ಸುದೀಪ್ ‘ಕಬ್ಜ’ ಚಿತ್ರದಿಂದ ಹೊರ ನಡೆದಿರುವ ಸುದ್ದಿ ಸುಳ್ಳು : ನಿರ್ದೇಶಕ ಆರ್.ಚಂದ್ರು

Public TV
2 Min Read

ಹೆಸರಾಂತ ನಿರ್ದೇಶಕ ಆರ್.ಚಂದ್ರು ಅವರ ‘ಕಬ್ಜ’ ಸಿನಿಮಾದಿಂದ ಸುದೀಪ್ ಅವರು ಹೊರ ನಡೆದಿದ್ದಾರೆ ಎನ್ನುವ ಸುದ್ದಿ ನೆನ್ನೆಯಿಂದ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿತ್ತು. ಆರ್.ಚಂದ್ರು ಮತ್ತು ಸುದೀಪ್ ನಡುವೆ ಮನಸ್ತಾಪ ಕಾರಣದಿಂದಾಗಿ ಕಿಚ್ಚ ‘ಕಬ್ಜ’ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಇದನ್ನೂ ಓದಿ : ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ

ಸುದೀಪ್ ಮತ್ತು ಉಪೇಂದ್ರ ಕಾಂಬಿನೇಷನ್ ನ ಈ ಸಿನಿಮಾ ಭಾರೀ ಬಜೆಟ್ ನಲ್ಲಿ ಮೂಡಿ ಬರುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಈ ಸಿನಿಮಾದಲ್ಲಿ ಸುದೀಪ್ ಮತ್ತು ಉಪೇಂದ್ರ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಸುದೀಪ್ ಕೂಡ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳು ನಡೆದರೂ, ಕಿಚ್ಚ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನುವುದು ನಾನಾ ರೀತಿಯ ಅನುಮಾನಕ್ಕೂ ಕಾರಣವಾಗಿತ್ತು. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪುರಸ್ಕಾರ

ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಆರ್.ಚಂದ್ರು, “ಎಲ್ಲರಿಗೂ ನಮಸ್ಕಾರ, ನಿನ್ನೆಯಿಂದ ಸುದೀಪ್ ಅವರು ಕಬ್ಜ ಚಿತ್ರತಂಡದಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ಸುದ್ದಿ ಸತ್ಯಕ್ಕೆ ದೂರವಾದದ್ದು. ಕಿಚ್ಚು ಸುದೀಪ್ ಅವರು ಈಗಾಗಲೇ ಕಬ್ಜ ಚಿತ್ರೀಕರಣದಲ್ಲಿ ಪಾಲ್ಗೊಂಡು ನಟಿಸಿದ್ದಾರೆ. ಹಾಗಾಗಿ ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬಾರದು” ಎಂದು ಟ್ವಿಟ್ ಮಾಡಿದ್ದಾರೆ ನಿರ್ದೇಶಕರು. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

ಇಬ್ಬರು ಸ್ಟಾರ್ ನಟರು ಸಿನಿಮಾದಲ್ಲಿ ಇದ್ದಾರೆ ಎಂದರೆ, ಸಿನಿಮಾ ಕುರಿತು ಹೈಪ್ ಕ್ರಿಯೇಟ್ ಆಗುವುದು ಸಹಜ. ಅಲ್ಲದೇ, ಈ ಇಬ್ಬರೂ ಸ್ಟಾರ್ ನಟರು ಈಗಾಗಲೇ ಹಲವು ಚಿತ್ರರಂಗಗಳ ಜತೆ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಕಬ್ಜ ಚಿತ್ರ ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲೇ ತಯಾರಾಗಿದೆ. ಅಷ್ಟೇ ಸದ್ದು ಮಾಡುತ್ತಿದೆ. ಹೀಗಾಗಿ ಕಿಚ್ಚನ ಬಗ್ಗೆ ಗಾಸಿಪ್ ಮೂಡಿದೆ. ಏ.1 ರಿಂದ ಈ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದ್ದರಿಂದ ಅದು ಏಪ್ರಿಲ್ ಫೂಲ್ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ, ಸುದ್ದಿ ಬೇರೆ ರೀತಿಯಲ್ಲಿ ಗಂಭೀರತೆಯನ್ನು ಸೃಷ್ಟಿ ಮಾಡಿತ್ತು. ಹಾಗಾಗಿ ಆರ್.ಚಂದ್ರು ಅವರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *