ಕೊರೊನಾ ಭೀತಿ- ಶಹೀನ್ ಬಾಗ್ ಪ್ರತಿಭಟನಾಕಾರರನ್ನು ಸ್ಥಳಾಂತರಿಸಲು ಸುಪ್ರೀಂಗೆ ಮನವಿ

Public TV
1 Min Read

ನವದೆಹಲಿ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ದೆಹಲಿಯ ಶಹೀನ್ ಬಾಗ್ ಪ್ರತಿಭಟನೆ ಸೇರಿ ದೇಶಾದ್ಯಂತ ನಡೆಯುತ್ತಿರುವ ಇತರೆ ಪ್ರತಿಭಟನೆಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟಿಗೆ ಇಂದು ಅರ್ಜಿ ಸಲ್ಲಿಸಲಾಗಿದೆ.

ಬಿಜೆಪಿ ಮುಖಂಡ ನಂದ್ ಕಿಶೋರ್ ಗರ್ಗ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಪ್ರತಿಭಟನೆಗಳನ್ನು ಸ್ಥಳಾಂತರ ಅಥವಾ ನಿಷೇಧ ಮಾಡುವಂತೆ ಮನವಿ ಮಾಡಿದ್ದಾರೆ. ದೆಹಲಿಯ ಜನಸಂಖ್ಯೆಯು ತುರ್ತು ಪರಿಸ್ಥಿತಿಯಲ್ಲಿದೆ ಮತ್ತು ಸಾಂಕ್ರಾಮಿಕ ಕೊರೊನಾ ವೈರಸ್ ಕಾಯಿಲೆಗೆ ತುತ್ತಾಗುತ್ತಿದೆ. ಶಹೀನ್ ಬಾಗ್ ಸೇರಿದಂತೆ ಎಲ್ಲಾ ರೀತಿಯ ಜನದಟ್ಟಣೆಯ ಸಾರ್ವಜನಿಕ ಸ್ಥಳಗಳಲ್ಲಿ ಈ ಮಾರಕ ವೈರಸ್ ಹರಡುವ ಸಾಧ್ಯತೆ ಇದೆ.

ಹೆಚ್ಚುವರಿಯಾಗಿ ವೈರಸ್ ಹರಡುವಿಕೆಯನ್ನು ತಡೆಯುವ ಸಲುವಾಗಿ ಸರ್ಕಾರವು ಈಗಾಗಲೇ ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ಅನ್ನು ಜಾರಿಗೆ ತಂದಿದೆ. ಮೂಲಭೂತ ಹಕ್ಕನ್ನು ಚಲಾಯಿಸುವ ಹೆಸರಿನಲ್ಲಿ ಪ್ರತಿಭಟನೆಗಳನ್ನು ನಡೆಸಿ ಸಾವಿರಾರು ಮುಗ್ಧ ಜನರ ಪ್ರಾಣಕ್ಕೆ ಅಪಾಯವನ್ನುಂಟು ಮಾಡುವ ಹಕ್ಕನ್ನು ಯಾರೂ ಹೊಂದಿಲ್ಲ. ವಿವಿಧ ನಿರ್ಬಂಧಗಳ ಹೊರತಾಗಿಯೂ, ಶಹೀನ್ ಬಾಗ್ ನಂತಹ ಜನದಟ್ಟಣೆಯ ಸ್ಥಳಗಳನ್ನು ನಿರ್ಬಂಧಗಳ ವ್ಯಾಪ್ತಿಯನ್ನು ಮೀರಿ ಇರಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.

ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಶಹೀನ್ ಬಾಗ್ ಸೇರಿ ಇತರೆಡೆ ನಡೆಯುತ್ತಿರುವ ಪ್ರತಿಭಟನೆಗಳನ್ನು ಸ್ಥಳಾಂತರ ಅಥವಾ ನಿಷೇಧಿಸುವಂತೆ ಅರ್ಜಿಯಲ್ಲಿ ನಂದ್ ಕಿಶೋರ್ ಗರ್ಗ್ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *