ವಿಶ್ರಾಂತಿಯ ಸಮಯದಲ್ಲಿ ಎಲ್ಲರೂ ಸಿದ್ದರಾಮಯ್ಯನವರನ್ನು ಭೇಟಿ ಮಾಡುವುದರಿಂದ ರೋಗಿಗಳೂ ಸೇರಿದಂತೆ ಎಲ್ಲರಿಗೂ ತೊಂದರೆಗಳಾಗಿತ್ತು. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಸ್ಥಿತಿ ಎದುರಾಗದಂತೆ ಶಾಂತಿವನ ಶಾಂತಿಯಾಗಿಯೇ ಇರಬೇಕೆಂದು ಆಡಳಿತ ಮಂಡಳಿ ರಾಜಕಾರಣಿಗಳನ್ನು ಹತ್ತಿರ ಸೇರಿದಂತೆ ನಿರ್ಧಾರ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *