ಗಡಿ ಬಂದ್‍ನಿಂದ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ- ಸುಪ್ರೀಂಗೆ ಕೇರಳ ಮಾಹಿತಿ

Public TV
1 Min Read

ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಗಡಿ ಬಂದ್ ಮಾಡಲಾಗಿದ್ದು, ಪರಿಣಾಮ ಕೇರಳದ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇರಳ ಸರ್ಕಾರ ಆರೋಪಿಸಿದೆ.

ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿರುವ ಕೇರಳ ಸರ್ಕಾರ, ಕೂಡಲೇ ಗಡಿ ಭಾಗವನ್ನು ತೆರವು ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಲು ಮನವಿ ಮಾಡಿಕೊಂಡಿದೆ. ಕೇರಳ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮತ್ತಷ್ಟು ಮಾಹಿತಿ ಕೋರಿ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್‍ಗೆ ಅಫಿಡವಿಟ್ ಮೂಲಕ ಉತ್ತರ ಸಲ್ಲಿಸಿರುವ ಕೇರಳ ಈ ಆರೋಪಗಳನ್ನು ಮಾಡಿದೆ.

ಗಡಿ ಭಾಗ ಬಂದ್ ಆಗಿರುವ ಹಿನ್ನೆಲೆ ಕೇರಳಕ್ಕೆ ತೊಂದರೆಯಾಗಿದೆ. ತುರ್ತು ಆರೋಗ್ಯ ಕಾರ್ಯಗಳಿಗೆ ತೊಂದರೆ ಉಂಟಾಗಿದೆ. ಇತರ ಅಗತ್ಯ ವಸ್ತುಗಳು ಸಾಗಾಟಕ್ಕೂ ತೊಂದರೆಯಾಗಿದೆ. ಕರ್ನಾಟಕ ತನ್ನ ರಸ್ತೆ ತಡೆ ಕ್ರಮ ಹಿಂಪಡೆಯಬೇಕೆಂದು ಆಗ್ರಹ ಮಾಡಿತ್ತು. ಆದರೆ ಕಾಸರಗೋಡು ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದು ಗಡಿ ಭಾಗ ತೆರವು ಮಾಡಿದ್ದಲ್ಲಿ ಮತ್ತಷ್ಟು ಸೋಂಕು ಕರ್ನಾಟಕಕ್ಕೆ ಹಬ್ಬುವ ಸಾಧ್ಯತೆ ಇದೆ. ಈ ಹಿನ್ನೆಲೆ ಗಡಿ ಭಾಗ ತೆರವು ಮಾಡಲು ಸಾಧ್ಯವಿಲ್ಲ. ಇದಲ್ಲದೇ ಕೇಂದ್ರ ಸರ್ಕಾರದಿಂದಲೂ ಈ ಬಗ್ಗೆ ಆದೇಶಗಳಿದೆ ಎಂದು ಕರ್ನಾಟಕ ವಾದ ಮಂಡಿಸಿತ್ತು.

ಎರಡೂ ಕಡೆಯ ವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಸೂಚನೆ ನೀಡಿತ್ತು. ಇದಕ್ಕೂ ಮುನ್ನ ಕೇರಳ ಹೈಕೋರ್ಟ್ ಗಡಿ ತೆರವು ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಕರ್ನಾಟಕ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ.

Share This Article
Leave a Comment

Leave a Reply

Your email address will not be published. Required fields are marked *