ಏರ್ ಇಂಡಿಯಾ ದುರಂತದ ಬಳಿಕ ಎಚ್ಚೆತ್ತ DGCA – ಏರ್‌ಪೋರ್ಟ್‌ ಬಳಿಯ ಕಟ್ಟಡಗಳಿಗೆ ಹೊಸ ರೂಲ್ಸ್‌

Public TV
2 Min Read

ನವದೆಹಲಿ: ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಪತನಗೊಂಡ (Air India Plane Crash) ಬಳಿಕ ಎಚ್ಚೆತ್ತ ನಾಗರಿಕ ವಿಮಾನಯಾನ ಸಚಿವಾಲಯ ಹೊಸ ನಿಯಮ (New Aviation Rules) ತರಲು ಮುಂದಾಗಿದೆ.

ವಿಮಾನ ನಿಲ್ದಾಣಗಳ ಸುತ್ತಮುತ್ತಲಿನ ವಿಮಾನ ಸುರಕ್ಷತೆಗೆ ಸಂಭಾವ್ಯ ಅಪಾಯ ತಂದೊಡ್ಡುವ ಕಟ್ಟಡ ಒಡೆಯುವ ಹಾಗೂ ಮರಗಳನ್ನು ಕತ್ತರಿಸಲು ಕರಡು ನಿಯಮಗಳನ್ನು ಸಿದ್ಧಪಡಿಸಿದೆ. ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ನಂತರ ಈ ನಿಯಮ ಜಾರಿಗೆ ಬರಲಿದೆ. ಇದನ್ನೂ ಓದಿ: 2 ಗಂಟೆ ಹಾರಾಟದ ಬಳಿಕ ತಾಂತ್ರಿಕ ದೋಷ – ಲೇಹ್‌ಗೆ ಹೊರಟಿದ್ದ ಇಂಡಿಗೋ ವಿಮಾನ ದೆಹಲಿಗೆ ವಾಪಸ್‌

ಈ ನಿಯಮದಲ್ಲಿ ಪ್ರಮುಖವಾಗಿ, ಗೊತ್ತುಪಡಿಸಿದ ವಿಮಾನ ನಿಲ್ದಾಣದ ಸಮೀಪ ಎತ್ತರದ ಮಿತಿಗಳನ್ನು ಉಲ್ಲಂಘಿಸಿರುವ ಕಟ್ಟಡಗಳನ್ನು ಒಡೆಯುವ ಮತ್ತು ವಿಮಾನಗಳಿಗೆ ಅಪಾಯ ತಂದೊಡ್ಡುವ ಮರಗಳನ್ನು ಕತ್ತರಿಸುವ ಅಧಿಕಾರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗುತ್ತದೆ.

ನಿಯಮದ ಪ್ರಕಾರ, ಅನುಮತಿ ನೀಡಲಾದ ಎತ್ತರವನ್ನು ಮೀರಿರುವ ಯಾವುದೇ ನಿರ್ಮಾಣ ಕಂಡುಬಂದರೆ ಸಂಬಂಧಪಟ್ಟ ವಿಮಾನ ನಿಲ್ದಾಣದ ಉಸ್ತುವಾರಿ ಅಧಿಕಾರಿಯಿಂದ ನೋಟಿಸ್ ನೀಡಲಾಗುತ್ತದೆ. ನೋಟಿಸ್‌ಗೆ ಮಾಲೀಕರು 60 ದಿನಗಳ ಒಳಗಾಗಿ ನಿರ್ಮಾಣ ಯೋಜನೆಯ ವಿವರವಾದ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ. ಮಾಲೀಕರು ಮಾಹಿತಿ ಸಲ್ಲಿಸಲು ವಿಫಲವಾದರೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವ ಅಧಿಕಾರ ಹೊಂದಿರುತ್ತಾರೆ.

ನಾಗರಿಕ ವಿಮಾನಯಾನ ಮಹಾನಿರ್ದೇಶಕರು (DGCA) ಅಥವಾ ಅಧಿಕೃತ ಅಧಿಕಾರಿಗಳು ಕಟ್ಟಡದ ಎತ್ತರದ ನಿಯಮ ಉಲ್ಲಂಘನೆಯನ್ನು ದೃಢಪಡಿಸಿದರೆ, ಅವರು ಮಾಲೀಕರಿಗೆ ರಚನೆಯನ್ನು ಕೆಡವಲು ಅಥವಾ ಮರವನ್ನು ಕಡಿಯಲು ಆದೇಶವನ್ನು ಹೊರಡಿಸಬಹುದು. ಆದೇಶವನ್ನು 60 ದಿನಗಳ ಒಳಗೆ ಪಾಲಿಸಬೇಕಾಗುತ್ತದೆ. ಸೂಕ್ತ ಕಾರಣವಿದ್ದರೆ ಮಾತ್ರ ಇನ್ನೂ 60 ದಿನಗಳ ನಂತರ ವಿಸ್ತರಿಸಲಾಗುತ್ತದೆ.

ನಿಯಮದಲ್ಲಿ ಏನಿದೆ?
ಹಗಲು ಹೊತ್ತಿನಲ್ಲಿ ಅಧಿಕಾರಿಗಳು ನಿಯಮ ಮೀರಿರುವ ಕಟ್ಟಡಗಳ ಪರಿಶೀಲನೆ ಮಾಡಬಹುದಾಗಿದೆ. ಇದಕ್ಕೂ ಮುನ್ನ, ಅಧಿಕಾರಿಗಳು ಆಸ್ತಿ ಮಾಲೀಕರಿಗೆ ತಿಳಿಸಬೇಕು. ಮಾಲೀಕರು ಅಸಹಕಾರ ತೋರಿದರೆ ಅಧಿಕಾರಿಗಳು ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಕ್ರಮಕೈಗೊಳ್ಳಬಹುದು. ಪ್ರಕರಣವನ್ನು DGCAಗೆ ವರ್ಗಾಯಿಸಬಹುದು.

ಆದೇಶವನ್ನು ಕಾರ್ಯಗತಗೊಳಿಸದಿದ್ದರೆ ಉಸ್ತುವಾರಿ ಅಧಿಕಾರಿಯು ಜಿಲ್ಲಾಧಿಕಾರಿಗೆ ವರದಿ ನೀಡಬೇಕು. ನಂತರ ಕಟ್ಟಡ ಕೆಡವಲು ಅಥವಾ ಮರ ಕತ್ತರಿಸುವ ಹೊಣೆ ಅವರದ್ದಾಗಿರುತ್ತದೆ. ಈ ಪ್ರಕ್ರಿಯೆಗೆ ಅನಧಿಕೃತ ನಿರ್ಮಾಣಗಳ ವಿರುದ್ಧದ ಇರುವ ಕಾನೂನಿನ ಅಡಿಯೇ ಕ್ರಮ ಕೈಗೊಳ್ಳಲಾಗುತ್ತದೆ.

ಅನಧಿಕೃತ ನಿರ್ಮಾಣ ಎಂದು ನೋಟಿಸ್‌ ನೀಡಿದ ಬಳಿಕ ಮಾಲೀಕರು ಮೇಲ್ಮನವಿಯನ್ನು ಸಲ್ಲಿಸಬಹುದಾಗಿದೆ. ನಿಗದಿತ ನಮೂನೆ, ಸಂಬಂಧಿತ ದಾಖಲೆಗಳು ಮತ್ತು 1,000 ರೂ.ಗಳ ಶುಲ್ಕದೊಂದಿಗೆ ಸಂಬಂಧಪಟ್ಟ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.

ಭಾರತೀಯ ವಾಯುಯಾನ ಅಧಿನಿಯಮ 2024 ರ ಸೆಕ್ಷನ್ 22ರ ಅಡಿಯಲ್ಲಿ ಪರಿಹಾರವು ಅಧಿಕೃತ ಆದೇಶ ಪಾಲಿಸಿದವರಿಗೆ ಮಾತ್ರ ಲಭ್ಯವಿರುತ್ತದೆ. ಅಧಿಸೂಚನೆ ಪ್ರಕಟವಾದ ನಂತರ ನಿರ್ಮಿಸಲಾದ ಯಾವುದೇ ಕಟ್ಟಡ ರಚನೆಗೂ ಪರಿಹಾರ ದೊರೆಯುವುದಿಲ್ಲ.

ಅಧಿಸೂಚನೆ ಪ್ರಕಟವಾದ 20 ದಿನಗಳ ಒಳಗೆ ಸಚಿವಾಲಯವು ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿದೆ. ಪ್ರತಿಕ್ರಿಯೆಗಳನ್ನು ನೇರವಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ ಕಳುಹಿಸಬಹುದಾಗಿದೆ. ಇದನ್ನೂ ಓದಿ: Air India Plane crash | ಡೇಟಾ ರಿಕವರಿಗಾಗಿ ಬ್ಲ್ಯಾಕ್‌ ಬಾಕ್ಸ್ ಅಮೆರಿಕಕ್ಕೆ ರವಾನೆ

Share This Article