ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಮಂಡ್ಯ ಜನರಿಗೆ ಹೊಸ ಕ್ಯಾಂಟೀನ್ ಭಾಗ್ಯ

Public TV
1 Min Read

ಮಂಡ್ಯ: 2018 ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಕ್ಯಾಂಟೀನ್ ಪಾಲಿಟಿಕ್ಸ್ ಜೋರಾಗಿದೆ. 10 ರೂಪಾಯಿಗೆ ಆಹಾರ ನೀಡುವ ಅಣ್ಣಾ ಕ್ಯಾಂಟೀನ್ ಇಂದು ಮಂಡ್ಯದಲ್ಲಿ ನೂತನವಾಗಿ ಆರಂಭವಾಗಿದೆ.

ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ರವಿಕುಮಾರ್ ಹೆಸರಲ್ಲಿ ನಗರದ ಹೊಸಹಳ್ಳಿ ವೃತ್ತದಲ್ಲಿ ಅಣ್ಣಾ ಕ್ಯಾಂಟೀನ್ ಆರಂಭವಾಗಿದೆ. ರವಿಕುಮಾರ್ ಅಭಿಮಾನಿ ರಾಜು ಎಂಬವರು ಕ್ಯಾಂಟೀನ್ ಆರಂಭಿಸಿದ್ದು, 10 ರೂಪಾಯಿಗೆ ವಿವಿಧ ಬಗೆಯ ಊಟ, ಉಪಹಾರ ನೀಡುತ್ತಿದ್ದಾರೆ. ಬಡವರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಕ್ಯಾಂಟಿನ್ ಆರಂಭಿಸಲಾಗಿದೆ ಎನ್ನಲಾಗಿದೆ.

ಮಂಡ್ಯದಲ್ಲಿ ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರ ಅಭಿಮಾನಿಗಳು 10 ರೂಪಾಯಿಗೆ ಊಟ ತಿಂಡಿ ನೀಡುವ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ್ದಾರೆ. ಇದಾದ ನಂತರದಲ್ಲಿ ಕೆಲ ದಿನಗಳ ಹಿಂದೆ ರಮ್ಯಾ ಅಭಿಮಾನಿಯೊಬ್ಬರು 10 ರೂಪಾಯಿಗೆ ಊಟ ತಿಂಡಿ ನೀಡುವ ರಮ್ಯಾ ಕ್ಯಾಂಟಿನ್ ಆರಂಭಿಸಿದ್ದರು.

ಪ್ರಸ್ತುತ ಅಪ್ಪಾಜಿ ಕ್ಯಾಂಟಿನ್, ರಮ್ಯಾ ಕ್ಯಾಂಟೀನ್ ಸಾಲಿಗೆ ಅಣ್ಣಾ ಕ್ಯಾಂಟೀನ್ ಕೂಡ ಸೇರ್ಪಡೆಯಾಗಿದೆ. ಇದರ ನಡುವೆಯೇ ಬಿಜೆಪಿಯವರು ನಾವೇನು ಕಡಿಮೆಯಿಲ್ಲ ಎಂಬಂತೆ ಯಡಿಯೂರಪ್ಪ ಕ್ಯಾಂಟೀನ್ ಆರಂಭಿಸಲು ಭರದಿಂದ ಸಿದ್ಧತೆ ನಡೆಸಿದ್ದಾರೆ. ಮಂಡ್ಯದ ಸುಭಾಷ್ ನಗರದಲ್ಲಿ ಕ್ಯಾಂಟೀನ್ ಆರಂಭಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಬಿಜೆಪಿಯವರು ಉಳಿದ ಮೂರು ಕ್ಯಾಂಟೀನ್‍ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕೇವಲ ಮೂರು ರೂಪಾಯಿಗೆ ಯಡಿಯೂರಪ್ಪ ಕ್ಯಾಂಟೀನ್‍ನಲ್ಲಿ ಊಟ, ಉಪಹಾರ ನೀಡುವುದಾಗಿ ಹೇಳುತ್ತಿದ್ದು, ಸದ್ಯದಲ್ಲೇ ಆರಂಭವಾಗಲಿದೆ ಎನ್ನುತ್ತಿದ್ದಾರೆ.

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂಡ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷದ ಮುಖಂಡರು ಕಡಿಮೆ ಬೆಲೆಯ ಕ್ಯಾಂಟೀನ್ ಆರಂಭಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *