ಒಂದೇ ಕುಟುಂಬದ 6 ಮಂದಿ ಸಾವು ಪ್ರಕರಣ – ಸ್ವಗ್ರಾಮದಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ

Public TV
2 Min Read

ವಿಜಯಪುರ: ನೆಲಮಂಗಲ ಭೀಕರ ಅಪಘಾತದಲ್ಲಿ ಸಾವೀಗೀಡಾಗಿದ್ದ 6 ಜನರ ಮೃತದೇಹಗಳು ಮಹಾರಾಷ್ಟ್ರದ ಸ್ವಗ್ರಾಮಕ್ಕೆ ತಲುಪಿದ್ದು, ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದೆ.

ಇಂದು (ಡಿ.22) ಬೆಳಿಗ್ಗೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೃತದೇಹಗಳು ರವಾನೆಯಾಗಿವೆ. ಮೂರು ಅಂಬುಲೆನ್ಸ್ ಮೂಲಕ ಆರು ಮೃತದಹೇಗಳನ್ನು ಕರೆತರಲಾಗಿದೆ. ಮೃತದೇಹಗಳನ್ನು ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತ ಚಂದ್ರಮ್ ಅವರ ಜಮೀನಿನಲ್ಲಿ ಲಿಂಗಾಯತ ಸಮಾಜದ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು.  ಮೃತದೇಹಗಳಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿದ ಬಳಿಕ ಬೆಂಕಿ ಸ್ಪರ್ಶಿಸುವ ಮೂಲಕ ಅಂತ್ಯಕ್ರಿಯೆ ನೆರವೇರಿಸಿದರು.ಇದನ್ನೂ ಓದಿ: ಒಂದು ದೇಶ, ಒಂದು ಚುನಾವಣೆ ಹಿಂದೆ ‘ನಂಬರ್‌ ಗೇಮ್’‌ – ಬಿಲ್‌ ಪಾಸ್‌ ಆಗುತ್ತಾ?

ಘಟನೆ ಏನು?
ಬೆಂಗಳೂರು ಹೊರವಲಯದ ನೆಲಮಂಗಲ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿತ್ತು. ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್, ವೋಲ್ವೋ ಕಾರಿನ ಮೇಲೆ ಉರುಳಿದ್ದ ಪರಿಣಾಮ ಕಾರಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಬಲಿ ಆಗಿದ್ದರು. ಮೃತರನ್ನು 48 ವರ್ಷದ ಐಟಿ ಉದ್ಯಮಿ ಚಂದ್ರಮ್ ಯೇಗಪ್ಪಗೋಳ್, 42 ವರ್ಷದ ಗೌರಾಬಾಯಿ, 12 ವರ್ಷದ ದೀಕ್ಷಾ, 6 ವರ್ಷದ ಆರ್ಯ, ಜ್ಞಾನ್ ಏಗಪ್ಪ, 36 ವರ್ಷದ ವಿಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.

ವೀಕೆಂಡ್ ಇದ್ದ ಕಾರಣ ಚಂದ್ರಮ್ ಕುಟುಂಬ ಇತ್ತೀಚಿಗಷ್ಟೇ ಖರೀದಿಸಿದ್ದ ಹೊಸ ವೋಲ್ವೋ ಕಾರಿನಲ್ಲಿ ತಮ್ಮ ಊರಿಗೆ ಹೊರಟಿತ್ತು. ಆದರೆ ಟೀ.ಬೇಗೂರು ಸಮೀಪ ಕಂಟೇನರ್ ಉರುಳಿ, ಕಾರಲ್ಲಿಯೇ ಎಲ್ಲರೂ ಸಾವನ್ನಪ್ಪಿದ್ದಾರೆ. ದಾಬಸ್‌ಪೇಟೆಯಿಂದ ಬೆಂಗಳೂರಿಗೆ ಕಂಟೇನರ್ ಬರುತ್ತಿತ್ತು. ತನ್ನ ಮುಂದಿನ ಕಾರನ್ನು ಸೇಫ್ ಮಾಡಲು ಹೋಗಿ ಹೀಗಾಗಿದೆ ಎಂದು ಚಾಲಕ ಹೇಳಿಕೊಂಡಿದ್ದಾನೆ. ಈ ಅಪಘಾತದ ಪರಿಣಾಮ ವೋಲ್ವೋ ಮುಂದಿದ್ದ ವಾಹನಗಳು ಸಡನ್ ಬ್ರೇಕ್ ಹಾಕಿದಕ್ಕೆ ಹಲವು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. 2 ಲಾರಿ, 2 ಕಾರು, ಸ್ಕೂಲ್ ಬಸ್ ಒಂದಕ್ಕೊಂದು ಟಚ್ ಆಗಿವೆ.

ಸರಣಿ ಅಪಘಾತದಿಂದಾಗಿ ಬೆಂಗಳೂರು-ತುಮಕೂರು ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ, ಸವಾರರು ಪರದಾಡಿದರು. ಇನ್ನೂ ಮೃತ ಉದ್ಯಮಿ ಚಂದ್ರಮ್ ಮೂಲತಃ ಮಹಾರಾಷ್ಟ್ರದ ಜತ್ ತಾಲೂಕಿನ ಮೊರಬಗಿ ಗ್ರಾಮದವರು. ಬೆಂಗಳೂರಿನಲ್ಲಿ ಐಎಎಸ್‌ಟಿ ಎಂಬ ಸಂಸ್ಥೆ ಸ್ಥಾಪಿಸಿ, 300 ಜನಕ್ಕೆ ಕೆಲಸ ಕೊಟ್ಟಿದ್ದರು. ಇದೀಗ ಸಂಸ್ಥೆ ಸಿಬ್ಬಂದಿ ದಿಕ್ಕು ತೋಚದಂತಾಗಿದ್ದು, ಕುಟುಂಬಸ್ಥರು ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ.ಇದನ್ನೂ ಓದಿ: ಅಕಸ್ಮಾತ್ ಹುಂಡಿಗೆ ಬಿದ್ದ ಐಫೋನ್ ದೇವಸ್ಥಾನದ ಪಾಲು – ವಾಪಸ್ ಕೊಡಲ್ಲ ಎಂದ ಮಂಡಳಿ

Share This Article