ಜನವರಿ 8ಕ್ಕೆ ರಾಷ್ಟ್ರವ್ಯಾಪಿ ಮುಷ್ಕರ- ಬೆಂಬಲ ಸೂಚಿಸಿ ಐಟಿ ಉದ್ಯೋಗಿಗಳಿಂದ ಬೈಕ್ ರ‍್ಯಾಲಿ

Public TV
1 Min Read

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಜನವರಿ 8ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ಇಂದು ಮಡಿವಾಳದಿಂದ ಕೋನಪ್ಪನ ಆಗ್ರಹಾರದವರೆಗೂ ನೂರಾರು ಮಂದಿ ಐಟಿ ಉದ್ಯೋಗಿಗಳು ಬೈಕ್ ರ‍್ಯಾಲಿ ನಡೆಸಿದರು.

ಕೇಂದ್ರ ಸರ್ಕಾರದವು ಕಾರ್ಮಿಕ ವಿರೋಧಿ ನೀತಿ ರೂಪಿಸುತ್ತಿದ್ದು, ಮಲತಾಯಿ ಧೋರಣೆ ತೋರುತ್ತಿದೆ. ಜೊತೆಗೆ ಬಂಡವಾಳಶಾಹಿಗಳ ಪರವಾಗಿ ನೀತಿಗಳನ್ನು ರೂಪಿಸುತ್ತಿದೆ. ಅದನ್ನು ಕೂಡಲೇ ಬದಲಾಯಿಸಬೇಕು, ಕಾರ್ಮಿಕ ನೀತಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸಲಾಯಿತು. ಇದರ ಜೊತೆಗೆ ಪೌರತ್ವ ತಿದ್ದುಪಡೆ ವಿರುದ್ಧವೂ ಇಂದು ಬೈಕ್ ರ‍್ಯಾಲಿ ಮುಖಾಂತರ ವಿರೋಧವನ್ನು ವ್ಯಕ್ತಪಡಿಸಲಾಯಿತು.

ಕೇಂದ್ರ ಸರ್ಕಾರ ಕಾರ್ಮಿಕರ ಪರವಾಗಿರುವ ಯೋಜನೆಗಳನ್ನು ರೂಪಿಸಬೇಕು. ಕನಿಷ್ಠ ವೇತನ 21 ಸಾವಿರ ರೂ.ಗಳನ್ನ ಅಸಂಘಟಿತ ವಲಯದ ಕಾರ್ಮಿಕರಿಗೆ ನೀಡುವಂತಾಗಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆಯನ್ನು ಘೋಷಿಸಬೇಕು ಎಂದು ಒತ್ತಾಯಿಸಲಾಯಿತು.

ಈ ರ‍್ಯಾಲಿಯಲ್ಲಿ ಕರ್ನಾಟಕ ರಾಜ್ಯ ಐಟಿ ಮತ್ತು ಐಟಿಯೇತರ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಹಾಗೂ ಐಟಿ-ಬಿಟಿ ಉದ್ಯೋಗಿಗಳು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸಿಐಟಿಯು ರಾಜ್ಯಘಟಕದ ಅಧ್ಯಕ್ಷೆ ವರಲಕ್ಷ್ಮಿ ಅವರು, ಭಾರತ ದೇಶ ಬಹಳ ದೊಡ್ಡ ಮಟ್ಟದ ಅರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿದೆ. ನಮ್ಮ ದೇಶ ಅರ್ಥಿಕ ಬಿಕ್ಕಟ್ಟಿನಿಂದ ಹೊರಬರಬೇಕಾದರೆ ಕಾರ್ಮಿಕ ನೀತಿಗಳು ಬದಲಾಗಬೇಕಿದೆ. ಕೆಲ ಕಾರ್ಖಾನೆಗಳು ಮುಚ್ಚಿ ಹೋಗುತ್ತಿವೆ. ಪಬ್ಲಿಕ್ ಸೆಕ್ಟರ್ಸ್ ಸಹ ಬಂದ್ ಆಗುತ್ತಿದೆ. ಐಟಿ ಸೆಕ್ಟರ್ಸ್ ರಾತ್ರೋ ರಾತ್ರೋ ಬಂದ್ ಆಗುತ್ತಿವೆ ಎಂದು ಹೇಳಿದರು.

ದೇಶ ಪ್ರೇಮ ಎನ್ನುವುದು ಹೆಸರಲ್ಲಿ ಕೇಂದ್ರ ಸರ್ಕಾರವು ಜನರಿಗೆ ಮೋಸ ಮಾಡುತ್ತಿದೆ. ನಾವು ವೇತನವಾಗಿ ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಾಗಿದೆ. ಇದರಿಂದಾಗಿ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *