ನಿಖಿಲ್ ಸ್ಪರ್ಧೆ ಹೊತ್ತಲ್ಲೇ ‘ಕೈ’ ತ್ರಿಶೂಲ ವ್ಯೂಹ

Public TV
1 Min Read

ಬೆಂಗಳೂರು: ಕೆ.ಆರ್.ಪೇಟೆಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧೆ ಮಾಡುವ ಸಿದ್ಧತೆ ನಡೆಯುತ್ತಿರುವಾಗಲೇ ಜೆಡಿಎಸ್ ವಿರೋಧಿಗಳಾದ ಮೂವರು ಕಾಂಗ್ರೆಸ್ ವೀಕ್ಷಕರಾಗಿದ್ದಾರೆ. ಈ ಮೂಲಕ ಕಾಂಗ್ರೆಸ್‍ನಿಂದ ತ್ರಿಶೂಲ ವ್ಯೂಹ ರಚನೆಯಾಗುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.

ಉಪಚುನಾವಣೆಗೆ ಕಾಂಗ್ರೆಸ್ಸಿನಿಂದಲೂ ಭರ್ಜರಿ ತಯಾರಿ ನಡೆಯುತ್ತಿದ್ದು, ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಈ ಮೂವರು ಕಾಂಗ್ರೆಸ್ಸಿನ ವೀಕ್ಷಕರಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಮೈತ್ರಿ ಬೇಡವೇ ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದಾರಾ ಎಂಬ ಅನುಮಾನ ಮೂಡಿದೆ.

ಒಟ್ಟು 17 ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಹೀಗಾಗಿ ಕಾಂಗ್ರೆಸ್ 17 ಕ್ಷೇತ್ರಗಳಿಗೆ ವೀಕ್ಷಕರನ್ನ ನೇಮಿಸಿ ಅಭ್ಯರ್ಥಿ ಆಯ್ಕೆಗೆ ಮುಂದಾಗಿದ್ದು, ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕಡು ವಿರೋಧಿಗಳನ್ನು ಸಿದ್ದರಾಮಯ್ಯ ಮುಂದೆ ಬಿಟ್ಟಿದ್ದಾರೆ ಎನ್ನಲಾಗಿದೆ. ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡಗೆ ಸಿದ್ದರಾಯಮ್ಯ ಮಣೆ ಹಾಕಿದ್ದಾರೆ. ಈ ಮೂವರೂ ವೀಕ್ಷಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಲೇಬೇಕು ಎಂದು ವರದಿ ಕೊಟ್ಟರೆ, ಅದನ್ನು ಹೈಕಮಾಂಡ್‍ಗೆ ತೆಗೆದುಕೊಂಡು ಹೋಗಿ ಅಲ್ಲಿನ ಸ್ಥಳೀಯ ನಾಯಕರು ವರದಿ ಕೊಟ್ಟಿದ್ದಾರೆ ಎಂದು ಹೇಳಿ ದೋಸ್ತಿಯನ್ನು ಖತಂ ಮಾಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಒಂದು ವೇಳೆ ದೋಸ್ತಿ ಖತಂ ಆದರೆ ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲಿರುವ ನಿಖಿಲ್ ಕುಮಾರಸ್ವಾಮಿಗೆ ಮತ್ತೆ ಚುನಾವಣಾ ಅಖಾಡ ಟಫ್ ಆಗಲಿದೆ. ಹೀಗೆ ಚಲುಚರಾಯಸ್ವಾಮಿ, ನರೇಂದ್ರ ಸ್ವಾಮಿ ಹಾಗೂ ರಮೇಶ್ ಬಂಡಿಸಿದ್ದೇಗೌಡ ಅನ್ನೋ ತ್ರಿಶೂಲ ವ್ಯೂಹ ನಿಖಿಲ್‍ರನ್ನ ಸುತ್ತುವರಿದಿದೆ.

Share This Article
Leave a Comment

Leave a Reply

Your email address will not be published. Required fields are marked *