ಅಪ್ಪು ಪ್ರೇರಣೆ – ಸಪ್ತಪದಿಗೂ ಮುನ್ನವೇ ನವ ದಂಪತಿ ನೇತ್ರದಾನದ ಶಪಥ!

Public TV
2 Min Read

– ವಧು, ವರರ ಜೊತೆ 11 ಮಂದಿ ಐ ಡೊನೇಟ್‍ಗೆ ತೀರ್ಮಾನ

ಹುಬ್ಬಳ್ಳಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮ ಮಧ್ಯೆ ಇಲ್ಲ. ಆದರೆ ಪುನೀತ್ ರಾಜ್ ಕುಮಾರ್ ಅವರ ಆದರ್ಶಗಳು ಇದೀಗ ನೂರಾರು ಜನರಿಗೆ ಮಾದರಿಯಾಗಿದೆ. ಅವರು ತಮ್ಮ ಕಣ್ಣುಗಳನ್ನ ದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ. ಹೀಗಾಗಿ ಅಪ್ಪು ನಿಧನದ ನಂತರ ಸಾವಿರಾರು ಜನರು ನೇತ್ರದಾನಕ್ಕೆ ಹೆಸರು ನೋಂದಾಯಿಸುತ್ತಿದ್ದಾರೆ. ಅದೇ ರೀತಿ ಹುಬ್ಬಳ್ಳಿಯಲ್ಲಿ ಹೊಸ ಜೀವನಕ್ಕೆ ಕಾಲ್ಟಿಟ್ಟ ನೂತನ ದಂಪತಿ ಸಪ್ತಪದಿಗೂ ಮುನ್ನ ನೇತ್ರದಾನದ ಶಪಥ ಮಾಡಿದ್ದು ವಿಶೇಷವಾಗಿದೆ.

ಹುಬ್ಬಳ್ಳಿಯ ಅಂಗಡಿ ಕುಟುಂಬದ ಸುಚಿತ್ ಎಂ ಟೆಕ್ ಪದವೀಧರ. ಅಪ್ಪು ಅವರ ಕಟ್ಟಾ ಅಭಿಮಾನಿ. ಹೀಗಾಗಿ ಅಪ್ಪು ಅವರ ಆದರ್ಶಗಳೇ ಇವರಿಗೆ ಪ್ರೇರಣೆ. ಇತ್ತ ಬಿಇ ಪದವೀಧರೆ ಆಗಿರುವ ರಂಜನಿಯನ್ನ ಮದುವೆಯಾಗುವ ವೇಳೆ ಸುಚಿತ್ ಎಲ್ಲರಿಗೂ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ. ಅದ್ದೂರಿಯಾಗಿ ಮದುವೆ ಆದರೂ ಸಪ್ತಪದಿಗೂ ಮುನ್ನ ದಂಪತಿ ನೇತ್ರದಾನ ಶಪಥ ಮಾಡಿ ಹೊಸ ಜೀವನಕ್ಕೆ ಕಾಲಿಟ್ಟಿರುವುದು ವಿಶೇಷವಾಗಿದೆ. ಇದನ್ನೂ ಓದಿ:ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – ಹ್ಯಾರಿಸ್, ಲಮಾಣಿ ಪುತ್ರರ ಹೆಸರು ಹೇಳಿರೋ ಹ್ಯಾಕರ್ ಶ್ರೀಕಿ

ಇದೂವರೆಗೂ ಹಲವು ಬಾರಿ ರಕ್ತದಾನ ಮಾಡಿ ಮಾದರಿಯಾಗಿದ್ದ ಸುಚಿತ್, ತಮ್ಮ ಮದುವೆಯ ದಿನವೇ ಮನೆಯವರನ್ನ ಒಪ್ಪಿಸಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದಾರೆ. ಅಲ್ಲದೇ ಕುಟುಂಬದ ಸದಸ್ಯರು ಸಹ ನೇತ್ರದಾನ ಶಪಥ ಮಾಡುವ ಮೂಲಕ ವಿನೂತನವಾಗಿ ಮದುವೆ ಸಮಾರಂಭ ಮಾಡಿರುವುದು ವಿಶೇಷವಾಗಿದೆ. ಇದೇ ರೀತಿ ಯುವಕರು ನೇತ್ರದಾನ ಶಪಥ ಮಾಡಿದ್ರೆ ಪುನೀತ್ ರಾಜ್ ಕುಮಾರ್ ಅವರ ಕನಸಿನಂತೆ ಕಂಗಳು ಇಲ್ಲದಿರುವವರ ಬಾಳಲ್ಲಿ ಬೆಳಕಾಗಬಹುದು ಎಂದು ವೈದ್ಯರು ಹೇಳುತ್ತಾರೆ.

ವಧು ವರರ ಜೊತೆ ಅಂಗಡಿ ಕುಟುಂಬದ 11 ಸದಸ್ಯರು ಮದುವೆ ದಿನದಂದೇ ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿಸಿದ್ರೆ. ನೂತನ ವಧು-ವರರಿಗೆ ಆರ್ಶಿವದಿಸಲು ಆಗಮಿಸಿದವರ ಪೈಕಿ 60 ಜನ ಸಹ ನೇತ್ರದಾನ ಶಪಥ ಮಾಡಿದ್ದಾರೆ. ಒಟ್ಟಿನಲ್ಲಿ ನಟ ಪುನೀತ್ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶಗಳು ಸಾವಿರಾರು ಜನರಿಗೆ ಮಾದರಿಯಾಗಿರುವುದಂತೂ ಸುಳ್ಳಲ್ಲ.

Share This Article
Leave a Comment

Leave a Reply

Your email address will not be published. Required fields are marked *