ಮುಂದಿನ ಸೆಮಿಸ್ಟರ್‍ನಿಂದ ಸಮಸ್ಯೆಗಳು ಪರಿಹಾರ: ವಿಟಿಯು ಕುಲಪತಿ

Public TV
2 Min Read

ಬೆಂಗಳೂರು/ಕೊಪ್ಪಳ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಪರೀಕ್ಷಾ ವಿಧಾನದಲ್ಲಿ ಹೊಸ ಪದ್ದತಿ ಅಳವಡಿಕೆಯಿಂದ ಫಲಿತಾಂಶ ತಡವಾಗಿದೆ. ಮುಂದಿನ ಸೆಮಿಸ್ಟರ್‍ನಿಂದ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಕುಲಪತಿ ಡಾ. ಕರಿಸಿದ್ದಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗ ಬಹುತೇಕ ಎಲ್ಲ ಫಲಿತಾಂಶ ಪ್ರಕಟವಾಗಿದೆ. ಮುಂದಿನ ಸೆಮಿಸ್ಟರ್ ನಿಂದ ಸಮಸ್ಯೆ ಪರಿಹಾರವಾಗಲಿದೆ. ರಿ ವಾಲ್ಯುವೇಷನ್ ಶುಲ್ಕ ಮತ್ತು ಎಕ್ಸಾಂ ಶುಲ್ಕವನ್ನು ಒಟ್ಟಿಗೆ ಕಟ್ಟಿಸಿಕೊಳ್ಳುತ್ತಿದ್ದೇವೆ. ರಿ ವಾಲ್ಯುವೇಷನಲ್ಲಿ ಪಾಸ್ ಆಗಿದ್ದರೆ ಹಣವನ್ನು ವಾಪಸ್ ಮಾಡುತ್ತೇವೆ ಎಂದು ತಿಳಿಸಿದರು.

ವಿಟಿಯುನಲ್ಲಿ ಭ್ರಷ್ಟಚಾರ ನಡೆಯುತ್ತಿಲ್ಲ. ಅಷ್ಟೇ ಅಲ್ಲದೇ ವಿವಿಯನ್ನು ವಿಟಿಯು ಮುಚ್ಚೋ ಪರಿಸ್ಥಿತಿ ಬಂದಿಲ್ಲ. ವಿಟಿಯು ನಡೆಸಲು ಸದ್ಯ ಯಾವುದೇ ಹಣದ ಸಮಸ್ಯೆ ಇಲ್ಲ. ವಿಯನ್ನು ಮುಚ್ಚೋದು ಸರ್ಕಾರಕ್ಕೆ ಬಿಟ್ಟ ವಿಚಾರ. ಉನ್ನತ ಶಿಕ್ಷಣ ಸಚಿವರು ಅದ್ಯಾಕೇ ಹಾಗೇ ಹೇಳಿದರೋ ಅವರನ್ನೇ ಕೇಳಿ ಎಂದು ಉತ್ತರಿಸಿದರು.

ಹಣ ಬಿಡುಗಡೆ ಮಾಡಿ: ವಿಟಿಯು ಅಕೌಂಟ್ ಬ್ಯಾಲೆನ್ಸ್ ನಲ್ಲಿ ಕೇವಲ 30 ಕೋಟಿ ರೂ. ಇದೆ. ವಿಟಿಯು ಸಿಬ್ಬಂದಿ ಸಂಬಳ ಎಲ್ಲ ಸೇರಿ ವರ್ಷಕ್ಕೆ 72 ಕೋಟಿ ರೂ. ಬೇಕಿದೆ. ಈಗ 42 ಕೋಟಿ ಖೋತಾ ಬಜೆಟ್ ನಲ್ಲಿ ವಿವಿ ನಡೆಯುತ್ತಿದೆ. ಕಾಲೇಜುಗಳ ಅಫಿಲೇಷನ್ ಶುಲ್ಕಇತ್ಯಾದಿಗಳಿಂದ ವರ್ಷಕ್ಕೆ 110 ಕೋಟಿ ರೂ. ಬರುತ್ತದೆ. ಹೀಗಾಗಿ  30 ಕೋಟಿ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡುವಂತೆ ವಿಟಿಯು ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ.

ಪರೀಕ್ಷೆ ಮುಂದೂಡಿಕೆ: ವಿದ್ಯಾರ್ಥಿಗಳ ವಿರೋಧದಿಂದಾಗಿ ವಿಟಿಯು ಈಗ ಪರೀಕ್ಷಾ ದಿನಾಂಕ ಮುಂದೂಡಿದೆ. ಜೂನ್ 5 ರಿಂದ ಪ್ರಾರಂಭವಾಗಬೇಕಿದ್ದ ಬಿಇ ಕೊನೆಯ ವರ್ಷದ ಪರೀಕ್ಷೆ ಜೂನ್ 12 ರಿಂದ ಪ್ರಾರಂಭವಾಗಲಿದೆ. ಜೂನ್ 16 ರಿಂದ ಪ್ರಾರಂಭವಾಗಬೇಕಿದ್ದ ಪದವಿ, ಸ್ನಾತಕೋತ್ತರ ಪದವಿ, ಪ್ರಾಜೆಕ್ಟ್, ಥಿಯರಿ, ಪರೀಕ್ಷೆಗಳು ಜೂನ್ 23 ರಿಂದ ಪ್ರಾರಂಭವಾಗಲಿದೆ. ಹೊಸ ವೇಳಾಪಟ್ಟಿ ಜೂನ್ 3 ರಂದು ಪ್ರಕಟವಾಗಲಿದೆ.

ಮುಚ್ಚುವ ಹಂತಕ್ಕೆ ಬಂದಿದೆ: ಕೇಂದ್ರ ಆದಾಯ ತೆರಿಗೆ ಇಲಾಖೆ ತಪ್ಪಿನಿಂದ ಬೆಳಗಾವಿ ವಿಟಿಯು ಮುಚ್ಚುವ ಹಂತಕ್ಕೆ ಬಂದಿದೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ಎಲ್ಲ ಡೀಮ್ಡ್ ವಿವಿಗಳಿಗೂ ತೆರಿಗೆ ವಿನಾಯಿತಿ ನೀಡಿದೆ. ಆದ್ರೆ, ಕೇಂದ್ರ ಆದಾಯ ತೆರಿಗೆ ಇಲಾಖೆ ವಿಟಿಯು 12ಎ ಪ್ರಮಾಣಪತ್ರ ಹೊಂದಿಲ್ಲವೆಂದು ಅಂತ ಹೇಳಿ ವಿವಿಯ ಆದಾಯ 441 ಕೋಟಿ ಹಣ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಉನ್ನತ ಶಿಕ್ಷಣ ಸಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಸರ್ಕಾರಿ ವಿವಿ ಆದಾಯ ತೆರಿಗೆ ಕಟ್ಟಬೇಕು ಅಂತ ಆದಾಯ ತೆರಿಗೆ ಹೇಳಿರುವ ದೇಶದ ಮೊದಲ ಪ್ರಕರಣವಿದು. ಈ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದರೂ ಸ್ಪಂದಿಸುತ್ತಿಲ್ಲ. ಅವರು ಅಧಿಕಾರಿಗಳ ಮಾತು ಕೇಳುತ್ತಿದ್ದಾರೆ. ಹಾಗಾಗಿ ವಿವಿಗೆ ಹಣ ವಾಪಾಸ್ ನೀಡಲು ಸಹಕರಿಸುತ್ತಿಲ್ಲ. 127 ಕೋಟಿ ದಂಡ ಕಟ್ಟ ಬೇಕು ಎಂದು ಹೇಳಿ ತೆರಿಗೆ ಇಲಾಖೆ ತಡೆಹಿಡಿದಿದೆ. ಈಗ ಕೇಂದ್ರ ಆದಾಯ ತೆರಿಗೆ ಇಲಾಖೆ ವಿರುದ್ಧ ರಾಜ್ಯ ಸರ್ಕಾರ ಕೋರ್ಟ್ ಮೊರೆ ಹೋಗಲಿದೆ ಎಂದು ತಿಳಿಸಿದರು.

ವಿವಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಲು ನಮಗೆ ಯಾವ ಅಧಿಕಾರ ಇಲ್ಲ. ವಿವಿ ಕಾಯ್ದೆಯಲ್ಲಿ ರಾಜ್ಯ ಸರಕಾರ ಕ್ಕೆ ಯಾವುದೇ ಅಧಿಕಾರ ವಿಲ್ಲ. ವಿವಿ ಕಾಯ್ದೆಗೆ ಬದಲಾವಣೆ ತರುವ ಮಸೂದೆಯನ್ನು ಬರುವ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.

ಇದನ್ನೂ ಓದಿ: ಪರೀಕ್ಷೆ ನಡೆಸಲು ಹಣವಿಲ್ಲ, ಪರಿಸ್ಥಿತಿ ಮುಂದುವರಿದ್ರೆ ವಿಟಿಯು ಮುಚ್ಚಬೇಕಾದಿತು: ಬಸವರಾಜರಾಯ ರೆಡ್ಡಿ

Share This Article
Leave a Comment

Leave a Reply

Your email address will not be published. Required fields are marked *