ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯದ ಕಡೆಗಣನೆ: ಎಎಪಿ

Public TV
2 Min Read

ಬೆಂಗಳೂರು: ಲಿಂಗಾಯತ (Lingayat) ಸಮುದಾಯವನ್ನು ಬಿಜೆಪಿ (BJP), ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಪಕ್ಷಗಳು ಕಡೆಗಣಿಸಿವೆ. ಚುನಾವಣೆ ಸಮಯದಲ್ಲಿ ಮಾತ್ರ ಲಿಂಗಾಯತರ ಓಲೈಕೆಯ ನಾಟಕವಾಡುತ್ತಿರುವುದು ಖಂಡನೀಯ ಎಂದು ಆಮ್ ಆದ್ಮಿ ಪಾರ್ಟಿಯ (AAP) ರಾಜ್ಯ ಕಾರ್ಯಾಧ್ಯಕ್ಷ ರವಿಚಂದ್ರ ನೆರಬೆಂಚಿ ಹೇಳಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ನಾಡಿನ ಶಿಕ್ಷಣ ಕ್ಷೇತ್ರಕ್ಕೆ ಲಿಂಗಾಯತ ಮಠಗಳು ಹಾಗೂ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ. ಇವುಗಳು ಇಲ್ಲದಿದ್ದರೆ ರಾಜ್ಯವು ಶಿಕ್ಷಣದಲ್ಲಿ ಹಿಂದುಳಿದು ಬಿಹಾರ ಹಾಗೂ ಉತ್ತರ ಪ್ರದೇಶದಂತೆ ಆಗುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ: ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತ ; ಕಾರು, ಟಿಪ್ಪರ್‌ ಡಿಕ್ಕಿ

ರಾಜಕೀಯ ಕಾರಣಗಳಿಗಾಗಿ ಲಿಂಗಾಯತ ಸಮುದಾಯವನ್ನು ಅವಹೇಳನ ಮಾಡುವಂತಹ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಬಿಜೆಪಿಯು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S.Yediyurappa) ಅವರನ್ನು ದಿಢೀರ್ ಸಿಎಂ ಸ್ಥಾನದಿಂದ ಕೆಳಗಿಳಿಸಿ ಕೇವಲವಾಗಿ ನಡೆಸಿಕೊಂಡಿದ್ದಾರೆ. ನಂತರ ಲಿಂಗಾಯತರ ಓಲೈಕೆಗಾಗಿ ಬಿಜೆಪಿಯ ಕೇಂದ್ರ ಸಮಿತಿಯಲ್ಲಿ ಸ್ಥಾನ ನೀಡಲಾಯಿತು. ವೀರೇಂದ್ರ ಪಾಟೀಲ್ ಅವರನ್ನು ಸರಿಯಾಗಿ ನಡೆಸಿಕೊಳ್ಳದೆ ಕಾಂಗ್ರೆಸ್ ಅನುಭವಿಸಿದ ಸೋಲನ್ನು ಬಿಜೆಪಿ ಕೂಡ ಅನುಭವಿಸಲಿದೆ ಎಂದು ಅವರು ಕಿಡಿಕಾರಿದ್ದಾರೆ.

ಆಮ್ ಆದ್ಮಿ ಪಾರ್ಟಿಯ ನೀತಿಗಳು ಹಾಗೂ ಬಸವಣ್ಣನವರ ತತ್ವಗಳು ಒಂದೇ ಆಗಿವೆ. ಸಮಾನತೆ, ಮಹಿಳಾ ಸಬಲೀಕರಣ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕೆಂದು ಬಸವಣ್ಣನವರು 12ನೇ ಶತಮಾನದಲ್ಲೇ ಪ್ರತಿಪಾದಿಸಿದ್ದರು. ಆಮ್ ಆದ್ಮಿ ಪಾರ್ಟಿಯು ದೆಹಲಿಯಲ್ಲಿ ಅವುಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದೆ. ಬಸವಣ್ಣನವರ ನಾಡಿನಲ್ಲೂ ಅದೇ ಮಾದರಿಯ ಆಡಳಿತ ನೀಡಲು ಈ ಚುನಾವಣೆಯಲ್ಲಿ ಅವಕಾಶ ದೊರೆಯುವ ವಿಶ್ವಾಸವಿದೆ. ರಾಜ್ಯದ ಅನೇಕ ಲಿಂಗಾಯತ ಯುವಕರು ಹಾಗೂ ಮುಖಂಡರು ಆಮ್ ಆದ್ಮಿ ಪಾರ್ಟಿ ಸೇರುತ್ತಿರುವುದು ನಮ್ಮ ಉತ್ಸಾಹ ಹೆಚ್ಚಿಸಿದೆ ಎಂದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (Basavaraj Bommai) 2ಎ ಮೀಸಲಾತಿ ನೀಡುವುದಾಗಿ ತಾಯಿಯ ಮೇಲೆ ಆಣೆ ಮಾಡಿದ್ದರು. ಈಗ ಆ ವಿಚಾರವನ್ನು ಕಡೆಗಣಿಸಿರುವುದು ಇಡೀ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ. ಶಿಕ್ಷಣ ಹಾಗೂ ನೌಕರಿಯಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇ ಟೋಲ್ ಖಂಡಿಸಿ ಬಿಜೆಪಿ ಎಂಎಲ್‍ಸಿ ಪ್ರತಿಭಟನೆ

Share This Article
Leave a Comment

Leave a Reply

Your email address will not be published. Required fields are marked *