ಕಿಸೆಯಲ್ಲಿದ್ದ ಮೊಬೈಲ್ ಬ್ಲ್ಯಾಸ್ಟ್- ಉಡುಪಿಯ ಇಂದ್ರಾಳಿ ರೈಲುನಿಲ್ದಾಣ ರಸ್ತೆಯಲ್ಲಿ ಟ್ರಾಫಿಕ್ ಜಾಮ್!

Public TV
1 Min Read

ಉಡುಪಿ: ಬೈಕ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಬ್ಲಾಸ್ಟ್ ಆಗಿದೆ.

ಮಂಜುನಾಥ್ ಎಂಬವವರು ಬಳಸುತ್ತಿದ್ದ ಮೈಕ್ರೋಮ್ಯಾಕ್ಸ್ ಕಂಪನಿಯ ಮೊಬೈಲ್ ಬ್ಲಾಸ್ಟ್ ಆಗಿದೆ. ಇಂದ್ರಾಳಿ ರೈಲ್ವೇ ಸ್ಟೇಷನ್ ರೋಡ್‍ನಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಮೊಬೈಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೈಕ್ ನಿಲ್ಲಿಸಿದ ಕಟಪಾಡಿಯ ಮಂಜುನಾಥ್ ಮೊಬೈಲನ್ನು ರಸ್ತೆಗೆ ಎಸೆದಿದ್ದಾರೆ. ಕೂಡಲೇ ಮೊಬೈಲ್ ಹೊರಗೆ ಎಸೆದಿದ್ದರಿಂದ ಅವಘಡ ತಪ್ಪಿದೆ.

ಮೊಬೈಲ್ ಬ್ಯಾಟರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಮೊಬೈಲ್ ಬ್ಯಾಟರಿ ಬ್ಲ್ಯಾಸ್ಟ್ ತೀವ್ರತೆ ಎಷ್ಟಿತ್ತು ಎಂದರೆ ರಸ್ತೆಯ ಡಾಂಬರು ಕೂಡಾ ಸುಟ್ಟುಹೋಗಿದೆ.

ಈ ಘಟನೆ ಹೇಗಾಯ್ತು ಎಂದು ಕೇಳಿದ್ದಕ್ಕೆ, ನಾನು ಪತ್ನಿ ಜೊತೆ ರೈಲು ನಿಲ್ದಾಣಕ್ಕೆ ಟಿಕೆಟ್ ಬುಕ್ ಮಾಡಲು ಕಟಪಾಡಿಯಿಂದ ಉಡುಪಿಗೆ ಬಂದಿದ್ದೆ. ಮೊಬೈಲ್ ಬ್ಯಾಟರಿ ಇಡೀ ದಿನ ಚಾರ್ಜ್ ಇರುತ್ತಿತ್ತು, ಈವರೆಗೆ ಯಾವುದೇ ತೊಂದರೆ ಕಾಣಿಸಿಕೊಂಡಿರಲಿಲ್ಲ. ಆದ್ರೆ ಬೈಕಿನಲ್ಲಿ ಬರುತ್ತಿದ್ದಾಗ ಕಿಸೆ ಬಿಸಿ ಬಿಸಿಯಾಗತೊಡಗಿತು. ಮೊಬೈಲ್ ಕೈಯ್ಯಲ್ಲಿ ತೆಗೆದಾಗ ಕೆಂಡ ಹಿಡಿದ ಹಾಗೆ ಆಗಿದೆ. ಕೂಡಲೇ ಮೊಬೈಲ್ ಹೊರಗೆ ತೆಗೆದು ಬಿಸಾಡಿದೆ ಎಂದು ಮಂಜುನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಟೇಬಲ್ ಮೇಲೆ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಹೊಸ ಸ್ಮಾರ್ಟ್ ಫೋನ್!

ಹೈವೇ ಮಧ್ಯೆಯೇ ಮೊಬೈಲ್ ಬ್ಲಾಸ್ಟ್ ಆಗಿದ್ದರಿಂದ ಇಂದ್ರಾಳಿ ಜಂಕ್ಷನ್‍ನಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆಯ್ತ. ಸ್ಥಳದಲ್ಲಿದ್ದವರು ಏನು ನಡೆಯುತ್ತಿದೆ ಎಂದು ಕುತೂಹಲಕ್ಕಾಗಿ ಗುಂಪು ಸೇರಿದ್ದರು. ಬಸ್‍ನಿಂದ ಇಳಿದು ಜನ ಗುಂಪು ಸೇರಿದರು. ನಂತರ ಉಡುಪಿ ನಗರದ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಮಂಜುನಾಥ್ ಆರು ತಿಂಗಳ ಹಿಂದೆ 10 ಸಾವಿರ ರೂಪಾಯಿ ಕೊಟ್ಟು ಈ ಮೊಬೈಲನ್ನು ಖರೀದಿ ಮಾಡಿದ್ದರು. ಆದ್ರೆ ವಾರೆಂಟಿ ಮುಗಿಯುವ ಮೊದಲೇ ಮೊಬೈಲ್ ಬ್ಲಾಸ್ಟ್ ಆಗಿದ್ದು ಮಂಜುನಾಥ್ ಅವರಿಗೆ ಬೇಸರ ತಂದಿದೆ.

 

Share This Article
Leave a Comment

Leave a Reply

Your email address will not be published. Required fields are marked *