ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಕೇಸ್: ಎನ್‍ಐಎಯಿಂದ ಚಾರ್ಜ್ ಶೀಟ್ ಸಲ್ಲಿಕೆ

Public TV
1 Min Read

ಬೆಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಸಂಬಂಧ ಎನ್‍ಐಎ ಅಧಿಕಾರಿಗಳು ಬೆಂಗಳೂರಿನ ಎನ್‍ಐಎ ವಿಶೇಷ ಕೋರ್ಟ್‍ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ಆರೋಪಿಗಳಾದ ಇರ್ಫಾನ್ ಪಾಷಾ, ವಸೀಮ್ ಅಹ್ಮದ್, ಮಹ್ಮದ್ ಸಾದಿಕ್, ಮಹ್ಮದ್ ಮುಜೀಬುಲ್ಲ, ಆಸೀಮ್ ಷರೀಫ್ ವಿರುದ್ಧ  ಎನ್‍ಐಎ ಚಾರ್ಜ್ ಶೀಟ್ ಸಲ್ಲಿಸಿದೆ.

ಚಾರ್ಜ್ ಶೀಟ್ ನಲ್ಲಿ ಏನಿದೆ?
ಆರೋಪಿಗಳು ಪಿಎಫ್‍ಐ ಸಂಘಟನೆಯ ಸದಸ್ಯರು ಎಂದು ಚಾರ್ಜ್ ಶೀಟ್ ನಲ್ಲಿ ಸ್ಪಷ್ಟಪಡಿಸಿದ ಎನ್‍ಐಎ, ಮೃತ ರುದ್ರೇಶ್ ಮೇಲೆ ಈ ಐವರಿಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಆದರೆ ಅಂದು ಯಾರಾದರೂ ಇಬ್ಬರು ಆರ್‍ಎಸ್‍ಎಸ್ ಮುಖಂಡರನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದರು. ಆದ್ರೆ ಯಾರನ್ನು ಕೊಲೆ ಮಾಡಬೇಕು ಅನ್ನೋ ಸ್ಪಷ್ಟ ಚಿತ್ರಣ ಇರಲಿಲ್ಲ. ಕೊಲೆ ಮಾಡುವ ಮುನ್ನ ಎಲ್ಲರೂ ಇಲ್ಲಿನ ಆಸ್ಕಾ, ಹಾಗೂ ಚೋಟಾ ಚಾರ್ಮಿನಾರ್ ಮಸೀದಿಯ ಬಳಿ ಗುಪ್ತ ಮಾತುಕತೆ ನಡೆಸಿದ್ರು ಅಂತಾ ಖಚಿತ ಪಡಿಸಿದೆ.

ಸಮವಸ್ತ್ರದಲ್ಲಿ ಮುಖಂಡನ ಕೊಲೆ ನಡೆದರೆ ಆರ್ ಎಸ್ ಎಸ್ ಸಂಘಟನೆಗೆ ಸೇರಲು ಜನ ಹೆದರುತ್ತಾರೆ ಎಂಬ ಉದ್ದೇಶವೂ ಇತ್ತು ಮತ್ತು ಮುಸ್ಲಿಮ್ ಹಾಗೂ ಜಿಹಾದಿಯ ಪರಮ ವಿರೋಧಿಯನ್ನು ಕೊಲೆಗೈಯುವುದೇ ಆಗಿತ್ತು. ಪಿಎಫ್‍ಐ ಸಭೆ ಕರೆದು ಮುಸ್ಲಿಂ ವಿರುದ್ಧ ಮಾತನಾಡುತ್ತಿದ್ದವರ ವಿಡಿಯೋ ಸಿಡಿ ಪ್ಲೇ ಮಾಡುತ್ತಿದ್ದರು. ಅದನ್ನ ನೋಡಿ ಪ್ರಚೋದನೆಯಾಗುತ್ತಿದ್ದ ವ್ಯಕ್ತಿಗಳನ್ನು ಕೃತ್ಯ ಎಸಗಲು ಆಯ್ಕೆ ಮಾಡುತ್ತಿದ್ದರು ಎಂದು ಎನ್‍ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.

ಏನಿದು ಪ್ರಕರಣ?
2016ರ ಅಕ್ಟೋಬರ್ 16 ರಂದು ಬೆಳಗ್ಗೆ ಪಥ ಸಂಚಲನ ಮುಗಿಸಿ ಮನೆಗೆ ಬರುತ್ತಿರುವಾಗ 35 ವರ್ಷದ ರುದ್ರೇಶ್ ಅವರು ಶಿವಾಜಿನಗರದಲ್ಲಿರುವ ಕಾಮರಾಜ ರಸ್ತೆಯಲ್ಲಿರುವ ಶ್ರೀನಿವಾಸ ಮೆಡಿಕಲ್ ಸ್ಟೋರ್ ಎದುರು ಸ್ನೇಹಿತರ ಜತೆ ನಿಂತಿದ್ದಾಗ ಬಳಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣ ಸಂಬಂಧ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆರನೇ ಆರೋಪಿ ಈಗಲೂ ತಲೆಮರೆಸಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *