ಪೊಲೀಸರ ಮುಂದೆ ಶರಣಾಗಲು ಹೆಚ್ಚಿನ ಸಮಯ ಕೇಳಿದ ಸಿಧು

Public TV
1 Min Read

ನವದೆಹಲಿ: 34 ವರ್ಷದ ಹಿಂದಿನ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಪೊಲೀಸರ ಮುಂದೆ ಶರಣಾಗಲು ಕೆಲವು ವಾರಗಳ ಸಮಯಬೇಕು ಎಂದು ಮನವಿ ಮಾಡಿದ್ದಾರೆ.

ಇಂದು ತಮ್ಮ ವಕೀಲ ಅಭಿಷೇಕ್ ಮನು ಸಿಂಘ್ವಿ ಮೂಲಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾ.ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ವಿಷಯ ಪ್ರಸ್ತಾಪಿಸಿದರು. ಈ ವೇಳೆ ವಕೀಲರು, ಆರೋಗ್ಯ ಸಮಸ್ಯೆಗಳ ಕಾರಣದಿಂದ ತಕ್ಷಣ ಪೊಲೀಸರ ಮುಂದೆ ಶರಣಾಗಲು ಸಾಧ್ಯವಿಲ್ಲ. ವೈದ್ಯಕೀಯ ಸಲಹೆಗಳ ಬಳಿಕ ನಾನು ಪೊಲೀಸರ ಮುಂದೆ ಶರಣಾಗತನಾಗುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಳೆಗೆ ತುಂಬಿದ ಯಗಚಿ ಜಲಾಶಯ 

supreme court 12

ಪ್ರತಿಕ್ರಿಯಿಸಿದ ನ್ಯಾಯಪೀಠ, ಇದಕ್ಕೆ ಸಂಬಂಧಿಸಿದ ಪ್ರತ್ಯೇಕ ಔಪಚಾರಿಕ ಅರ್ಜಿ ಸಲ್ಲಿಸಿ. ಆ ಬಳಿಕ ನಾವು ಈ ವಿಚಾರದ ಬಗ್ಗೆ ಪರಿಶೀಲನೆ ನಡೆಸಿ ಆದೇಶ ನೀಡುತ್ತೇವೆ ಎಂದು ಹೇಳಿತು. ಗುರುವಾರ ನ್ಯಾ.ಎಂ.ಎಂ.ಖಾನ್ವಿಲ್ಕರ್ ನೇತೃತ್ವದ ದ್ವಿಸದಸ್ಯ ಪೀಠ 1988ರ ಪ್ರಕರಣವೊಂದರಲ್ಲಿ ಸಿಧುಗೆ ಒಂದು ವರ್ಷ ಶಿಕ್ಷೆ ವಿಧಿಸಿತ್ತು.

ಏನಿದು ಪ್ರಕರಣ?
1988ರಲ್ಲಿ ವೃದ್ಧರೊಬ್ಬರ ಮೇಲೆ ರಸ್ತೆಯಲ್ಲಿ ಸಿಧು ದಾಂಧಲೆ ನಡೆಸಿ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಗುರ್ನಮ್ ಮೃತಪಟ್ಟಿದ್ದರು. ಸ್ಥಳೀಯ ಕೋರ್ಟ್‌, ಹೈಕೋರ್ಟ್‌ ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಸುಪ್ರೀಂ ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ ಮತ್ತು ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ನ್ಯಾಯಪೀಠ 2018ರಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 323ರಡಿಯಲ್ಲಿ ಅಪರಾಧಿ ಎಂದು ತೀರ್ಪು ನೀಡಿ 1000 ರೂಪಾಯಿ ದಂಡ ವಿಧಿಸಿತ್ತು. ಆದರೆ ಜೈಲು ಶಿಕ್ಷೆಯಿಂದ ಸಿಧುಗೆ ವಿನಾಯಿತಿ ನೀಡಲಾಗಿತ್ತು. ಇದನ್ನೂ ಓದಿ: ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಕರೆ ಮಾಡಿದ ಭೂಪ 

ಜೈಲು ಶಿಕ್ಷೆಯಿಂದ ವಿನಾಯಿತಿ ನೀಡಿದ್ದನ್ನು ಪ್ರಶ್ನಿಸಿ ಸಂತ್ರಸ್ತನ ಕುಟುಂಬದ ಸದಸ್ಯರು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *