ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ 50ನೇ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಸಾಕಷ್ಟು ಸದ್ದು ಮಾಡುತ್ತಿದೆ. ಈಗ ಈ ಚಿತ್ರದ ಒಂದು ಹಾಡಿಗೆ ನಿರ್ಮಾಪಕ ಮುನಿರತ್ನ ನಾಲ್ಕು ಬೇರೆ ಬೇರೆ ಸೆಟ್ ಹಾಕಿ ಬರೋಬ್ಬರಿ ಒಂದು ಕೋಟಿ ರೂ. ಸುರಿದಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಮತ್ತು ಉತ್ತರೆ ನಡುವೆ ನಡೆಯುವ ಈ ಹಾಡಿಗೆ ಒಂದು ಕೋಟಿ ಖರ್ಚು ಮಾಡಿ ಅದ್ಧೂರಿ ಸೆಟ್ ಹಾಕಲು ಚಿತ್ರತಂಡ ಮುಂದಾಗಿದೆ. ಈ ಹಾಡಿನಲ್ಲಿ ಜಾಗ್ವಾರ್ ಚಿತ್ರದ ನಾಯಕ ನಿಖಿಲ್ ಕುಮಾರ್ ಕಾಣಿಸಿಕೊಂಡು ಅವರ ಜೊತೆಯಾಗಿ ನಟಿ ಅದಿತಿ ಆರ್ಯ ಕಾಣಿಸಿಕೊಳ್ಳಲಿದ್ದಾರೆ.
ಈ ಹಾಡಿಗೆ ನಾಲ್ಕು ಬೇರೆ ಬೇರೆ ರೀತಿಯ ಅದ್ಧೂರಿ ಸೆಟ್ ಹಾಕಿ, ಆರು ಕ್ಯಾಮೆರಾಗಳಲ್ಲಿ ಈ ಹಾಡನ್ನು ಚಿತ್ರಿಕರಣ ಮಾಡಲಿದ್ದಾರೆ. ಟಾಲಿವುಡ್ ನ ಡ್ಯಾನ್ಸ್ ಮಾಸ್ಟರ್ ಶೇಖರ್ ಈ ಹಾಡಿಗೆ ನೃತ್ಯ ಹೇಳಿಕೊಡುತ್ತಿದ್ದು, 2 ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮುನ್ನಿರತ್ನ ಅವರ ಕನಸಿನ ಸಿನಿಮಾ `ಕುರುಕ್ಷೇತ್ರ’ ಬರೋಬ್ಬರಿ 50 ರಿಂದ 60ಕೋಟಿ ವೆಚ್ಚದಲ್ಲಿ ವೃಷಭಾದ್ರಿ ಪ್ರೋಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ನೂತನ ತಂತ್ರಜ್ಞಾನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳದಲ್ಲಿ ಕನ್ನಡದ ಕುರುಕ್ಷೇತ್ರ ಮೂಡಲಿದೆ.
ಈ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ, ಸೋನು ಸೂದ್ ಹಾಗೂ ಪ್ರಣಯ ರಾಜ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ. ನೀರ್ ದೋಸೆ ಬೆಡಗಿ ಹರಿಪ್ರಿಯಾ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಪವಿತ್ರಾ ಲೋಕೇಶ್ ಕೂಡ ಈ `ಕುರುಕ್ಷೇತ್ರ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.