ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗುವ ಪ್ಲಾನ್ ಇದೆ: ನಿಖಿಲ್ ಕುಮಾರಸ್ವಾಮಿ

Public TV
2 Min Read

ಚಿಕ್ಕಬಳ್ಳಾಪುರ: ನಾನು ಜೀವನದಲ್ಲಿ ಏನನ್ನೂ ಪ್ಲಾನ್ ಮಾಡಿದವನಲ್ಲ. ಆದ್ರೆ ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗುವ ಪ್ಲಾನ್ ಇದೆ ಎಂದು ಚಿಕ್ಕಬಳ್ಳಾಪುರ ನಗರದ ಬಾಲಾಜಿ ಚಿತ್ರಮಂದಿರದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಹೇಳಿದರು.

‘ರೈಡರ್’ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆ ಬಾಲಾಜಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ನಿಖಿಲ್ ಅವರು, ಕೆಲಕಾಲ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಣೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲ ಕಡೆ ‘ರೈಡರ್’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಡು, ನುಡಿ ವಿಚಾರಕ್ಕೆ ಬಂದ್ರೆ ನಾನು ಜೊತೆಯಾಗಿರುತ್ತೇನೆ: ನಿಖಿಲ್ ಕುಮಾರಸ್ವಾಮಿ

ಕುಟುಂಬಸ್ಥರ ಜೊತೆ ಇಂದು ಸಂಜೆ ಒರಾಯನ್ ಮಾಲ್ ನಲ್ಲಿ ಸಿನಿಮಾ ವೀಕ್ಷಣೆ ಮಾಡಲಿದ್ದೇನೆ. ತಂದೆ-ತಾಯಿ, ತಾತ-ಅಜ್ಜಿ ಸಂಜೆ ಸಿನಿಮಾ ನೋಡಲು ಬರ್ತಿದ್ದಾರೆ ಎಂದರು. ಇದೇ ವೇಳೆ ಎಂಇಎಸ್ ಪುಂಡಾಟಿಕೆ ಕುರಿತು ಮಾತನಾಡಿದ್ದು, ಎಂಇಎಸ್ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದೆ ಈ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುಬೇಕು ಎಂದು ಆಗ್ರಹಿಸಿದರು.

ಜವಾಬ್ದಾರಿಯುತ ನಾಗರೀಕನಾಗಿ ಬಂದ್ ಕೇವಲ ಮಾಧ್ಯಮಗಳ ಗಮನ ಸೆಳೆಯುವ ಕೆಲಸ ಆಗಬಾರದು. ಉಪಯೋಗ ಅಗೋದಿದ್ರೆ ಬಂದ್ ಮುಂದುವರೆಸಲಿ. ಶುಕ್ರವಾರ ಬಹಳ ಸಿನಿಮಾಗಳು ರಿಲೀಸ್ ಆಗಲಿವೆ. ಬಂದ್ ಆದ್ರೆ ಸಿನಿಮಾಗಳಿಗೆ ಹೊಡೆತ ಬೀಳಲಿದೆ. ಜನಕ್ಕೆ ಒಳ್ಳೆಯದಾಗುತ್ತೆ ಅನ್ನೋದಾದ್ರೆ ಬಂದ್ ಮಾಡಿ ಎಂದು ಮನವಿ ಮಾಡಿದರು.

ನಾನು ಸಿನಿಮಾರಂಗದಲ್ಲಿ ಉತ್ತಮ ಯಶಸ್ವಿ ನಟನಾಗಬೇಕು. ನಾನು ಪ್ಲಾನ್ ಮಾಡಿಕೊಂಡು ಜೀವನ ಮಾಡಿಲ್ಲ. ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗಬೇಕು ಎಂಬ ಪ್ಲಾನ್ ಇದೆ. ಮುಂದಿನ ಚುನಾವಣೆ ಬಗ್ಗೆ ರಾಜಕೀಯ ವೇದಿಕೆಗಳಲ್ಲಿ ಚರ್ಚೆ ಮಾಡ್ತೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ. 2023ರ ಚುನಾವಣೆಯಲ್ಲಿ ನಮ್ಮ ಗುರಿ ನಮ್ಮ ಉದ್ದೇಶ ಬೇರೆ. ನಾನು ಎಂಎಲ್‍ಎ ಆಗೋದು ಎಂಪಿ ಆಗೋದು ಮುಂದಿನ ದಿನಗಳಲ್ಲಿ ಪ್ರಸ್ತಾಪ ಮಾಡ್ತೇನೆ. ಅಂತಹ ಸಂದರ್ಭ ಬಂದ್ರೆ ಜನ ಆ ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಚಿತ್ರಮಂದಿರದಲ್ಲಿ ನಿಖಿಲ್ ಅಭಿಮಾನಿಗಳ ಜೊತೆ ಕಾಲಕಳೆಯಬೇಕಾದರೆ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಂಡು ಮುತ್ತು ನೀಡಿ, ಕೈ ಕುಲುಕಿ ವಿಶ್ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *