ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ- ಶಿಸ್ತು ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹ

Public TV
2 Min Read

ಬೆಂಗಳೂರು: ಕೆಂಗೇರಿ ಮಾರ್ಗದ ಮೆಟ್ರೋ ವಿಸ್ತರಿತ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ಭಾರೀ ವಿರೋಧಕ್ಕೆ ಕಾರಣವಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಸರ್ಕಾರಕ್ಕೆ ಪತ್ರ ಬರೆದು ನಿಯಮ ಉಲ್ಲಂಘಿಸಿ ಕನ್ನಡ ಕಡೆಗಣನೆಗೆ ಕಾರಣರಾದ ಅಧಿಕಾರಿ ನೌಕರರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮೆಟ್ರೋ ವತಿಯಿಂದ ಈ ಬಗ್ಗೆ ಕ್ಷಮೆ ಕೇಳಿದ್ದು, ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ ಎಲ್ಲಾ ಫಲಕಗಳು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿಯೇ ಇದ್ದು, ಮುಖ್ಯ ವೇದಿಕೆಯ ಫಲಕವು ಮಾತ್ರ ಆಂಗ್ಲ ಭಾಷೆಯಲ್ಲಿ ಇದ್ದುದರಿಂದ ಹಲವಾರು ಆಕ್ಷೇಪಣೆಗಳು ಮಾಧ್ಯಮ ಮತ್ತು ಇತರೆ ಸಾಮಾಜಿಕ ಜಾಲಗಳಲ್ಲಿ ಬಂದಿರುತ್ತವೆ. ಈ ತಪ್ಪು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಇದರ ಸಂಪೂರ್ಣ ಹೊಣೆ ನನ್ನದೆ ಎಂದು, ಆಗಿರುವ ತಪ್ಪಿಗೆ ವಿಷಾದಿಸುತ್ತಾ, ಇನ್ನು ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ಕ್ರಮ ವಹಿಸುತ್ತೇನೆ ಮತ್ತು ಈ ತಪ್ಪನ್ನು ಮನ್ನಿಸಬೇಕೆಂದು ಈ ಮೂಲಕ ಕೋರಲಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.

ಟಿ.ಎಸ್ ನಾಗಾಭರಣ ಅವರು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ ಪತ್ರ ಬರೆದು, ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಬರುವ ಎಲ್ಲಾ ಸರ್ಕಾರಿ, ಸರ್ಕಾರೇತರ, ಖಾಸಗಿ ಸಂಸ್ಥೆಗಳು ತಮ್ಮ ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನ ಮಾಡಬೇಕೆಂದು ಈಗಾಗಲೇ ಸಾಕಷ್ಟು ಆಜ್ಞೆ, ಆದೇಶ, ಸೂತ್ತೋಲೆಗಳು ಬಂದಿದ್ದರೂ ಪದೇ ಪದೇ ಕನ್ನಡ ಭಾಷೆಯ ಕಡೆಗಣನೆ ಅಖಂಡ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡುತ್ತಿದೆ. ಈಗ ನಮ್ಮ ಹೆಮ್ಮೆಯ ಸಾರಿಗೆ ಸಂಸ್ಥೆಗಳಲ್ಲೊಂದಾದ ಮೆಟ್ರೋ ಸಂಸ್ಥೆ ತಮ್ಮ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ಮಾಡಿದೆ. ಇದನ್ನೂ ಓದಿ: ಸೆ. 6ರಿಂದ 6 ರಿಂದ 8ನೇ ತರಗತಿ ಶಾಲೆ ಆರಂಭ – ದಕ್ಷಿಣ ಕನ್ನಡ, ಕೊಡಗಿನಲ್ಲಿ ನಿರ್ಬಂಧ ಮುಂದುವರಿಕೆ

ದಿನಾಂಕ 29-08-2021ರಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಂಸ್ಥೆಯ ವತಿಯಿಂದ ನಡೆದ ಕಾರ್ಯಕ್ರಮದ ವೇದಿಕೆಯ ಪರದೆ (ಬ್ಯಾನರ್)ಯ ಮೇಲೆ ಆಡಳಿತ ಭಾಷೆಯಾದ ಕನ್ನಡವನ್ನು ಕಡೆಗಣಿಸಿ ಕೇವಲ ಆಂಗ್ಲ ಭಾಷೆಯನ್ನು ಹಾಕಿರುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಕಷ್ಟು ಮೌಖಿಕ ಹಾಗೂ ಲಿಖಿತ ದೂರುಗಳು ಸಲ್ಲಿಕೆಯಾಗಿವೆ. ಅಲ್ಲದೇ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಗುರಿಯಾಗಿಸಿಕೊಂಡು ಟೀಕೆ ಟಿಪ್ಪಣಿಗಳನ್ನು ಮಾಡಿರುವುದು ತಾವು ಕೂಡ ಗಮನಿಸಿರಲು ಸಾಧ್ಯವಿದೆ. ಆಡಳಿತದಲ್ಲಿ ಕನ್ನಡವನ್ನು ಬಳಸುವಂತೆ ಈ ಹಿಂದೆ ನಡೆದ 2-3 ಪರಿಶೀಲನಾ ಸಭೆಗಳಲ್ಲಿ ತಮಗೆ ಸೂಚಿಸಲಾಗಿತ್ತು. ಮೇಲಾಗಿ ದಿನಾಂಕ 23, 24 ಮತ್ತು 25ರಂದು ಪ್ರಾಧಿಕಾರದಿಂದ ನಡೆದ ಸಾರಿಗೆ ವಲಯದಲ್ಲಿ ಕನ್ನಡ ಅನುಷ್ಠಾನದ ಅಭಿಯಾನದ ನಿಮಿತ್ತ ತಮ್ಮನ್ನು ಖುದ್ದು ಭೇಟಿ ಮಾಡಿ ಆಡಳಿತದಲ್ಲಿ ಶೇ.100ಕ್ಕೆ 100ರಷ್ಟು ಕನ್ನಡವನ್ನು ಬಳಸುವಂತೆ ಕೋರಲಾಗಿತ್ತು. ಆದಾಗ್ಯೂ ಕೂಡ ನಿಗಮದ ವರ್ತನೆ ಅಖಂಡ ಕನ್ನಡಿಗರ ಮನಸ್ಸಿಗೆ ನೋವುಂಟುಮಾಡಿದೆ. ಇದನ್ನೂ ಓದಿ: 2023ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವುದೇ ನಮ್ಮ ಗುರಿ: ಅರುಣ್ ಸಿಂಗ್

ಇದು ಮೇಲ್ಕಾಣಿಸಿದ ರಾಜ್ಯ ಸರ್ಕಾರದ ಆಡಳಿತ ಕನ್ನಡಪರ ಆಜ್ಞೆ-ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿ/ನೌಕರರ ಮೇಲೆ ಸುತ್ತೋಲೆ ಸಂಖ್ಯೆ:ಸಂಕಇ 39ಕೆಒಎಲ್ 2002, ದಿನಾಂಕ:13-06-2002ರನ್ವಯ ಶಿಸ್ತುಕ್ರಮವನ್ನು ಜಾರಿಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾನ್ಯ ಅಧ್ಯಕ್ಷರಾದ ಟಿ.ಎಸ್. ನಾಗಾಭರಣರು ಮೆಟ್ರೋ ರೈಲ್ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಶಿಸ್ತುಕ್ರಮಕ್ಕೆ ಪತ್ರ ಬರೆಯುವ ಮೂಲಕ ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಪತ್ರ ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *