ಬೆಂಗಳೂರು: ಬೆಂಗಳೂರಿನ ಯುಬಿ ಸಿಟಿಯ `ಫರ್ಜಿ ಕೆಫೆ’ಯಲ್ಲಿ ವಿದ್ವತ್ ಮೇಲಿನ ಮಾರಣಾಂತಿಕ ಹಲ್ಲೆ ಮಾಡಿ ಮಲ್ಯ ಆಸ್ಪತ್ರೆಯಲ್ಲೂ ಧಮ್ಕಿ ಹಾಕಿದ್ದ ಶಾಸಕ ಹ್ಯಾರಿಸ್ ಮಗ ನಲಪಾಡ್ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಮಂಗಳವಾರಕ್ಕೆ ಮುಂದೂಡಿದೆ.
ಇಂದು ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭಿಸಿದ ಸಿಟಿ ಸಿವಿಲ್ ಕೋರ್ಟ್ನಲ್ಲಿ ವಾದ-ಪ್ರತಿವಾದಗಳು ಕಾವೇರಿದ ರೀತಿಯಲ್ಲಿ ನಡೆಯಿತು. ಈ ಕುರಿತು ನಾಳೆಯೂ ವಾದ ಮುಂದುವರಿಯಲಿದೆ. ಆರೋಪಿಗಳ ಪರ ಟಾಮಿ ಸೆಬಾಸ್ಟಿನ್ ಮತ್ತು ಬಾಲನ್ ವಾದ ಮಂಡಿಸಿದರು. ವಿಶೇಷ ಅಭಿಯೋಜಕರಾಗಿ ಶ್ಯಾಮ್ ಸುಂದರ್ ಪ್ರತಿವಾದ ಮಂಡಿಸಿದರು.
ವಿದ್ವತ್ ಪರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ಶ್ಯಾಮ್ ಸುಂದರ್ ಅವರಿಗೆ ವಿದ್ವತ್ ಅವರ ಆರೋಗ್ಯದ ಕುರಿತ ಮತ್ತಷ್ಟು ವೈದ್ಯಕೀಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿ ವಿಚಾರಣೆಯನ್ನ ನಾಳೆಗೆ ಮುಂದೂಡಿದರು.
ನಲಪಾಡ್ ಪರ ವಕೀಲರ ವಾದವೇನು?
ವಿದ್ವತ್ ಕೊಲೆ ಮಾಡುವ ಉದ್ದೇಶ ಯಾರಿಗೂ ಇರಲಿಲ್ಲ. ಕೊಲೆ ಉದ್ದೇಶ ಇದ್ದಿದ್ದರೆ ಆಯುಧ ಇಟ್ಟುಕೊಳ್ಳುತ್ತಿದ್ದರು. ಐಸ್ಕ್ಯೂಬ್ ತಲೆ ಮೇಲೆ ಎಸೆದಿದ್ದರಿಂದ ಗಾಯಗಳಾಗಿವೆ. ಬಿಯರ್ ಬಾಟಲ್ ಬಿಸಾಡಿದ್ದಾರೆ. ತಲೆಗೆ ಬೀಸಿರುವ ಮಾಹಿತಿ ಇಲ್ಲ. ಇದು ರಾಜಕೀಯ ದುರುದ್ದೇಶ ಪೂರಿತವಾಗಿರುವ ಘಟನೆಯಾಗಿದ್ದು, ಘಟನೆ ನಡೆದ ಹಲವು ಗಂಟೆಗಳ ನಂತರ ಸೆಕ್ಷನ್ 307 ಸೇರಿಸಲಾಗಿದೆ. ವಿದ್ವತ್ ಈಗಾಗಲೇ ಶೇ. 90 ರಷ್ಟು ಚೇತರಿಸಿಕೊಂಡಿದ್ದಾರೆ ಎಂದು ವಾದಿಸಿದರು.
ವಿದ್ವತ್ ಹೇಳಿಕೆ ಪಡೆಯಲು ಉದ್ದೇಶ ಪೂರ್ವಕವಾಗಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ. ಕಾಲು ಮುರಿದಿದ್ದರಿಂದ ಎಸ್ಕಲೇಟರ್ ಮೇಲೆ ಬಿದ್ದು ವಿದ್ವತ್ ಒದ್ಡಾಡಿದ್ದಾರೆ. ವಿದ್ವತ್ ನೋಡುವುದಕ್ಕೆ ಮತ್ತೆ ಆಸ್ಪತ್ರೆಗೆ ನಲಪಾಡ್ ಹೋಗಿದ್ದ. ಈ ಕೇಸ್ಗೆ ವಿಶೇಷ ಅಭಿಯೋಜಕರ ನೇಮಕ ಮಾಡುವ ಉದ್ದೇಶ ಏನಿತ್ತು ಎಂದು ಪ್ರಶ್ನಿಸಿದರು.
ಪ್ರಕರಣದಲ್ಲಿ ಅನಾವಶ್ಯಕ ಒತ್ತಡ ತರಲು 3ನೇ ವ್ಯಕ್ತಿಯಿಂದಲೂ ಅರ್ಜಿ ಸಲ್ಲಿಸಲಾಗಿದೆ. ಮೊಹಮ್ಮದ್ ನಲಪಾಡ್ಗಿಂತ ವಿದ್ವತ್ ಪ್ರಭಾವಿ ವ್ಯಕ್ತಿಯಾಗಿದ್ದು, ಘಟನೆ ನಂತರ ರಾಜಕೀಯ ವ್ಯಕ್ತಿಗಳು ಪ್ರತಿನಿತ್ಯ ಭೇಟಿಯಾಗುತ್ತಿದ್ದಾರೆ. ಹ್ಯಾರಿಸ್ರನ್ನು ರಾಜಕೀಯವಾಗಿ ಮುಗಿಸಲು ಮಗನನ್ನು ಬಳಸಿಕೊಳ್ಳಲಾಗಿದೆ ಎಂದು ವಾದಿಸಿದರು.
ವಿಶೇಷ ಅಭಿಯೋಜಕರ ವಾದವೇನು?
ವಿದ್ವತ್ ಮೇಲೆ ಉದ್ದೇಶಪೂರ್ವಕವಾಗಿ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಕಾಲು ತಾಕಿದ್ದಕ್ಕೆ ವಿದ್ವತ್ಗೆ ಅವಾಜ್ ಹಾಕಿ ಹೊಡೆದಿದ್ದಾರೆ. ಅಲ್ಲದೇ ವಿದ್ವತ್ ರನ್ನು ಮೆಟ್ಟಿಲುಗಳ ಮೇಲೆ ಎಳೆದು ತಂದು ಆರೋಪಿಗಳು ಹೊಡೆದಿದ್ದಾರೆ. ಮೆಟ್ಟಿಲುಗಳ ಮೇಲೆ ಎಳೆದು ತಂದು ಹೊಡೆಯೋದು ದುರುದ್ದೇಶ ಅಲ್ವಾ? ವಿದ್ವತ್ ಮರ್ಮಾಂಗಕ್ಕೂ ಗಾಯವಾಗುವ ರೀತಿ ಹೊಡೆದಿದ್ದಾರೆ. ನಲಪಾಡ್ ಅಂಡ್ ಗ್ಯಾಂಗ್ ಹೊಡೆಯುತ್ತಿದ್ದರೂ ಬೌನ್ಸರ್ಗಳು ಸುಮ್ಮನಿದ್ದಾರೆ. `ಲೈಫ್ ಆಫ್ ಪೈ’ ಎಂಬ ಮೂವಿ ಹೀರೋ ತರಹ ವಿದ್ವತ್ ಸ್ಥಿತಿ ಆಗಿದೆ ಎಂದು ಶ್ಯಾಮ್ ಸುಂದರು ವಿವರಿಸಿದರು.
ವಿದ್ವತ್ ಮೇಲಿನ ದಾಳಿಗೂ ಮುನ್ನ ಆತನ ಇದ್ದ ಆತನ ಮುಖವನ್ನು ಮತ್ತೆ ಅದೇ ರೀತಿ ನೋಡಲು ಸಾಧ್ಯವಿಲ್ಲ. ಕೊಲೆಯ ಉದ್ದೇಶದಿಂದಲೇ ಆಸ್ಪತ್ರೆವರೆಗೂ ಹಿಂಬಾಲಿಸಿದ್ದಾರೆ. ಇದು ಕೇವಲ 326 ಗಾಯದ ಪ್ರಕರಣವಲ್ಲ ಕೊಲೆ ಯತ್ನದ ಕೇಸ್. ನಲಪಾಡ್ ಗೆ ಜಾಮೀನು ನೀಡಿದರೆ ಸಾಕ್ಷಿಗಳನ್ನು ನಾಶ ಪಡಿಸುತ್ತಾನೆ. ಯಾರು ಏನಾದ್ರೂ ಮಾಡಬಹುದು ಅಂದುಕೊಂಡವರಿಗೆ ಪಾಠ ಆಗಬೇಕು. ಇದು ನಿರ್ಭಯಾ ಕೇಸ್ಗಿಂತಲೂ ಅತ್ಯಂತ ಕ್ರೂರವಾದ ಪ್ರಕರಣ ಎಂದು ವಾದಿಸಿ ಜಾಮೀನು ನೀಡದಂತೆ ಮನವಿ ಮಾಡಿದರು. ಇದನ್ನೂ ಓದಿ: ವಿದ್ವತ್ ಮೇಲೆ ನಲಪಾಡ್ ಹಲ್ಲೆ ಪ್ರಕರಣ- ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದ ಯುಬಿ ಸಿಟಿ ಸಿಬ್ಬಂದಿ
https://www.youtube.com/watch?v=J5bj1Z0hrYI
https://www.youtube.com/watch?v=QktQtDhVSJ4
https://www.youtube.com/watch?v=CPdusTXs0QU
https://www.youtube.com/watch?v=WI5DOng9vAY