ಸ್ವಗ್ರಾಮದಲ್ಲಿ ಬಿಹಾರ್ ಸಿಎಂ ನಿತೀಶ್ ಕುಮಾರ್ ಮೇಲೆ ಹಲ್ಲೆ

Public TV
1 Min Read

ಪಟ್ನಾ: ಸ್ವಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ನಡೆದಿದೆ.

ನಿತೀಶ್ ಕುಮಾರ್, ಸ್ವಗ್ರಾಮ ಭಕ್ತಿಯಾರ್‌ಪುರದಲ್ಲಿ ಸ್ಥಳೀಯ ಆಸ್ಪತ್ರೆಯ ಸಂಕೀರ್ಣದಲ್ಲಿದ್ದ ಬಿಹಾರ್ ಮೂಲದ ಸ್ವಾತಂತ್ರ್ಯ ಹೋರಾಟಗಾರ ಶಿಲಭದ್ರ ಯಾಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಂದಾದಾಗ ವ್ಯಕ್ತಿಯೋರ್ವ ಮುಖ್ಯಮಂತ್ರಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

ನಿತೀಶ್ ಕುಮಾರ್ ಮಾಲಾರ್ಪಣೆ ಮಾಡಲು ಮುಂದಾಗುತ್ತಿದ್ದಂತೆ ಸಿಎಂಗೆ ವ್ಯಕ್ತಿಯೋರ್ವ ಹಿಂಬದಿಯಿಂದ ಬಂದು ಹೊಡೆದಿದ್ದಾನೆ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದಿದ್ದಾರೆ. ಈ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಭದ್ರತಾ ಲೋಪ ಕಂಡುಬಂದಿದೆ.

ಸಿಸಿಟಿವಿ ದೃಶ್ಯಗಳನ್ನು ಗಮನಿಸಿದಾಗ ಹಿಂದಿನಿಂದ ಬಂದ ವ್ಯಕ್ತಿ, ನಿತೀಶ್ ಕುಮಾರ್ ಅವರ ಬೆನ್ನಿಗೆ ಹೊಡೆಯುವ ಮೊದಲು ವೇದಿಕೆಯ ಮೇಲೆ ನಡೆದುಕೊಂಡು ಹೋಗಿರುವುದು ಕಂಡುಬಂದಿದೆ. ಸಿಎಂಗೆ ಹೊಡೆಯುತ್ತಿದ್ದಂತೆ ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದಿದ್ದಾರೆ. ಮೂಲಗಳ ಪ್ರಕಾರ ಹಲ್ಲೆ ಮಾಡಿದಾತನನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: 2 ಬಾರಿ ಮದುವೆ ದಿನವೇ ವರ ನಾಪತ್ತೆ- ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ವಧು ಕುಟುಂಬಸ್ಥರು

ಕೆಲ ದಿನಗಳಿಂದ ನಿತೀಶ್ ಕುಮಾರ್ ಚುನಾವಣೆಗೆ ಸ್ಪರ್ಧಿಸಿದ ಬರ್ಹ್ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದಾರೆ. ಬರ್ಹ್ ಕ್ಷೇತ್ರದಿಂದ 5 ಬಾರಿ ಸ್ಪರ್ಧಿಸಿ ಗೆದ್ದಿದ್ದಾರೆ. ನಿತೀಶ್ ಕುಮಾರ್ ಈ ಹಿಂದೆ 2020ರಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ಮಧುಬನಿಯಲ್ಲಿ ಹಲ್ಲೆ ನಡೆದಿತ್ತು.

Share This Article
Leave a Comment

Leave a Reply

Your email address will not be published. Required fields are marked *