ಪಂಜಾಬ್‍ನಲ್ಲಿ ನೂತನ ಸಚಿವ ಸಂಪುಟ ರಚನೆ ಕಸರತ್ತು- ಐವರು ಹಳೆ ಸಚಿವರಿಗೆ ಕೊಕ್

Public TV
2 Min Read

ಚಂಡೀಗಢ: ಪಂಜಾಬ್‍ನಲ್ಲಿ ಚರಣ್‍ಜಿತ್ ಸಿಂಗ್ ಛನ್ನಿ ಸರ್ಕಾರದ ನೂತನ ಸಚಿವ ಸಂಪುಟ ರಚನೆ ಕಸರತ್ತು ಅಂತಿಮಗೊಂಡಿದ್ದು, ಇಂದು ಸಂಜೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಂಪುಟದಲ್ಲಿದ್ದ ಐವರು ಹಳೆ ಸಚಿವರಿಗೆ ಕೊಕ್ ನೀಡುವ ಸಾಧ್ಯತೆ ಇದೆ.

ಈಗಾಗಲೇ ಸಚಿವ ಸಂಪುಟ ಅಂತಿಮಗೊಂಡಿದ್ದು, ಮಾಜಿ ಸಿಎಂ ಅಮರೀಂದರ್ ಸಿಂಗ್ ಸಂಪುಟದಲ್ಲಿದ್ದ ಸಾಧು ಸಿಂಗ್ ಧರ್ಮಸೋತ್, ಸುಂದರ್ ಶ್ಯಾಮ್, ರಾಣಾ ಸೋಡಿ, ಗುರ್ಪ್ರೀತ್ ಕಾಂಗಡ್ ಮತ್ತು ಬಲ್ವೀರ್ ಸಿದುಗೆ ಕೂಕ್ ಸಿಗುವ ಸಾಧ್ಯತೆ ಇದೆ. ಈ ಹಿಂದೆ ಸಂಪುಟದಲ್ಲಿದ್ದ ಎಂಟು ಜನ ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಏಳು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸಂಪುಟ ಸಚಿವರ ಪಟ್ಟಿ ಅಂತಿಮಗೊಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಛನ್ನಿ ಮೇಲೆ 2018ರಲ್ಲಿ ಬಂದಿತ್ತು #MeToo ಆರೋಪ!

ಏಳು ಹೊಸ ಮುಖಗಳಿಗೆ ಮಣೆ:
ಗುರ್‍ಕೀರತ್ ನಾಗ್ರಾ, ಪರ್ಗಟ್ ಸಿಂಗ್, ಸಂಗತ್ ಗಿಲ್ಜಿಯಾ, ರಾಣಾ ಗುರ್‍ಜಿತ್, ರಾಜ್‍ಕುಮಾರ್ ವೆರ್ಕಾ ಮತ್ತು ಅಮರೀಂದರ್ ಸಿಂಗ್, ರಾಜಾ ವಡಿಂಗ್ ಏಳು ಜನರು ಹೊಸದಾಗಿ ಸಂಪುಟ ಸೇರ್ಪಡೆಯಾಗಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಸಂಪುಟ ವಿಸ್ತರಣೆ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಲೆದುತೂಗಿ ನಿರ್ಧಾರಗಳನ್ನು ಕೈಗೊಂಡಿದ್ದು, ಮೂರು ಬಾರಿ ಸಭೆ ನಡೆದರೂ ಪಟ್ಟಿ ಅಂತಿಮಗೊಂಡಿರಲಿಲ್ಲ. ರಾಹುಲ್ ಗಾಂಧಿ ಶುಕ್ರವಾರ ರಾತ್ರಿ ಚರಣ್‍ಜಿತ್ ಸಿಂಗ್ ಜೊತೆ ಮಾತನಾಡಿ ಅಂತಿಮ ಪಟ್ಟಿ ರಚಿಸಿದ್ದಾರೆ. ಈ ನಡುವೆ ಅಮರೀಂದರ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿದ್ದಾರೆ. ಸಂಪುಟದಿಂದ ಕೈಬಿಟ್ಟ ಸಚಿವರು ಅಮರೀಂದರ್ ಜೊತೆಗೂಡಿ ಸರ್ಕಾರ ವಿರುದ್ಧ ತೊಡೆತಟ್ಟುವ ಸಾಧ್ಯತೆ ಹೆಚ್ಚಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಉಳಿದಿದ್ದು, ಇದೀಗ ಅಮರೀಂದರ್ ಸಿಂಗ್ ಮುಂದಿನ ನಡೆ ಕೂಡ ಪಂಜಾಬ್ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂ

ಪಂಜಾಬ್‍ನಲ್ಲಿ ರಾಜಕೀಯ ಬೆಳವಣಿಗೆ ಬಳಿಕ ಅಮರೀಂದರ್ ಸಿಂಗ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಬಳಿಕ ಮುಖ್ಯಮಂತ್ರಿಯಾಗಿ ಚರಣ್‍ಜಿತ್ ಸಿಂಗ್, ಡಿಸಿಎಂ ಆಗಿ ಸುಖ್‍ಜಿಂದರ್ ರಂಧಾವಾ ಮತ್ತು ಓ.ಪಿ. ಸೋನಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಸಚಿವ ಸಂಪುಟ ರಚನೆಗೊಂಡು ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *