ಪ್ರಧಾನಿ ಮೋದಿ ಈಗ ಬಂದಿಲ್ಲ, ಮುಂದೆ ಬರ್ತಾರೆ: ಪೇಜಾವರ ಶ್ರೀ

Public TV
1 Min Read

ಉಡುಪಿ: ಚುನಾವಣೆ ಹಿನ್ನೆಲೆಯಲ್ಲಿ ನಗರಕ್ಕೆ ಪ್ರಚಾರ ಭಾಷಣ ಮಾಡಲು ಆಗಮಿಸಲಿರುವ ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಆರಂಭದಲ್ಲಿ ಲಭ್ಯವಾಗಿತ್ತು. ಆದರೆ ಕೊನೆಯಲ್ಲಿ ಈ ಕಾರ್ಯಕ್ರಮ ರದ್ದಾಗಿದ್ದು ಮುಂದೆ ಮೋದಿ ಕೃಷ್ಣ ಮಠಕ್ಕೆ ಯಾವಾಗ ಭೇಟಿ ನೀಡಲಿದ್ದಾರೆ ಎನ್ನುವ ವಿಚಾರವನ್ನು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳು ತಿಳಿಸಿದ್ದಾರೆ.

ಉಡುಪಿಗೆ ಬಂದಾಗ ಮಠಕ್ಕೆ ಬರಬೇಕೆಂದು ಪತ್ರ ಬರೆದಿದ್ದೆ. ಈ ಪತ್ರಕ್ಕೆ ಮೋದಿಯವರ ಆಪ್ತ ಕಾರ್ಯದರ್ಶಿಯವರು ನಮ್ಮ ಕಾರ್ಯದರ್ಶಿಗೆ ಕರೆ ಮಾಡಿ, ರಾಜಕೀಯ ಸಮಾವೇಶದ ನಡುವೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮೋದಿ ತಿಳಿಸಿದ್ದಾರೆ. ಮುಂದೊಂದು ದಿನ ಧಾರ್ಮಿಕ ಕಾರ್ಯಕ್ರಮವನ್ನೇ ನಿಗದಿಪಡಿಸಿ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಆಗಮಿಸಲಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ ಎಂದು ಪೇಜಾವರ ಶ್ರೀ ಹೇಳಿದರು.

ನಮ್ಮ ಪರ್ಯಾಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಲಾಗಿತ್ತು. ಪರ್ಯಾಯ ಸಂದರ್ಭದಲ್ಲೂ ಕೃಷ್ಣಮಠಕ್ಕೆ ಬಂದಿರಲಿಲ್ಲ. ಪ್ರಧಾನಿ ಬರಲಿಲ್ಲವೆಂದು ನಮಗೆ ಬೇಸರವಿಲ್ಲ. ಚುನಾವಣೆ ಸಂದರ್ಭ ದೇವರ ಅನುಗ್ರಹವಾಗುತ್ತದೆ ಉಡುಪಿಯವರೆಗೆ ಬಂದವರು ಈ ಬಾರಿಯಾದರೂ ಮಠಕ್ಕೆ ಬರುವಂತೆ ಪತ್ರ ಬರೆದಿದ್ದೆ ಎಂದು ತಿಳಿಸಿದರು.

ಪ್ರಣಬ್ ಮುಖರ್ಜಿ ಕರೆಯದೆ ಮಠಕ್ಕೆ ಬಂದಿದ್ದರು. ಏನೇ ಆಗಲಿ ಮಂತ್ರಿಗಳು ಬರುತ್ತಾರೆ ಹೋಗುತ್ತಾರೆ. ಜನರ ಕೆಲಸ ಆಗದಿದ್ದರೆ ನಮಗೆ ಬೇಸರವಾಗುತ್ತದೆ. ಮಠಕ್ಕೆ ಬಂದಿಲ್ಲವೆಂದು ಬೇಸರಪಟ್ಟುಕೊಳ್ಳುವುದಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *