ನಿಖಿಲ್ ಕುಮಾರ್ ಸ್ವಾಮಿ ರಾಜಕೀಯದಲ್ಲಿ ಬ್ಯುಸಿ : ‘ಯದುವೀರ’ ಸಿನಿಮಾ ತಟಸ್ಥ

Public TV
1 Min Read

ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ನಿಖಿಲ್ ಕುಮಾರ್ ಸ್ವಾಮಿ ನಟನೆಯ ಯದುವೀರ ಸಿನಿಮಾದ ಶೂಟಿಂಗ್ ಶುರುವಾಗಬೇಕಿತ್ತು. ನಿಖಿಲ್ ಅವರ ಹುಟ್ಟು ಹಬ್ಬದಂದು ಗ್ರ್ಯಾಂಡ್ ಆಗಿಯೇ ಯದುವೀರ ಸಿನಿಮಾದ ಫಸ್ಟ್ ಲುಕ್ ರಿಲೀಸ್‍ ಮಾಡಿತ್ತು ಚಿತ್ರತಂಡ. ಅದಾಗಿ ಹಲವು ತಿಂಗಳು ಕಳೆದರೂ, ಇನ್ನೂ ಸಿನಿಮಾದ ಶೂಟಿಂಗ್ ಶುರುವಾಗಿಲ್ಲ. ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

ಈ ಸಿನಿಮಾವನ್ನು ಮಂಜು ಅಥರ್ವ್ ಅವರು ನಿರ್ದೇಶನ ಮಾಡಬೇಕಿತ್ತು. ಈ ನಿರ್ದೇಶಕ ಚೊಚ್ಚಲು ಸಿನಿಮಾ ಕೂಡ ಇದಾಗಿತ್ತು. ಅದ್ಭುತವಾಗಿ ಕತೆ ಬರೆದ ಕಾರಣಕ್ಕಾಗಿ ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿತ್ತು. ಹೀಗಾಗಿ ದೊಡ್ಡ ಪ್ರೊಡಕ್ಷನ್ ಹೌಸ್ ನಿಂದ ತಮ್ಮ ಚೊಚ್ಚಲು ಸಿನಿಮಾ ಬರಲಿದೆ ಎಂದು ಕನಸು ಕಂಡಿದ್ದ ನಿರ್ದೇಶಕನಿಗೆ ಸಹಜವಾಗಿಯೇ ನಿರಾಸೆ ಆಗಿದೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

ಹಾಗಂತ ಸಿನಿಮಾ ಸಂಪೂರ್ಣ ನಿಲ್ಲಿಸಿಯೇ ಬಿಡುತ್ತಾರಾ? ಎನ್ನುವುದಕ್ಕೆ ಕೆವಿಎನ್ ಪ್ರೊಡಕ್ಷನ್ ಹೌಸ್ ನಿಂದ ಯಾವುದೇ ಸ್ಪಷ್ಟ ಉತ್ತರವಿಲ್ಲ. ಆದರೆ, ಕಳೆದ ಐದು ತಿಂಗಳಿಂದ ಯದುವೀರ ಬಗ್ಗೆ ಯಾವುದೇ ಅಪ್ ಡೇಟ್ ಕೂಡ ಕೊಟ್ಟಿಲ್ಲ. ಆದರೆ, ಕೆವಿಎನ್ ಮತ್ತೊಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಧ್ರುವ ಸರ್ಜಾ ಈ ಚಿತ್ರಕ್ಕೆ ಹೀರೋ, ಪ್ರೇಮ್ ನಿರ್ದೇಶಕ. ಸದ್ಯ ಈ ಸಿನಿಮಾದ ಕೆಲಸಗಳು ನಡೆಯುತ್ತಿವೆ.

ಮುಂದಿನ ವಿಧಾನ ಸಭೆ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ನಿಖಿಲ್ ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ಯ ಸುತ್ತುತ್ತಿದ್ದಾರೆ. ಪಕ್ಷ ಕಟ್ಟುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹೀಗಾಗಿ ನಿಖಿಲ್ ಸದ್ಯ ಸಿನಿಮಾ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಆದರೆ, ಈ ಕುರಿತು ನಿಖಿಲ್ ಕುಮಾರ್ ಈವರೆಗೂ ಯದುವೀರ ಸಿನಿಮಾದ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಒಟ್ಟಿನಲ್ಲಿ ಸದ್ಯಕ್ಕಂತೂ ಯದುವೀರ ಸಿನಿಮಾದ ಶೂಟಿಂಗ್ ನಡೆಯುವುದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *