ಆಕಸ್ಮಿಕ ಪದ ಬಳಸಿ ಅನ್ಯಕೋಮಿನವರಿಗೆ ಬೆಂಬಲ – ಬೇಹುಗಾರಿಕೆ ಇಲಾಖೆಯನ್ನು ಮುಚ್ಚಿಬಿಡಿ ಎಂದ ಯತ್ನಾಳ್

Public TV
2 Min Read

ಬೆಂಗಳೂರು: ನಾಗಮಂಗಲದಲ್ಲಿ ಅನ್ಯಕೋಮಿನ ಯುವಕರಿಂದ ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಕಲ್ಲು ತೂರಾಟ (Nagamangala Violence) ಪೂರ್ವ ನಿಯೋಜಿತ ಎಂಬುದಕ್ಕೆ ಯಾವುದೇ ಸಂಶಯವಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಆರೋಪಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕಲ್ಲೆಸೆತ, ಪೆಟ್ರೋಲ್ ಬಾಂಬ್ ಎಸೆತ ಮಾಡಿದ್ದು ಉದ್ದೇಶಪೂರ್ವಕವಾದ ಘಟನೆಯೇ ಹೊರತು ಆಕಸ್ಮಿಕವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಗೃಹಸಚಿವ ಪರಮೇಶ್ವರ್ (G.Parameshwar) ಅವರು ನಿಷ್ಪಕ್ಷಪಾತವಾಗಿ ಮಾತನಾಡುವ ಬದಲಾಗಿ `ಆಕಸ್ಮಿಕ’ ಎಂಬ ಪದ ಬಳಕೆ ಮಾಡಿ ಅನ್ಯ ಕೋಮಿನವರಿಗೆ ನಿಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ಒಂದು ವೇಳೆ ನಿಮ್ಮ ತರ್ಕವೇ ಸರಿಯಿದ್ದರೆ ಪೆಟ್ರೋಲ್ ಬಾಂಬ್ ಹೇಗೆ ಎಸೆದರು? ಇದನ್ನು ತಯಾರು ಮಾಡಲು ಸಮಯ ಬೇಡವೇ? ಗಣಪತಿ ಮೆರವಣಿಗೆ ಹೋಗುವವರು ಯಾರ ಮೇಲೆ ಕಲ್ಲೆಸೆದರು? ಶಾಂತಿಯುತವಾಗಿ ಹೋಗುತ್ತಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯ ಮೇಲೆ ಚಪ್ಪಲಿ ಬಿಸಾಡುವುದು, ಕಲ್ಲೆಸೆಯುವುದು, ಪೆಟ್ರೋಲ್ ಬಾಂಬ್ ಹಾಕುವುದು ಆಕಸ್ಮಿಕವೇ? ನಿಮ್ಮ ಕಾಗಕ್ಕ-ಗುಬ್ಬಕ್ಕ ಕಥೆ ನಂಬುವುದಕ್ಕೆ ಆಗುತ್ತಾ? ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಕೋಮಿನ ಹೆಸರನ್ನು ಹೇಳಲು ನಿಮಗೆ ಧೈರ್ಯವಿಲ್ಲವೇ? ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆ ಹೋಗಬೇಕಾದರೆ ಸೂಕ್ತ ಬಂದೋಬಸ್ತ್ ಕಲ್ಪಿಸದೆ ಇರುವುದು ನಿಮ್ಮ ಗೃಹ ಇಲಾಖೆಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ದೊಡ್ಡ ವೈಫಲ್ಯ. ನಿಮ್ಮ ಬೇಹುಗಾರಿಕೆ ಇಲಾಖೆಯನ್ನು ಮುಚ್ಚಿಬಿಡಿ. ನಿಮ್ಮ ಬೇಹುಗಾರಿಕೆನವರು ಹಾಗೂ ಜಿಲ್ಲಾ ಪೊಲೀಸ್ ಮುಂಚೆಯೇ ಈ ರೀತಿ ಆಗಬಹದು ಎಂದು ಎಚ್ಚರಿಸಬೇಕಿತ್ತು ಹಾಗೂ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿತ್ತು. ನಿಮ್ಮ ವೈಫಲ್ಯವನ್ನು ಮುಚ್ಚಿಡಲು ಹೊಸ ಕಥೆ ಸೃಷ್ಟಿಸಬೇಡಿ. ಯಾವುದೇ ಮುಲಾಜು ನೋಡದೆ ತಪ್ಪಿತಸ್ಥರ ಮೇಲೆ ಗೂಂಡಾ ಕಾಯ್ದೆ ಹಾಕಿ. ಸರ್ಕಾರದಿಂದ ತೆಗೆದುಕೊಳ್ಳುತ್ತಿರುವ ಯೋಜನೆಗಳನ್ನು ಕೂಡಲೇ ನಿಲ್ಲಿಸಿ. ಅವರಿಗೆ ಅರ್ಥ ಆಗುವ ಭಾಷೆಯಲ್ಲಿ ವ್ಯವಹರಿಸಿ ಎಂದು ಆಗ್ರಹಿಸಿದ್ದಾರೆ.

Share This Article