ಮನೆಗೆ ಹೋಗ್ಬೇಕು: ಬಾಲಕನ ಕಣ್ಣೀರು

Public TV
2 Min Read

– ಕೆಲ್ಸವಿಲ್ಲ, ಪೊಲೀಸ್ರು ಬೆನ್ನಟ್ಟುತ್ತಿದ್ದಾರೆ
– ಮನೆಗೆ ಹೋಗಲು ಬಸ್ ಇಲ್ಲ

ನವದೆಹಲಿ: ಕೊರೊನಾ ವೈರಸ್ ದೇಶದಲ್ಲಿ ಎಲ್ಲಾ ವರ್ಗದವರಿಗೂ ತೊಂದರೆಯನ್ನು ಉಂಟು ಮಾಡಿದೆ. ಈಗ ದೆಹಲಿಯಲ್ಲಿ ಬಾಲಕನೋರ್ವ ನಾನು ಮನಗೆ ಹೋಗಬೇಕು ಎಂದು ಕಣ್ಣೀರಿಟ್ಟಿರುವ ಮನಕಲಕುವ ಘಟನೆ ನಡೆದಿದೆ.

ಕೊರೊನಾ ವೈಸರ್ ಗೆ ಬ್ರೇಕ್ ಹಾಕಲು ದೇಶದಲ್ಲಿ ರೈಲು ಮತ್ತು ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ. ಇದರಿಂದ ತಮ್ಮ ತಮ್ಮ ಊರಿಗೆ ಹೋಗಲು ಕೂಲಿ ಕಾರ್ಮಿಕರು ಕಷ್ಟಪಡುತ್ತಿರುವುದು ದೆಹಲಿಯಲ್ಲಿ ಕಂಡು ಬಂದಿದೆ. ಇದರಲ್ಲಿ ಓರ್ವ ಬಾಲಕ ನಾನೂ ಮನೆಗೆ ಹೋಗಬೇಕು. ಹೋಗಲು ಬಸ್ ಇಲ್ಲ ಎಂದು ಮಾಧ್ಯಮದವರ ಮುಂದೆ ಕಣ್ಣೀರಿಟ್ಟಿದ್ದಾನೆ.

ಮಾಧ್ಯಮದವರ ಜೊತೆ ಕಣ್ಣೀರಿಡುತ್ತಾ ಮಾತನಾಡಿರುವ ಬಾಲಕ, ನಾನೂ ಮನೆಗೆ ಹೋಗಬೇಕು. ಮನೆಗೆ ಹೋಗಲು ಬಸ್ ಇಲ್ಲ. ಪೊಲೀಸರು ಬೆನ್ನಟ್ಟುತ್ತಿದ್ದಾರೆ. ನಾನು ಏನೂ ಮಾಡಲಿ ಕಳೆದ ಮೂರು ದಿನಗಳಿಂದ ಇದೇ ರಸ್ತೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೇನೆ. ಮಾಡಲು ಕೆಲಸವಿಲ್ಲ. ತಿನ್ನಲು ದುಡ್ಡು ಇಲ್ಲ. ನಾನು ಬಿಹಾರದವನು ಇಲ್ಲಿ ಕೂಲಿ ಕೆಲಸಕ್ಕಾಗಿ ಬಂದಿದ್ದೆ. ಈಗ ಕೆಲಸವು ನಿಂತೂ ಹೋಗಿದೆ. ವಾಪಸ್ ಊರಿಗೆ ಹೋಗಲು ಬಸ್ಸು ಇಲ್ಲ ಎಂದು ಕಣ್ಣೀರಾಕಿದ್ದಾನೆ.

ಕೊರೊನಾ ವೈರಸ್ ವ್ಯಾಪಾಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ತನ್ನ ಗಡಿಭಾಗದಲ್ಲಿ ಎಲ್ಲವನ್ನೂ ನಿಷೇಧಿಸಿದೆ. ಯಾವುದೇ ಬಸ್ ಹಾಗೂ ರೈಲು ಸಂಚಾರವಿಲ್ಲ. ಈ ಕಾರಣದಿಂದ ಬಿಹಾರದಿಂದ ದಿನಗೂಲಿ ಕೆಲಸ ಮಾಡಲು ದೆಹಲಿಗೆ ಬಂದಿದ್ದ ಕಾರ್ಮಿಕರ ಪಾಡು ಚಿಂತಜನಕವಾಗಿದೆ. ಊರಿಗೆ ಹೋಗಲು ಬ್ಯಾಗ್ ಸಮೇತ ಸಿದ್ಧವಾಗಿ ಬಂದಿರುವ ಕಾರ್ಮಿಕರು ಬಸ್ಸುಗಳು ಸಿಗದೆ ರಸ್ತೆಯಲ್ಲಿ ಅಲೆದಾಡುತ್ತಿದ್ದಾರೆ.

ಬಾಲಕ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ, ಆರ್.ಜಿ.ಡಿ ಪಕ್ಷದ ನಾಯಕ ತೇಜಸ್ವಿ ಯಾದವ್, ಬಿಹಾರದ ಮುಖ್ಯಮಂತ್ರಿಯಾದ ನಿತಿಶ್ ಕುಮಾರ್ ಅವರನ್ನು ಟ್ಯಾಗ್ ಮಾಡಿ ದೆಹಲಿಯ ಮುಖ್ಯಮಂತ್ರಿ ಅಥವಾ ದೇಶದ ಗೃಹಮಂತ್ರಿಯವರ ಜೊತೆ ಮಾತನಾಡಿ ತಕ್ಷಣ ಅವರಿಗೆ ಬಸ್ಸಿನ ವ್ಯವಸ್ಥೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ.

ಕೊರೊನಾ ವೈರಸ್ ಬೀತಿಯಿಂದ ಭಾನುವಾರವೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಂಪೂರ್ಣ ದೆಹಲಿಯನ್ನು ಲಾಕ್‍ಡೌನ್ ಮಾಡಿದ್ದಾರೆ. ಆದ್ದರಿಂದ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ರೈಲು, ಬಸ್ಸು, ಸಾರಿಗೆ ಸಂಚಾರ ಬಂದ್ ಆಗಿದೆ. ಇಂದು ಮಾತನಾಡಿ ಪ್ರಧಾನಿ ಮೋದಿ ಅವರು ಇಡೀ ದೇಶವನ್ನೇ ಏಪ್ರಿಲ್ 14 ರ ವರೆಗೂ ಸಂಪೂರ್ಣ ಲಾಕ್‍ಡೌನ್ ಮಾಡಿದ್ದಾರೆ. ಇಲ್ಲಿಯವರೆಗೂ ಭಾರತದಲ್ಲಿ ಕೊರೊನಾ ವೈರಸ್ ನಿಂದ 10 ಜನ ಸಾವನ್ನಪಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *