ನಾಡಹಬ್ಬಕ್ಕೆ ಸಿದ್ಧತೆ ಶುರು- 4,050 ಕೆ.ಜಿ ತೂಕದ ಧನಂಜಯನಿಗೆ ಮೊದ್ಲ ದಸರಾ

Public TV
1 Min Read

ಮೈಸೂರು: ಮುಂದಿನ ತಿಂಗಳು ನಡೆಯಲಿರುವ ನಾಡಹಬ್ಬ ದಸರಾಗೆ ಮೈಸೂರು ಸಜ್ಜಾಗುತ್ತಿದೆ. ಅದಕ್ಕೆ ಅಧಿಕೃತವಾದ ಚಾಲನೆ ಇಂದು ಸಿಕ್ಕಿದೆ. ದಸರಾ ಮೆರವಣಿಗೆಯಲ್ಲಿ ಸಾಗುವ ಗಜಪಡೆಯ ಮೊದಲ ತಂಡ ಇಂದು ಕಾಡಿನಿಂದ ನಾಡಿಗೆ ಬಂದವು.

ಈ ವರ್ಷದ ದಸರಾದಲ್ಲಿ ಭಾಗವಹಿಸುವ ಗಜಪಡೆಯ ಮೊದಲ ತಂಡ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ ಕಾಡಿನಿಂದ ನಾಡಿಗೆ ಬಂದವು. 58 ವರ್ಷದ ಅರ್ಜುನ ಭಾಗವಹಿಸುತ್ತಿರುವ 19 ನೇ ದಸರಾ ಇದಾಗಿದ್ದು, ಕ್ಯಾಪ್ಟನ್ ಅರ್ಜುನ 2012 ರಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ನಿರ್ವಹಿಸುತ್ತಿದ್ದಾನೆ.

ಕ್ಯಾಪ್ಟನ್ ಅರ್ಜುನನ ಜೊತೆ ವರಲಕ್ಷ್ಮಿ, ಚೈತ್ರ, ಗೋಪಿ, ವಿಕ್ರಮ ಮತ್ತು ಧನಂಜಯ ಆನೆಗಳು ಕಾಡಿನಿಂದ ನಾಡಿಗೆ ಬಂದವು. ಧನಂಜಯ ಆನೆ ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿದೆ. 35 ವರ್ಷದ ಧನಂಜಯ 4,050 ಕೆಜಿ ತೂಕ ಇದ್ದಾನೆ. ಅತ್ಯಂತ ಬಲಿಷ್ಟವಾಗಿರೋ ಧನಂಜಯ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯದಲ್ಲಿ ನಿಸ್ಸಿಮ್ಮನಾಗಿದ್ದಾನೆ. ಇದನ್ನೂ ಓದಿ: ಮೈಸೂರಿಗೆ ಹೊರಟ ದಸರಾ ಆನೆಗಳು – ಇಷ್ಟವಾದ ಆಹಾರ ಕೊಟ್ಟ ನಂತ್ರ ಲಾರಿ ಹತ್ತಿದ ಧನಂಜಯ

ಈ ಗಜಪಡೆಗೆ ಮೈಸೂರು ಜಿಲ್ಲೆಯ ವೀರಹೊಸನಹಳ್ಳಿ ಬಳಿ ಸಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಶಾಸಕರಾದ ಎಚ್. ವಿಶ್ವನಾಥ್, ತನ್ವೀರ್‍ಸೇಠ್, ಮಹದೇವ್, ಹರ್ಷವರ್ಧನ್, ನಾಗೇಂದ್ರ, ಶ್ರೀಕಂಠೇಗೌಡ ಈ ವೇಳೆ ಹಾಜರಿದ್ದರು. ಈ ಆನೆಗಳು ಮೈಸೂರಿಗೆ ಬಂದು ವಿಶ್ರಾಂತಿ ಪಡೆಯಲಿದ್ದು ಸೆಪ್ಟೆಂಬರ್ 5 ರಂದು ಸಂಜೆ ಈ ತಂಡಕ್ಕೆ ಮೈಸೂರು ಅರಮನೆಯ ಆವರಣಕ್ಕೆ ಬರಮಾಡಿಕೊಳ್ಳಲಾಗುತ್ತದೆ. ನಂತರ, ಆನೆಗಳ ತಾಲೀಮು ಬೆಳಗ್ಗೆ ಮತ್ತು ಸಂಜೆ ನಡೆಯುತ್ತದೆ. ಇನ್ನೆರಡು ವಾರಕ್ಕೆ ಗಜಪಡೆಯ ಎರಡನೇ ತಂಡವೂ ಮೈಸೂರಿಗೆ ಬರಲಿದ್ದು, ನಂತರ ಎಲ್ಲಾ ಆನೆಗಳ ತಾಲೀಮು ಒಟ್ಟಾಗಿ ಸಾಗಲಿದೆ.

ಕೊಡಗಿನ ಜಲಪ್ರವಾಹ ಮತ್ತು ಉತ್ತರ ಕರ್ನಾಟಕದ ಬರದ ಛಾಯೆ ನಡುವೆ ಈ ಬಾರಿಯನ್ನು ದಸರಾ ಸಾಂಪ್ರದಾಯಿಕವಾಗಿ ನಡೆಯಲಿದೆ. ಗಜಪಡೆ ಮೈಸೂರಿಗೆ ಬಂತೆಂದರೆ ಮೈಸೂರಲ್ಲಿ ದಸರಾ ಸಂಭ್ರಮದ ಹೆಚ್ಚಿದೆ ಅಂತಾನೇ ಅರ್ಥ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=OSN65my5LXc

Share This Article
Leave a Comment

Leave a Reply

Your email address will not be published. Required fields are marked *