ಇಂದು ಮಂಡ್ಯ ಜನತೆಯನ್ನ ಮಿಸ್ ಮಾಡಿಕೊಳ್ತಿದ್ದೇನೆ: ನಿಖಿಲ್

Public TV
1 Min Read

– ಸಾರ್ವಜನಿಕ ಬದುಕಿಗೆ ಬಂದು ಜವಾಬ್ದಾರಿ ಹೆಚ್ಚಾಗಿದೆ
– ರಾಜಕೀಯ ಪ್ರೇರಿತ ದಾಳಿ

ಮಂಡ್ಯ: ಒಂದು ದಿನ ಪ್ರಚಾರಕ್ಕೆ ಬ್ರೇಕ್ ಕೊಟ್ಟು ಹಬ್ಬ ಆಚರಿಸಲು ಬೆಂಗಳೂರಿಗೆ ಹೋಗುತ್ತಿದ್ದೇನೆ. ಈ ಮೂಲಕ ಮಂಡ್ಯ ಜನತೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯುಗಾದಿ ಹಬ್ಬವನ್ನು ಕುಟುಂಬದ ಜೊತೆ ಆಚರಿಸಲು ಒಂದು ದಿನ ಪ್ರಚಾರಕ್ಕೆ ಬ್ರೇಕ್ ಹಾಕಿ ಬೆಂಗಳೂರಿಗೆ ಹೋಗುತ್ತಿದ್ದೇನೆ. ಅಮ್ಮ ಕರೆಯುತ್ತಿದ್ದಾರೆ. ಹೀಗಾಗಿ ಪೂಜೆ ಮಾಡಲು ಹೋಗುತ್ತಿದ್ದೇನೆ. ಇದರಿಂದ ಒಂದು ದಿನಕ್ಕೆ ಚುನಾವಣಾ ಪ್ರಚಾರ ಮತ್ತು ಮಂಡ್ಯ ಜನರ ಪ್ರೀತಿ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ಮನೆಯಲ್ಲಿ ಪೂಜೆ ಮಾಡಿ ತಂದೆ, ತಾಯಿ, ಅಜ್ಜಿ, ತಾತ ಆಶೀರ್ವಾದ ಪಡೆದು ಅವರ ಜೊತೆ ಹಬ್ಬ ಆಚರಿಸುತ್ತೇನೆ ಎಂದು ಸಮಸ್ತ ಜನರಿಗೂ ಯುಗಾದಿ ಹಬ್ಬದ ಶುಭಾಶಯವನ್ನು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಕಳೆದ 25 ದಿನದಿಂದ ನಾವು ಪ್ರತಿದಿನ ಭೇಟಿ ಮಾಡುತ್ತಿದ್ದೇವೆ. ಈ ಮೂಲಕ ಒಂದೇ ಕುಟುಂಬದವರಂತೆ ಇದ್ದೇನೆ. ರೈತರು ಬಡವರು ಎಲ್ಲರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಮಾರಣ್ಣ ಮತ್ತು ದೇವೇಗೌಡರ ಪ್ರತಿನಿಧಿಯಾಗಿ ಬಂದಿದ್ದೇನೆ. ಈ ಮೂಲಕ ಪ್ರತಿಯೊಬ್ಬರ ವಿಶ್ವಾಸದಿಂದ ಈ ಯುಗಾದಿಯಲ್ಲಿ ಜವಾಬ್ದಾರಿ ಹೆಚ್ಚಾಗಿದೆ. ಅದನ್ನು ಸರಿಯಾದ ದಾರಿಯಲ್ಲಿ ನಿಭಾಯಿಸಲು ಕೆಲಸ ಮಾಡುತ್ತೇನೆ. ಸಾರ್ವಜನಿಕ ಬದುಕಿಗೆ ಬಂದು ನನ್ನ ಜವಾಬ್ದಾರಿ ಹೆಚ್ಚಾಗಿದೆ. ಜನರ ನಿರೀಕ್ಷೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದರು.

ಚುನಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರ ಮನೆಗೆ ಹೋಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಇದೇ ತಿಂಗಳು 8 ರಿಂದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಬರುತ್ತಾರೆ ಎಂದು ನಿಖಿಲ್ ಹೇಳಿದ್ದಾರೆ.

ಇದೇ ವೇಳೆ ಐಟಿ ದಾಳಿ ಬಗ್ಗೆ ಮಾತನಾಡಿದ ಅವರು, ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದೆ. ನಮ್ಮನ್ನು ಕುಗ್ಗಿಸಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಯಾರೂ ಇಂತಹ ವಿಚಾರಕ್ಕೆ ಭಯಪಟ್ಟು ಹಿಂದೆ ಸರಿಯಲ್ಲ. ಇನ್ನೂ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *