ಕ್ಲಾಸ್‍ಮೆಟ್‍ನ ಮೊಬೈಲ್ ಕದ್ದ ಆರೋಪ- ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

Public TV
1 Min Read

ನೆಲ್ಲೊರೆ: ಗುದುರ್ ಮೂಲದ ಆದಿಶಂಕರ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ 17 ವರ್ಷದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ.

ಅಕ್ಕುಪಲ್ಲಿ ಮಾಧವಿ ಎಂಬಾಕೆ ಸೋಮವಾರ ಮುಂಜಾನೆ ತನ್ನ ಕಾಲೇಜಿನ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾಗಿದ್ದಾಳೆ. ಚಿತ್ತೂರು ಜಿಲ್ಲೆಯ ವಲ್ವೇದು ಮನಾಮಲ ಗ್ರಾಮದ ಯುವತಿ ಕಾಲೇಜಿನಲ್ಲಿ ಸಿವಿಲ್ ಪ್ರಥಮ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದಳು.

ಏನಿದು ಘಟನೆ?: ತರಗತಿಯ ವಿದ್ಯಾರ್ಥಿಯ ಫೋನ್ ಕದ್ದ ಆರೋಪವನ್ನು ಮಾಧವಿ ಮೇಲೆ ಹೊರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿಯಾಗಿದೆ.

ತರಗತಿಯಲ್ಲಿ ವಿದ್ಯಾರ್ಥಿಯೊಬ್ಬ ಮೊಬೈಲ್ ಕಳೆದುಕೊಂಡಿದ್ದನು. ಆದ್ರೆ ಮೊಬೈಲ್ ಕದ್ದ ಆರೋಪವನ್ನು ಮಾಧವಿ ಮೇಲೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಹಾಸ್ಟೆಲ್ ವಾರ್ಡನ್ ಪ್ರಶ್ನಿಸಿದ್ದಾರೆ. ಅಲ್ಲದೇ ತಂದೆ ಆಕೆಯನ್ನು ನೋಡಲೆಂದು ಹಾಸ್ಟೆಲ್ ಗೆ ಬಂದಾಗ ಮಗಳು ಮೊಬೈಲ್ ಕದ್ದಿರುವುದಾಗಿ ಹೇಳಿದ್ದಾರೆ ಅಂತ ಪೊಲೀಸ್ ಇಲಾಖೆಯ ಮೂಲಗಳಿಂದ ತಿಳಿದುಬಂದಿರುವುದಾಗಿ ವರದಿಯಾಗಿದೆ.

ಇದೀಗ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ತನಿಖೆ ನಡೆಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್(ಎಬಿವಿಪಿ) ಕಾರ್ಯಕರ್ತರು ಕಾಲೇಜಿನ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಚಿಲ್ಲಕೂರ್ ಎಸ್‍ಐ ಶ್ರೀನಿವಾಸಲು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳುವಾಗಿ ಭರವಸೆ ನೀಡಿದ್ದಾರೆ.

ಸದ್ಯ ಮೃತ ವಿದ್ಯಾರ್ಥಿನಿಯ ತಂದೆಯ ಹೇಳಿಕೆಯಂತೆ ದೂರು ದಾಖಲಿಸಿಕೊಳ್ಳಲಾಗಿದೆ ಅಂತ ಡಿಎಸ್‍ಪಿ ವಿಎಸ್ ರಾಮ್ ಬಾಬು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *