ವಿವಾಹವಾದ ಪ್ರೇಮ ಪಕ್ಷಿಗಳಿಗೆ ಜೀವ ಭಯ – ರಕ್ಷಣೆ ಕೋರಿ ಎಸ್ಪಿ ಮೊರೆ ಹೋದ ನವ ಜೋಡಿ

Public TV
1 Min Read

ತುಮಕೂರು: ಈ ಯುವ ಜೋಡಿಗಳದ್ದು ಧರ್ಮ ಮೀರಿದ್ದ ಪ್ರೀತಿ. ಇವರಿಬ್ಬರ ಅನುರಾಗಕ್ಕೆ ಹಿಂದೂ-ಮುಸ್ಲಿಂ ಎಂಬ ಧರ್ಮದ ಬೇಧ ಬಂದಿಲ್ಲ. ಅದನ್ನೂ ಮೀರಿ ಮದುವೆಯಾಗಿದ್ದಾರೆ. ಆದರೆ ಈ ಯುವ ಜೋಡಿಗೆ ಈಗ ಜೀವ ಭಯವಿದೆಯಂತೆ. ಹಾಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ.

ಪ್ರೀತಿ ಜಾತಿ ಧರ್ಮ, ಮತ-ಪಂಥವನ್ನೂ ಮೀರಿದ್ದು ಎನ್ನುವುದು ಸಾರ್ವಕಾಲಿಕ ಮಾತು. ಇದೇ ರೀತಿ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಬಾಣಸಂದ್ರದ ಶಿವಶಂಕರ್ ಹಾಗೂ ಮುಸ್ಲಿಂ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಅಕ್ಕಪಕ್ಕದ ಮನೆಯವರಾದ ಈ ಯುವ ಜೋಡಿ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು.

ಕಳೆದ ಸೋಮವಾರ ಹಿಂದೂ ಸಂಪ್ರದಾಯದಂತೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಮದುವೆಯಾದ ವಿಚಾರ ತಿಳಿಯುತ್ತಿದ್ದಂತೆಯೇ ಯುವತಿಯ ಸಂಬಂಧಿಕರು ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಭೀತರಾದ ಶಿವಶಂಕರ್ ಹಾಗೂ ಯುವತಿ ರಕ್ಷಣೆ ಕೋರಿ ಎಸ್ ಪಿ ಮೊರೆ ಹೋಗಿದ್ದಾರೆ.

ಇನ್ನೂ ಶಿವಶಂಕರ್ ಸಾರಿಗೆ ಇಲಾಖೆಯ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಯುವತಿ ಮಾಲ್  ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಮದುವೆಗೆ ಶಿವಶಂಕರ್ ತಂದೆ-ತಾಯಿ ಒಪ್ಪಿಕೊಂಡು ಅನ್ಯಧರ್ಮಿಯ ಸೊಸೆಯನ್ನು ಮನೆತುಂಬಿಸಿಕೊಂಡಿದ್ದಾರೆ.

ಆದರೆ ಯುವತಿ ತಂದೆ- ತಾಯಿ ಈ ಪ್ರೇಮವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಲನ್ ಆಗಿದ್ದಾರೆ. ಹಾಗಾಗಿ ದಿಕ್ಕು ತೋಚದ ನವ ಜೋಡಿ ರಕ್ಷಣೆಗಾಗಿ ಪೊಲೀಸ್ ಇಲಾಖೆ ಮೊರೆ ಹೋಗಿದೆ. ಶಿವಶಂಕರ್ ಮತ್ತು ಯುವತಿಯ ಧರ್ಮ ಬೇಧ ಮೀರಿ ಮದುವೆಯಾಗಿದ್ದಾರೆ. ಭಯದಲ್ಲಿ ಬದುಕುತ್ತಿರೋ ಈ ದಂಪತಿಗೆ ಪೊಲೀಸರು ರಕ್ಷಣೆ ನೀಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *