10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ – ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ

Public TV
2 Min Read

ನವದೆಹಲಿ: 34 ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಕ್ರಿಕೆಟಿಗ, ಪಂಜಾಬ್‌ ಕಾಂಗ್ರೆಸ್‌ (Punjab Congress) ಮಾಜಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು (Navjot Singh Sidhu) 10 ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ.

ಸಿಧು ಶನಿವಾರ ಬಿಡುಗಡೆಯಾಗುವುದಾಗಿ ಪಂಜಾಬ್‌ ಅಧಿಕಾರಿಗಳು ತಿಳಿಸಿದ್ದು, ಬೆಳಗ್ಗೆ ಸಿಧು ಅಧಿಕೃತ ಟ್ಬಿಟ್ಟರ್‌ ಖಾತೆಯಿಂದ ಟ್ವೀಟ್‌ ಮಾಡಲಾಗಿದೆ. ಸಿಧು ಜೈಲಿನಿಂದ ಹೊರಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಟ್ವೀಟ್‌ ಮೂಲಕ ತಿಳಿಸಲಾಗಿದೆ. ಇದನ್ನೂ ಓದಿ: ಸಿಧು ಈಗ ಖೈದಿ ನಂ.241383 – 8 ಕೊಲೆ ಪಾತಕಿಗಳಿರುವ ಸೆಲ್‍ನಲ್ಲಿ ವಾಸ

ಈಗಾಗಲೇ ಸಿಧು ಬೆಂಬಲಿಗರು ಪಟಿಯಾಲ ಜೈಲಿನ (Patiala Jail) ಮುಂಭಾಗದಲ್ಲಿ ಭವ್ಯ ಸ್ವಾಗತ ಕೋರಲು ಕಾದು ಕುಳಿತಿದ್ದಾರೆ. ಡೋಲು ವಾದ್ಯಗಳ ಸಿದ್ಧತೆ ಮಾಡಿಕೊಂಡಿದ್ದು, ವಿವಿಧೆಡೆ ಪೋಸ್ಟರ್‌ ಸಹ ಅಳವಡಿಸಿದ್ದಾರೆ.

1988ರಲ್ಲಿ ವೃದ್ಧರೊಬ್ಬರ ಮೇಲೆ ರಸ್ತೆಯಲ್ಲಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ (Supreme Court) 1 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಸಿಧು ಅವರನ್ನು ಉತ್ತಮ ನಡವಳಿಕೆಯ ಕಾರಣದಿಂದ ಬೇಗ ಬಿಡುಗಡೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಸಿಧು ಪರ ವಕೀಲ ಹೆಚ್‌.ಪಿ.ಎಸ್‌ ವರ್ಮಾ ಮಾತನಾಡಿ, ರಾಜ್ಯದ ಸಾಮಾನ್ಯ ಉಪಶಮನ ನೀತಿ ಅಡಿಯಲ್ಲಿ ಕಾಂಗ್ರೆಸ್‌ ನಾಯಕ ಸಿಧು ಅವರನ್ನ ಬಿಡುಗಡೆ ಮಾಡಲಾಗುತ್ತಿದೆ. ಸಿಧು ಅವರ ಬಿಡುಗಡೆ ಅವಧಿ ಮೇ ತಿಂಗಳಿಗೆ ನಿಗದಿಯಾಗಿತ್ತು. ಆದರೆ ಉತ್ತಮ ನಡವಳಿಕೆ ಹೊಂದಿರುವ ಎಲ್ಲಾ ಕೈದಿಗಳಿಗೆ ಶಿಕ್ಷೆಯ ಅವಧಿಯನ್ನ ಕಡಿತಗೊಳಿಸಲಾಗುತ್ತದೆ. ಹಾಗಾಗಿ ಸಿಧು ಅವರು 2 ತಿಂಗಳು ಮುಂಚಿತವಾಗಿಯೇ ಬಿಡುಗಡೆಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?
1988ರಲ್ಲಿ ವೃದ್ಧರೊಬ್ಬರ ಮೇಲೆ ರಸ್ತೆಯಲ್ಲಿ ದಾಂಧಲೆ ನಡೆಸಿ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಗುರ್ನಮ್ ಮೃತಪಟ್ಟಿದ್ದರು. ಸ್ಥಳೀಯ ಕೋರ್ಟ್‌, ಹೈಕೋರ್ಟ್‌ ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಸುಪ್ರೀಂ ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ ಮತ್ತು ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ನ್ಯಾಯಪೀಠ 2018ರಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 323ರ ಅಡಿಯಲ್ಲಿ ಅಪರಾಧಿ ಎಂದು ತೀರ್ಪು ನೀಡಿ 1,000 ರೂಪಾಯಿ ದಂಡ ವಿಧಿಸಿತ್ತು. ಆದರೆ ಜೈಲು ಶಿಕ್ಷೆಯಿಂದ ಸಿಧುಗೆ ವಿನಾಯಿತಿ ನೀಡಲಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್‌ ಸೇರಲು ಪ್ರಶಾಂತ್‌ ಕಿಶೋರ್‌ ನನ್ನ 70 ಬಾರಿ ಭೇಟಿಯಾಗಿದ್ದಾರೆ: ನವಜೋತ್‌ ಸಿಧು

ಜೈಲು ಶಿಕ್ಷೆಯಿಂದ ವಿನಾಯಿತಿ ನೀಡಿದ್ದನ್ನು ಪ್ರಶ್ನಿಸಿ ಸಂತ್ರಸ್ತನ ಕುಟುಂಬದ ಸದಸ್ಯರು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ 1 ವರ್ಷ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು.

Share This Article