Steel ಬ್ರಿಡ್ಜ್ ಅಲ್ಲ, ಅದು Steal ಬ್ರಿಡ್ಜ್- ಕೈ ಸರ್ಕಾರದಿಂದ ಬೆಂಗ್ಳೂರಿಗೆ 5 ಕೊಡುಗೆ: ಮೋದಿ

Public TV
3 Min Read

ಬೆಂಗಳೂರು: ನಗರದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಮಿಸಲು ಹೊರಟಿದ್ದ ಸ್ಟೀಲ್ ಬ್ರಿಡ್ಜ್ `Steel’ ಬ್ರಿಡ್ಜ್ ಆಗಿರಲಿಲ್ಲ ಅದು ‘Steal’ ಬ್ರಿಡ್ಜ್ ಆಗಿತ್ತು ಎಂದು ಪ್ರಧಾನಿ ಮೋದಿಯವರು ವ್ಯಂಗ್ಯವಾಡಿದ್ದಾರೆ.

ಕೆಂಗೇರಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಳೆದ 5 ವರ್ಷದ ಆಡಳಿತದಲ್ಲಿ ಬೆಂಗಳೂರು ಜನತೆಗೆ 5 ಕೊಡುಗೆ ಕೊಟ್ಟಿದೆ. ಸಿಲಿಕಾನ್ ವ್ಯಾಲಿಯಾಗಿದ್ದ ಬೆಂಗಳೂರನ್ನ ಪಾಪದ ವ್ಯಾಲಿಯನ್ನಾಗಿಸಿದೆ. ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿ ಮಾಡಿದೆ ಜೊತೆಗೆ ಕ್ರೈಂ ಸಿಟಿಯಾಗಿ, ಗೊಂದಲದ ಗೂಡಾಗಿ ಪರಿವರ್ತನೆ ಮಾಡಿದೆ ಎಂದು ಟೀಕಿಸಿದರು.

ರಸ್ತೆ ಗುಂಡಿ, ಟ್ರಾಫಿಕ್ ಜಾಮ್, ದುರವಸ್ಥೆ ಎಲ್ಲದರಿಂದ ಬೆಂಗಳೂರು ನಗರ ಅವ್ಯವಸ್ಥೆಯ ಗೂಡಾಗಿದೆ. ಇದರಿಂದ ಆನೇಕ ಹೆಣ್ಮಕ್ಕಳು, ಯುವಕರು, ವೃದ್ಧರು ಪ್ರಾಣಕಳೆದುಕೊಳ್ಳುವಂತಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ಸ್ಪರ್ಧೆ ಇದೆ. ಒಂದು ಇಲಾಖೆ ಮತ್ತೊಂದು ಇಲಾಖೆ ಜೊತೆ ಸ್ಪರ್ಧಿಸುತ್ತಿದೆ. ಭ್ರಷ್ಟಾಚಾರ ವಿಚಾರದಲ್ಲಿ ಮಂತ್ರಿಗಳ ನಡುವೆಯೂ ಪೈಪೋಟಿ ನಡೆಯುತ್ತಿದೆ. ಸರ್ಕಾರ ಹಾಗೂ ಮಂತ್ರಿಗಳು ಲ್ಯಾಂಡ್ ಮಾಫಿಯಾದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.

ಮನಸಾ ಇಚ್ಛೆ ಗೂಂಡಾಗಿರಿ ಮಾಡುವವರ ಹಿಂದೆ ಸರ್ಕಾರದ ಶಕ್ತಿ ಇದೆ. ಮಂತ್ರಿ ಪುತ್ರರು ಜನರಿಗೆ ಹೊಡೆಯುವ ಘಟನೆಗಳು ನಡೆಯುತ್ತಿವೆ. ಅಂತಹವರ ರಕ್ಷಣೆಗೆ ಸರ್ಕಾರ ನಿಂತಿದೆ. ಬಿಬಿಎಂಪಿ ಕಚೇರಿ ಒಳಗಡೆ ಕಾಂಗ್ರೆಸ್ ನಾಯಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಏನು ರಕ್ಷಣೆ ಇದೆ ಅಂತಾ ಯೋಚನೆ ಮಾಡಿ ಎಂದು ಟೀಕಿಸಿದರು.

ಬೆಂಗಳೂರು ಕೆರೆಗಳ ಮಹಾನಗರಿ ಎಂದು ಖ್ಯಾತಿ ಪಡೆದಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದಕ್ಕೂ ಮಸಿಬಳಿದಿದೆ. ಕೆರೆಗಳಿಗೂ ಬೆಂಕಿಬೀಳ್ತಿದೆ. ನೀರು ಹರಿಯುವ ಸ್ಥಳದಲ್ಲಿ ಕೆಮಿಕಲ್, ಬೆಂಕಿ ಬಿದ್ದಿರುವ ಘಟನೆ ನಡೆದಿದೆ ಇದು ಕಾಂಗ್ರೆಸ್ ಸರ್ಕಾರಕ್ಕೆ ಹಿಡಿದ ಕೈಗನ್ನಡಿ. ಕೆರೆಗಳು ವಿನಾಶದ ಅಂಚಿಗೆ ಹೋಗಿವೆ. ಬಿಜೆಪಿ ಬೆಂಬಲಿಸಿ ಆ ಕೆರೆಗಳಿಗೆ ಮರು ಜೀವ ಕೊಡುವ ಭರವಸೆ ನೀಡುತ್ತೇನೆ. ಬೆಂಗಳೂರನ್ನ ಉತ್ತಮ ನಗರವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕೊಳಚೆ ನೀರು ನಿರ್ವಹಣೆ ಮಾಡದೆ ಬೆಂಗಳೂರನ್ನ ಕೊಳಚೆಯಿಂದ ಕೂಡಿರುವಂತೆ ಮಾಡಲಾಗಿದೆ. ಸ್ಮಾರ್ಟ್ ಜನರಿರುವ ಬೆಂಗಳೂರು ಸ್ಮಾರ್ಟ್‍ಸಿಟಿ ಆಗಲು ಸಮಯ ಬೇಕಾಗುತ್ತಾ. ಕರ್ನಾಟಕದ ಮಹಾನಗರಗಳನ್ನ ಸ್ವಚ್ಛನಗರ ಮಾಡಲು 7 ನಗರಗಳನ್ನ ಆಯ್ಕೆ ಮಾಡಿದೆ. ಅದಕ್ಕೆ 800 ಕೋಟಿ ಕೊಟ್ಟೆ. ಆದರೆ ಸಿದ್ದರಾಮಯ್ಯ ಸರ್ಕಾರ ಖರ್ಚು ಮಾಡಿದ್ದು 12 ಕೋಟಿ ರೂ. ಮಾತ್ರ. ಇದರಿಂದ ಬೆಂಗಳೂರು ಹಾಗೂ ಇತರೆ ಮಹಾನಗರಗಳು ಎಲ್ಲಿ ಸ್ಮಾರ್ಟ್ ಆಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಯಲಲ್ಲಿ ಶೌಚ ಮಾಡಬಾರದು ಅನ್ನುವ ರಾಷ್ಟೀಯ ಕಾರ್ಯಕ್ರಮಗಳಿವೆ. ಅದನ್ನ ನೂರಕ್ಕೆ ನೂರಷ್ಟು ಜಾರಿಗೆ ತರಲಾಗಿದೆ. ಇಂತಹ ಸೂಕ್ಷ್ಮ ವಿಚಾರದಲ್ಲೂ ಕರ್ನಾಟಕ ಸರ್ಕಾರ ಹಿಂದೆ ಬಿದ್ದಿದೆ. 110 ಕಡೆ ಮಾತ್ರ ಬಯಲು ಮುಕ್ತ ಮಾಡಲಾಗಿದೆ ಎಂದು ಕಿಡಿಕಾರಿದರು.

ಕಳೆದ 2013 ರ ಚುನಾವಣೆ ವೇಳೆ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಪ್ರತಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡಿದ್ದರು. ಈಗ ಪಲ್ಟಿ ಹೊಡೆದಿದ್ದಾರೆ. ಒಂದು ಜಿಲ್ಲೆಯಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಲ್ಲ. ಮೂರು ಜಿಲ್ಲೆಗೆ ಒಂದು ಸೂಪರ್ ಸ್ಪೆಷಾಲಿಟಿ ಅಂತಿದ್ದಾರೆ. ಈ ರೀತಿ ಗಾಳಿಯಲ್ಲಿ ಮಾತನಾಡಿದರೆ ಜನ ವೋಟ್ ಹಾಕಲ್ಲ. ಕಾಂಗ್ರೆಸ್ ನ ಕರ್ನಾಟಕದ ಕೊನೆಯ ಕೋಟೆ ನಿರ್ನಾಮ ಆಗಲಿದೆ. ಮೋದಿ ಸರ್ಕಾರ ಕರ್ನಾಟಕದ ಜೊತೆ ಇದೆ ಅನ್ನೋದನ್ನ ಹೇಳೋಕೆ ಇಷ್ಟಪಡುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣಾ ಮೋಹದಿಂದ ಜೆಡಿಎಸ್ ದೇಶದ್ರೋಹಿ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಚುನಾವಣೆಗಾಗಿ ಬೇರೆ ಬೇರೆ ರಾಜ್ಯದ ಉಗ್ರಗಾಮಿ ಸಂಘಟನೆಗಳಿಗೆ ಬೆಂಬಲಕೊಡುತ್ತಿರುವವರನ್ನ ಕರೆತಂದು ಪ್ರಚಾರ ಮಾಡುತ್ತಿದ್ದಾರೆ. ಇದು ಕರ್ನಾಟಕ್ಕೆ ಮಾಡಿದ ಅವಮಾನ ಎಂದು ಮೋದಿ ಪರೋಕ್ಷವಾಗಿ ಒವೈಸಿ ಜೊತೆಗಿನ ಒಪ್ಪಂದವನ್ನು ಕಟುವಾಗಿ ಟೀಕಿಸಿದರು.

 

https://www.youtube.com/watch?v=C7RVNlHe930

Share This Article
Leave a Comment

Leave a Reply

Your email address will not be published. Required fields are marked *