ಉಡುಪಿಯ ನವೀನ್‍ಗೆ ಯುಪಿಎಸ್‍ಸಿಯಲ್ಲಿ 37ನೇ ಶ್ರೇಯಾಂಕ

Public TV
2 Min Read

ಉಡುಪಿ: ಬಹು ನಿರೀಕ್ಷಿತ ಯುಪಿಎಸ್‍ಸಿ ರಿಸಲ್ಟ್ ಘೋಷಣೆಯಾಗಿದೆ. ಮೊದಲ ಶ್ರೇಯಾಂಕ ಕರ್ನಾಟಕದ ಪಾಲಾಗಿದೆ. ದೇಶದಲ್ಲೇ 37ನೇ ಶ್ರೇಯಾಂಕ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲುವಿನ ನವೀನ್ ಭಟ್‍ಗೆ ಸಿಕ್ಕಿದೆ.

ಸದ್ಯ ಬೆಂಗಳೂರಿನಲ್ಲಿರುವ ನವೀನ್, ಚೆನ್ನೈನ ಶಂಕರ ಐಎಎಸ್ ಅಕಾಡೆಮಿಯ ವಿದ್ಯಾರ್ಥಿಯಾಗಿ ಕೋಚಿಂಗ್ ಪಡೆದಿದ್ದರು. ಬೆಂಗಳೂರಿನ ವಿಜನ್ ಕೋಚಿಂಗ್ ಸೆಂಟರ್‍ನಲ್ಲಿ ಕೂಡಾ ನವೀನ್ ಭಟ್ ಯುಪಿಎಸ್‍ಸಿ ಪರೀಕ್ಷೆಗೆ ತರಬೇತಿ ಪಡೆದು ತಯಾರಿ ಮಾಡಿದ್ದರು. ನವೀನ್ ತಂದೆ ಉಮೇಶ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಸಿವಿಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸ್ತಾಯಿದ್ದಾರೆ. ತಾಯಿ ವಿಜಯಲಕ್ಷ್ಮೀ ಭಟ್ ಮನೆಯನ್ನು ನಿರ್ವಹಣೆ ಮಾಡುತ್ತಾರೆ. ಉಮೇಶ್ ಭಟ್ ವೈ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದವರು. ನವೀನ್ ಚಾಮರಾಜಪೇಟೆಯಲ್ಲಿ ಗೆಳೆಯರ ಜೊತೆ ಇದ್ದು, ಕೋಚಿಂಗ್ ಪಡೆಯುತ್ತಿದ್ದಾರೆ.

ಪಬ್ಲಿಕ್ ಟಿವಿ ಜೊತೆ ನವೀನ್ ತಮ್ಮ ವಿದ್ಯಾಭ್ಯಾಸ ಹಾಗೂ ತರಬೇತಿ ಪಡೆದ ಬಗ್ಗೆ ಮಾತಾಡಿದ್ದಾರೆ.

ಬಿಎಂಸಿ ಸ್ಟೂಡೆಂಟ್: ನಾನು ಬೆಂಗಳೂರು ಮೆಡಿಕಲ್ ಕಾಲೇಜು ವಿದ್ಯಾರ್ಥಿ. ಎಂಬಿಬಿಎಸ್ ಮುಗಿಸಿ ಒಂದು ವರ್ಷ ಆಯ್ತು. ವರ್ಷದಿಂದೀಚೆ ಯುಪಿಎಸ್‍ಸಿ ಕೋಚಿಂಗ್ ಪಡೆಯುತ್ತಿದ್ದೇನೆ. ಅಳಿಕೆಯ ಸತ್ಯಸಾಯಿ ಸಂಸ್ಥೆಯಲ್ಲಿ ಪಿಯುಸಿ ತನಕದ ಶಿಕ್ಷಣವನ್ನ ಪಡೆದಿದ್ದೇನೆ. ನಮ್ಮದು 10 ಜನರ ಸ್ಟಡೀ ಗ್ರೂಪ್ ಇತ್ತು. ಹಾರ್ಡ್ ವರ್ಕ್ ಜೊತೆ ಸ್ಮಾರ್ಟ್ ವರ್ಕ್ ಮಾಡಿದ್ದರಿಂದ ಈ ಸಾಧನೆ ಸಾಧ್ಯ ಆಯ್ತು.

ಸಿಇಟಿಯಲ್ಲಿ ಮೊದಲನೇ ಶ್ರೇಯಾಂಕ: 2009ರಲ್ಲಿ ನವೀನ್ ಭಟ್ ಸಿಇಟಿಯಲ್ಲಿ ರಾಜ್ಯಕ್ಕೆ ಮೊದಲ ಶ್ರೇಯಾಂಕ ಪಡೆದಿದ್ದರು. ಎಂಜಿನಿಯರಿಂಗ್ ವಿಭಾಗದಲ್ಲಿ ನವೀನ್ ಈ ಸಾಧನೆಯನ್ನು ಮಾಡಿದ್ದರು.

ನವೀನ್ ಹವ್ಯಾಸಗಳು: ನವೀನ್ ಓದು ಓದು ಮತ್ತು ಓದು ಅಂತ ಬರೀ ಪುಸ್ತಕ ಹಿಡ್ಕೊಂಡು ಕೂರುವವರಲ್ಲ. ಓದಿನ ನಡುವೆ ಟಿವಿ ನೋಡೋದು ಹಾಗೂ ಮೂಡ್ ಇದ್ದಾಗ ಚೆಸ್ ಆಡ್ತಾರೆ. ದೇಹಕ್ಕೆ ಸ್ವಲ್ಪ ವ್ಯಾಯಾಮ ಬೇಕು ಅಂದಾಗ ಗೆಳೆಯರ ಜೊತೆ ಸೇರಿಕೊಂಡು ಫುಟ್ಬಾಲ್, ವಾಲಿಬಾಲ್ ಆಡ್ತಾರೆ.

ಯಕ್ಷಗಾನ ಇಷ್ಟ: ಬಾಹುಬಲಿ -2 ರೀಸೆಂಟ್ ಆಗಿ ನೋಡಿರುವ ಮೂವಿ. ಒಳ್ಳೊಳ್ಳೆ ಮೂವಿಯನ್ನ ಥಿಯೇಟರ್‍ಗೆ ಹೋಗಿಯೇ ನೋಡ್ತೇನೆ. ತಂದೆಗೆ ಯಕ್ಷಗಾನ ಅಂದ್ರೆ ಇಷ್ಟ. ಹೀಗಾಗಿ ನಾನೂ ಎಲ್ಲಾದ್ರು ಯಕ್ಷಗಾನ ನಡೀತಿದ್ರೆ ಸ್ವಲ್ಪ ಹೊತ್ತು ನಿಂತು ಆಟ ನೋಡಿ ಭಾಗವತಿಕೆ ಕೇಳಿ ಹೋಗ್ತೇನೆ ಅಂತಾರೆ ನವೀನ್.

ಕರ್ನಾಟಕದಲ್ಲೇ ಐಎಎಸ್ ಅಧಿಕಾರಿಯಾಗ್ತೇನೆ: ರಾಜ್ಯದಲ್ಲಿ ಐಎಎಸ್ ಮೂರು ಪೋಸ್ಟ್ ಗಳು ಖಾಲಿಯಿದೆ. ಇಲ್ಲೇ ನಾನು ಸೇವೆ ಮಾಡಬೇಕು ಅಂತ ಅಂದ್ಕೊಂಡಿದ್ದೇನೆ. ನನಗಿಂದೆ ಮುಂದೆ ಇಬ್ಬರು ಇದ್ದು ಮೂರರ ಪೈಕಿ ಒಂದು ಪೋಸ್ಟ್ ನನಗೆ ಸಿಗುತ್ತೆ. ಐಎಎಸ್ ಅಧಿಕಾರಿಯಾಗಿ ರಾಜ್ಯಕ್ಕೆ, ದೇಶಕ್ಕೆ ಹೆಮ್ಮೆ ತರುವಂತಹ ಕೆಲಸ ಮಾಡುತ್ತೇನೆ. ದೇವರ ಕೃಪೆ, ತಂದೆತಾಯಿ ಆಶೀರ್ವಾದ, ಗೆಳೆಯರ ಪ್ರೋತ್ಸಾಹದಿಂದ ಉತ್ತಮ ಸೇವೆ ನೀಡುತ್ತೇನೆ ಎಂಬ ನಂಬಿಕೆಯಿದೆ ಅಂತ ನವೀನ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *