ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಭದ್ರಕೋಟೆಯೇ ಛಿದ್ರ – ತುರ್ತು ಸಭೆಗೆ ವಿಶ್ವಸಂಸ್ಥೆ ತಯಾರಿ

Public TV
1 Min Read

– ಪರಸ್ಪರ ದಾಳಿಯಲ್ಲಿ ಲೆಬನಾನ್‌ ಕ್ಯಾಪ್ಟನ್‌, ಇಸ್ರೇಲ್‌ನ ಗಾರ್ಡ್‌ ಕಮಾಂಡರ್‌ ಹತ್ಯೆ

ಜೆರುಸಲೇಂ/ಬೈರೂತ್‌: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಹಿಜ್ಬುಲ್ಲಾ (Hezbollah) ಮುಖ್ಯಸ್ಥ ಹಸನ್‌ ನಸ್ರಲ್ಲಾ ಹತ್ಯೆ ಬಳಿಕ ಇಸ್ರೇಲ್‌ (Israel) ಮೇಲೆ ಇರಾನ್‌ ನೂರಾರು ಕ್ಷಿಪಣಿಗಳ ಮಳೆ ಸುರಿಸಿದೆ. ಇದೇ ಮೊದಲ ಭಾರಿಗೆ ಹೈಪರ್‌ಸಾನಿಕ್‌ ಕ್ಷಿಪಣಿ ಬಳಸಿ ದಾಳಿ ನಡೆಸಿದೆ. ಈ ಬೆನ್ನಲ್ಲೇ ಇಸ್ರೇಲಿ ಪಡೆಗಳು ಲೆಬನಾನ್‌ ಮೇಲೆ ಸೇಡಿನ ದಾಳಿ ನಡೆಸಿದೆ. ಲೆಬನಾನ್‌ನ (Lebanon) ಅಲ್-ಬೆಕಾ ಕಣಿವೆಯಲ್ಲಿರುವ ಹಲ್ಬಟಾ ಮತ್ತು ಜಬುದ್ ಪಟ್ಟಣಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ. ಎರಡೂ ಕಡೆ ಸಾವುನೋವು ಸಂಭವಿಸಿದೆ.

ಹಿಜ್ಬುಲ್ಲಾ ವಿರುದ್ಧ ಯುದ್ಧದಲ್ಲಿ ಇಸ್ರೇಲ್‌ನ ಗಾರ್ಡ್ ಕಮಾಂಡರ್ (Guards commander) ಮತ್ತು ಇತರ ನಾಯಕರು ಜೀವ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಇಸ್ರೇಲ್‌ ದಾಳಿಗೆ ಲೆಬನಾನ್‌ ಸೇನೆಯ 22 ವರ್ಷದ ಕ್ಯಾಪ್ಟನ್‌ ಕ್ಯಾಪ್ಟನ್ ಈಟಾನ್ ಇಟ್ಜಾಕ್ ಓಸ್ಟರ್ ಪ್ರಾಣ ತೆತ್ತಿದ್ದಾರೆ. ಇರಾನ್‌, ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದ್ದಂತೆ, ಇಸ್ರೇಲ್‌ ಕೂಡ, ಇರಾನ್‌ಗೆ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ಲೆಬನಾನ್‌ನ ಬೈರೂತ್‌ನಲ್ಲಿರುವ ಹಿಜ್ಬುಲ್ಲಾ ಶಿಬಿರಗಳ ಮೇಲೆ ಇಸ್ರೇಲ್‌ ಸೇನೆ ಬಾಂಬ್‌ ಮಳೆ ಸುರಿಸಿದೆ. ಈ ಮೂಲಕ ಹಿಜ್ಬುಲ್ಲಾ ಭದ್ರಕೋಟೆ ಎಂದೇ ಕರೆಸಿಕೊಂಡಿದ್ದ ಸೇನಾ ನೆಲೆಗಳನ್ನು ಇಸ್ರೇಲ್‌ ಛಿದ್ರಗೊಳಿಸಿದೆ.

ತುರ್ತು ಸಭೆಗೆ ವಿಶ್ವಸಂಸ್ಥೆ ತಯಾರಿ:
ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿ ಆವರಿಸಿದೆ. ಪರಿಸ್ಥಿತಿ ದಿನೇ ದಿನೇ ವಿಕೋಪಕ್ಕೆ ತಿರುಗುತ್ತಿದೆ. ಇದರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯನ್ನು ಪರಿಹರಿಸಲು ತುರ್ತು ಸಭೆ ಕರೆಯಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಶ್ವಸಂಸ್ಥೆಯ ಆಂಟೋನಿಯೊ ಗುಟೆರೆಸ್, ಒಂದು ವಾರದ ಹಿಂದೆ ಭದ್ರತಾ ಮಂಡಳಿಗೆ ಲೆಬನಾನ್‌ನ ಪರಿಸ್ಥಿತಿ ಬಗ್ಗೆ ವರದಿ ಮಾಡಿದ್ದಾರೆ. ಸದ್ಯ ಅಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಲೆಬನಾನಿನ ಸರ್ಕಾರವು ದೇಶದೊಳಗಿನ ಎಲ್ಲಾ ಶಸ್ತ್ರಾಸ್ತ್ರಗಳ ಮೇಲೆ ನಿಯಂತ್ರಣವನ್ನು ಮರಳಿ ಪಡೆಯಬೇಕು ಎಂದು ಪ್ರತಿಪಾದಿಸಿದ್ದಾರೆ.

Share This Article