ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ 3,172 ಕೋಟಿ ರೂ.- ಹೊಸ ಯೋಜನೆಗಳೇನು?

Public TV
3 Min Read

ಬೆಂಗಳೂರು: ಇಂದಿನ ರಾಜ್ಯ ಬಜೆಟ್ ನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 3,172 ಕೋಟಿ ರೂ. ಮೀಸಲಿಡಲಾಗಿದೆ.

ಹೊಸ ಯೋಜನೆಗಳು:
* ನಮ್ಮ ಸರ್ಕಾರವು ಸ್ವಾತಂತ್ರ್ಯಯೋಧ ಸಂಗೊಳ್ಳಿ ರಾಯಣ್ಣನವರ ನೆನಪಿಗಾಗಿ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ’ ವನ್ನು ರಚನೆ ಮಾಡಿದೆ. ಅವರ ಜನ್ಮಸ್ಥಳವಾದ ಸಂಗೊಳ್ಳಿ ಮತ್ತು ಹುತಾತ್ಮರಾದ ನಂದಗಡದಲ್ಲಿ ಮುಂದಿನ ವರ್ಷಗಳಲ್ಲಿ 267 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

* 2012-13ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಆಹಾರ ವೆಚ್ಚಕ್ಕಾಗಿ ಅನುಕ್ರಮವಾಗಿ ಮಾಹೆಯಾನ 750 ರೂ. ಮತ್ತು 850 ರೂ. ನೀಡಲಾಗುತ್ತಿತ್ತು. 2018-19ನೇ ಸಾಲಿನಲ್ಲಿ ಈ ಮೊತ್ತವನ್ನು ಅನುಕ್ರಮವಾಗಿ 1500 ರೂ. ಮತ್ತು 1600 ರೂ.ಗಳಿಗೆ ಹೆಚ್ಚಿಸಲಾಗುವುದು.

* ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಶುಚಿ ಸಂಭ್ರಮ ಕಿಟ್ ಸೌಲಭ್ಯವನ್ನು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೂ ಸಹ ವಿಸ್ತರಿಸಲಾಗುವುದು. ಖಾಸಗಿ ಅನುದಾನಿತ ಅನಾಥಾಲಯಗಳ ವಿದ್ಯಾರ್ಥಿಗಳ ಊಟದ ವೆಚ್ಚದ ದರಗಳನ್ನು ಮಾಹೆಯಾನ ತಲಾ 700 ರೂ. ಗಳಿಂದ 800 ರೂ.ಗಳಿಗೆ ಹೆಚ್ಚಿಸಲಾಗುವುದು.

* ವಿದ್ಯಾಸಿರಿ ಯೋಜನೆಯಡಿ 2018-19ನೇ ಸಾಲಿನಿಂದ ಫಲಾನುಭವಿಗಳ ಸಂಖ್ಯೆಯನ್ನು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಹೆಚ್ಚಿಸಲಾಗುವುದು.
* ಹಿಂದುಳಿದ ವರ್ಗಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಹಾಲಿ ಇರುವ ಕೆನೆಪದರ ಆದಾಯ ಮಿತಿಯನ್ನು 6 ಲಕ್ಷ ರೂ.ಗಳಿಂದ 8 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.
* ಮುಂದಿನ 5 ವರ್ಷಗಳಲ್ಲಿ 750 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕಾಗಿ ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಕಳುಹಿಸುವ ಗುರಿ ಹೊಂದಲಾಗಿದ್ದು, 2018-19ನೇ ಸಾಲಿನಲ್ಲಿ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.

* ಹಿಂದುಳಿದ ವರ್ಗಗಳ 2000 ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್ ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಪ್ರತಿಷ್ಠಿತ ತರಬೇತಿ ಸಂಸ್ಥೆಗಳ ಮೂಲಕ ವಿಶೇಷ ಕೋಚಿಂಗ್ ನೀಡಲಾಗುವುದು.
* ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಉಚಿತವಾಗಿ JEE, NEET, GATE, GMAT ಇತ್ಯಾದಿಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನೀಡಲಾಗುವುದು.

* ಪೂರ್ಣಾವಧಿ ಪಿ.ಹೆಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಅನ್ನು 5000 ರೂ.ಗಳಿಂದ 10,000 ರೂ.ಗಳಿಗೆ ಹೆಚ್ಚಿಸಲಾಗುವುದು.
* ಕೆ.ಐ.ಎ.ಡಿ.ಬಿ. ಮತ್ತು ಕೆ.ಎಸ್.ಎಸ್.ಐ.ಡಿ.ಸಿ.ಗಳಿಂದ ಕೈಗಾರಿಕಾ ಶೆಡ್‍ಗಳು ಹಾಗೂ ಸಹಾಯಧನ ನೀಡುವ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ 2ಎ ಮತ್ತು ಪ್ರವರ್ಗ 2ಬಿ ಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಕೆನೆಪದರ ಆದಾಯ ಮಿತಿಯನ್ನು ತೆಗೆದು ಹಾಕಲಾಗುವುದು.
* ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈ ಅಭಿವೃದ್ಧಿ ನಿಗಮವನ್ನು ಪುನರ್ ಸಂಘಟಿಸಲಾಗುವುದು.

* ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳು ನಡೆಸುತ್ತಿರುವ ಖಾಸಗಿ ವಸತಿ ನಿಲಯಗಳ ಮೂಲ ಸೌಕರ್ಯ ಅಭಿವೃದ್ಧಿಗಾಗಿ ತಲಾ 5 ಲಕ್ಷ ರೂ. ಅನುದಾನ.
* ಹಿಂದುಳಿದ ಸಮುದಾಯಗಳಾದ ಸವಿತಾ ಸಮಾಜ, ತಿಗಳ, ಮಡಿವಾಳ ಮತ್ತು ಕುಂಬಾರರ ಆರ್ಥಿಕಾಭಿವೃದ್ಧಿಗಾಗಿ 100 ಕೋಟಿ ರೂ.ಗಳ ಮೀಸಲು.
* ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವೀಧರರ ಸ್ವಯಂ ಉದ್ಯೋಗಕ್ಕಾಗಿ 10 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯವನ್ನು ವಾರ್ಷಿಕ ಶೇ.6ರಷ್ಟು ಬಡ್ಡಿ ದರ.
* ಅತಿ ಹಿಂದುಳಿದ ಬುಡಬುಡಕಿ, ಗೊಲ್ಲ, ಹೆಳವ, ಗೊಂದಳಿ, ಜೋಗಿ, ಶಿಕ್ಕಲಿಗರ್, ಪಿಚಗುಂಟಲ, ದೊಂಬಿದಾಸ ಇತ್ಯಾದಿ ಅಲೆಮಾರಿ/ಅರೆ ಅಲೆಮಾರಿ ಜನಾಂಗಗಳ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ.

Share This Article
Leave a Comment

Leave a Reply

Your email address will not be published. Required fields are marked *