ನಬಾರ್ಡ್‌ನಿಂದ ರಾಜ್ಯಕ್ಕಲ್ಲ ಇಡೀ ದೇಶಕ್ಕೇ ಹಣ ಕಡಿಮೆಯಾಗಿದೆ, ಸಿಎಂ ಸುಳ್ಳು ಹೇಳಿದ್ದಾರೆ: ಜೋಶಿ

Public TV
2 Min Read

– ಸುಳ್ಳು ಹೇಳೋದ್ರಲ್ಲಿ ಸಿಎಂಗೆ ನೊಬೆಲ್ ಪ್ರಶಸ್ತಿ ಸಿಗಬೇಕೆಂದು ವಾಗ್ದಾಳಿ

ಬೆಂಗಳೂರು: ನಬಾರ್ಡ್‌ನಿಂದ (NABARD) ರಾಜ್ಯಕ್ಕೆ ಹಣ ಕಡಿಮೆ ಮಾಡಿಲ್ಲ, ಇಡೀ ದೇಶಕ್ಕೆ ಕಡಿಮೆಯಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸುಳ್ಳು ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅಸಮಾಧಾನ ಹೊರಹಾಕಿದರು.

ನಗರದಲ್ಲಿ ಮಾತನಾಡಿದ ಅವರು, ಬ್ಯಾಂಕ್‌ಗಳು ಕೃಷಿ ವಲಯಕ್ಕೆ ಉತ್ತಮವಾಗಿಯೇ ಸಾಲ ಕೊಡುತ್ತೇವೆ. ರಾಷ್ಟ್ರೀಯ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳು 4% ಬಡ್ಡಿ ದರದಲ್ಲಿ ಕೊಡುತ್ತಿವೆ. ಆದರೆ ಸಿಎಂ 7% ನಲ್ಲಿ ಸಾಲ ಕೊಡುತ್ತಿವೆ ಎಂದು ಸುಳ್ಳು ಹೇಳಿದ್ದಾರೆ. ಪ್ರಶ್ನೆ ಕೇಳಿದರೆ ಪತ್ರಕರ್ತರಿಗೆ ಸಿಎಂ ಬೆದರಿಸುತ್ತಾರೆ. ಜನರನ್ನ ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಇವರು ಸುಳ್ಳುಗಾರ ಸಿದ್ದರಾಮಯ್ಯ, ಸುಳ್ಳು ಹೇಳುವುದರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ಸಿಗಬೇಕು. ಈ ರೀತಿ ಸುಳ್ಳು ಹೇಳುವ ಸಿಎಂ ಅನ್ನು ರಾಜ್ಯ ಕಂಡಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಕೃಷಿ ಕೂಡ ಉದ್ಯಮವೇ, ಉದ್ಯಮಿಗಳಾಗಿ ಹತ್ತಾರು ಜನರಿಗೆ ಉದ್ಯೋಗ ನೀಡಿ: ಡಿಕೆಶಿ

ಈ ವೇಳೆ ಕೋವಿಡ್ ಕೇಸ್ ಹಾಕುವ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ನವರಿಗೆ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ. ರಾಜ್ಯಪಾಲರೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದರೂ ನೈತಿಕವಾಗಿ ಆವತ್ತೇ ರಾಜೀನಾಮೆ ಕೊಡಬೇಕಿತ್ತು. ರಾಜ್ಯಪಾಲರಿಗೆ, ಸಂವಿಧಾನ ಹುದ್ದೆಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ. ರಾಹುಲ್ ಗಾಂಧಿ ತಲೇನೂ ಖಾಲಿ, ಅವರು ಹಿಡಿದ ಸಂವಿಧಾನದ ಪುಸ್ತಕವೂ ಖಾಲಿ ಎಂದು ವ್ಯಂಗ್ಯ ವಾಡಿದರು.

ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣದ ವಿಚಾರವಾಗಿ ಮಾತನಾಡಿ, ಇಲ್ಲಿಯವರೆಗೂ ಜಿಲ್ಲೆಯಲ್ಲಿ 5 ಬಾಣಂತಿಯರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಜಾಸ್ತಿಯಾಗುತ್ತಿದೆ. ಸಿದ್ದರಾಮಯ್ಯ ರಾಜಕೀಯ ವಿಚಾರಕ್ಕೆ ಬರುವಾಗ ಬಳ್ಳಾರಿ ಬಗ್ಗೆ ಬಹಳಷ್ಟು ಜನ ಮಾತಾಡಿದ್ದಾರೆ. ಈ ರೀತಿಯ ಕಳಪೆ ಮಟ್ಟದ ಐವಿ ದ್ರಾವಣ ಕಳಿಸಿಕೊಟ್ಟಿದ್ದೇ ಬಾಣಂತಿಯರ ಸಾವಿಗೆ ಕಾರಣ ಆಗಿದೆ. ಕೇಂದ್ರದ ಮೇಲೆ ಪದೇ ಪದೇ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಾರೆ. ಮಳೆ ಜಾಸ್ತಿ ಆದರೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಕೇಂದ್ರ ಐವಿ ದ್ರಾವಣ ಸ್ಯಾಂಪಲ್‌ಗೆ ಒಪ್ಪಿಗೆ ನೀಡಿದ್ದರೂ ಪಕ್ಕದ ರಾಜ್ಯದಲ್ಲಿ ಯಾಕೆ ಈ ರೀತಿಯ ಸಮಸ್ಯೆ ಆಗಲಿಲ್ಲ. ತೆಲಂಗಾಣದಲ್ಲಿ ಅವರದ್ದೇ ಸರ್ಕಾರ ಇದೆಯಲ್ಲವಾ? ಅಲ್ಲಿ ಯಾಕೆ ಈ ಸಮಸ್ಯೆಯಾಗಿಲ್ಲ ಎಂದು ಪ್ರಶ್ನಿಸಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆರೋಗ್ಯ ಸಚಿವರು ಬರೀ ಸಿಎಂ ಹಿಂದೇ ಓಡಾಡಿಕೊಂಡಿದ್ದಾರೆ. ಯಾವ ಮಂತ್ರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ. ಕ್ಯಾಬಿನೆಟ್‌ನಲ್ಲಿ ಮಂತ್ರಿಗಳಿಗೆ ಬಳ್ಳಾರಿಗೆ ಭೇಟಿ ನೀಡಿ ಎಂದು ಸಿಎಂ ಹೇಳಿದ್ದಾರೆ. ಆದರೂ ಮಂತ್ರಿಗಳು ಇದುವರೆಗೂ ಭೇಟಿ ನೀಡುತ್ತಿಲ್ಲ ಎಂದು ಹೇಳಿದರು.ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಬೈಕ್ – ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದ ಸವಾರ ಸಾವು

Share This Article