ನಿಖಿಲ್ ನಾಮಪತ್ರ ಸಿಂಧು: ಮಂಡ್ಯ ಡಿಸಿ ಸ್ಪಷ್ಟನೆ

Public TV
2 Min Read

ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್ ನಾಮಪತ್ರ ತಿರಸ್ಕೃತ ಮಾಡಬೇಕೆಂದು ದೂರು ಬಂದ ಹಿನ್ನೆಲೆ ಸುದ್ಧಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಮಂಡ್ಯ ಜಿಲ್ಲಾಧಿಕಾರಿ ಮಂಜು ಶ್ರೀ ಅವರು, ನಿಖಿಲ್ ಅವರ ನಾಮಪತ್ರ ಸಿಂಧುವಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ನಾಮಪತ್ರ, ಅಫಿಡವಿಟ್ ಸಲ್ಲಿಕೆ ಆದ ಬಳಿಕ ಅದನ್ನು ಪರಿಶೀಲನೆ ಮಾಡುತ್ತೇವೆ. ಅಭ್ಯರ್ಥಿಗಳಿಗೆ ಚೆಕ್ ಲಿಸ್ಟ್ ನೋಟಿಸ್ ನೀಡಿ, ಯಾವುದೇ ಅಭ್ಯರ್ಥಿಗಳು ನಾಮಪತ್ರದಲ್ಲಿ ಕಲಂ ಭರ್ತಿ ಮಾಡದೆ ಇದ್ದರೆ, ಅವರ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.

ಮಾರ್ಚ್ 27 ರಂದು 11 ಗಂಟೆ ಒಳಗೆ ಸರಿಯಾದ ಫಾರ್ಮ್ ನೀಡಬೇಕಿತ್ತು. ಇದನ್ನ ಚುನಾವಣಾ ಆಯೋಗವೇ ಮಾಡಿರುವ ಕಾನೂನಿನ ನಿಯಮವಾಗಿದೆ. ನಿಖಿಲ್ ಅವರ ನಾಮಪತ್ರದಲ್ಲಿ ಫಾರ್ಮ್ 26 ತಪ್ಪಿದ್ದ ಹಿನ್ನೆಲೆ ಅವರಿಗೂ ಚೆಕ್ ಲಿಸ್ಟ್ ಕೊಟ್ಟಿದ್ದು, ಫಾರ್ಮ್ 26 ನಲ್ಲಿ ಎಚ್‍ಯುಎಫ್‍ಎ, ಬಿ ಕಲಂ ಭರ್ತಿ ಮಾಡದೆ ಬಿಟ್ಟಿದ್ದರು. ನಾವು ಚೆಕ್ ಲಿಸ್ಟ್ ಕೊಟ್ಟ ಮೇಲೆ ಅಂದರೆ ಮಾರ್ಚ್ 27 ರಂದು 10 ಗಂಟೆಗೆ ನಿಖಿಲ್ ಹೊಸ ಫಾರ್ಮ್ ಭರ್ತಿ ಮಾಡಿ ರಿವೈಸ್ಡ್ ಅಫಿಡವಿಟ್ ಸಲ್ಲಿಸಿ ಹೋಗಿದ್ದಾರೆ. ಹೀಗಾಗಿ ನಿಖಿಲ್ ನಾಮಪತ್ರ ಸಿಂಧುವಾಗಿದೆ. ಅಸಿಂಧು ಆಗುತ್ತೆ ಎಂಬುವುದು ಊಹಾಪೋಹ ಅಷ್ಟೇ ಎಂದು ವಿವರಣೆ ನೀಡಿದರು.

ಈ ಬಾರಿ ನಿಖಿಲ್ ಮಾತ್ರವಲ್ಲದೇ ನಾಮಪತ್ರ ಸಲ್ಲಿಕೆ ಮಾಡಿದ್ದ ಮೂವರು ಅಭ್ಯರ್ಥಿಗಳ ಕೂಡ ಕೆಲ ಕಲಂ ಭರ್ತಿ ಮಾಡದೆ ಬಿಟ್ಟಿದ್ದರು. ಅವರಿಗೂ ಕೂಡ ಚೆಕ್ ಲಿಸ್ಟ್ ನೀಡಿ ಹೊಸ ಅಫಿಡವಿಟ್ ಪಡೆದಿದ್ದೇವೆ. ಚುನಾವಣಾ ಆಯೋಗದ ಕಾನೂನಿನ ಅಡಿ ಇದಕ್ಕೆ ಅವಕಾಶವಿದೆ. ನಾಮಪತ್ರ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲ ಕೂಡ ಇಲ್ಲ. ಚುನಾವಣಾ ಆಯೋಗದಿಂದ ಇಬ್ಬರು ಅಧಿಕಾರಿಗಳು ಪರಿಶೀಲನೆಗೆ ಇರುತ್ತಾರೆ, ಅವರೇ ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಕೂಡ ನೀಡುತ್ತಾರೆ ಎಂದು ತಿಳಿಸಿದರು.

ಈ ಬಾರಿಯ ಮಂಡ್ಯ ಚುನಾವಣೆ ತುಂಬಾ ಕಠಿಣವಾಗಿದ್ದು, ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಪರ ನಾವು ಕಾರ್ಯನಿರ್ವಹಿಸುತ್ತಿಲ್ಲ. ಈ ಹಿಂದೆಯೂ ಕೂಡ ಹಲವಾರು ಚುನಾವಣೆಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದು, ಕಾನೂನು ಬದ್ಧವಾಗಿ ಚುನಾವಣೆ ನಡೆಸುತ್ತೆವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *