1 ತಿಂಗಳಿಂದ ಬಂದಾಗಿದ್ದ ಮೈಸೂರು ಮೃಗಾಲಯ ಇಂದಿನಿಂದ ಓಪನ್

Public TV
1 Min Read

ಮೈಸೂರು: ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ 1 ತಿಂಗಳಿನಿಂದ ಬಂದ್ ಆಗಿದ್ದ ಮೈಸೂರು ಮೃಗಾಲಯ ಇಂದಿನಿಂದ ತೆರೆಯಲಿದೆ. ಭೋಪಾಲ್ ಲ್ಯಾಬ್ ವರದಿ ಆಧಾರದ ಮೇಲೆ ಮೃಗಾಲಯ ರೀ ಓಪನ್ ಆಗುತ್ತಿದ್ದು ಪ್ರಾಣಿಪ್ರಿಯರ ಹಾಗೂ ಮೃಗಾಲಯ ಸಮೀಪದ ವ್ಯಾಪಾರಸ್ಥರ ಸಂತಸಕ್ಕೆ ಕಾರಣವಾಗಿದೆ.

ಭೋಪಾಲ್ ಲ್ಯಾಬ್‍ನಲ್ಲಿ ಪಕ್ಷಿಗಳ ಎರಡನೇ ಮಾದರಿಯಲ್ಲೂ ಯಾವುದೇ ಸೊಂಕಿನ ಅಂಶ ಇಲ್ಲ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಇಲಾಖೆ ಕಾರ್ಯದರ್ಶಿ ಹಾಗೂ ಸೆಂಟ್ರಲ್ ಝೂ ಅಥಾರಿಟಿ ಮೈಸೂರು ಮೃಗಾಲಯವನ್ನ ಪುನರಾರಂಭಿಸುವಂತೆ ಸೂಚನೆ ನೀಡಿದೆ. ಹಾಗಾಗಿ ಪ್ರವಾಸಿಗರು, ಸಾರ್ವಜನಿಕರು ಯಾವುದೇ ಅಳುಕಿಲ್ಲದೆ ಮೃಗಾಲಯಕ್ಕೆ ಹೋಗಿ ಬರಬಹುದು.

ಹಕ್ಕಿ ಜ್ವರ ಭೀತಿ ಆವರಿಸಿರುವ ಹಿನ್ನಲೆಯಲ್ಲಿ ಸಮಾರು 125 ವರ್ಷಗಳ ಇತಿಹಾಸವಿರುವ ಮೈಸೂರಿನ ಐತಿಹಾಸಿಕ ಶ್ರೀಚಾಮರಾಜೇಂದ್ರ ಮೃಗಾಲಯವನ್ನು ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳ ಕಾಲ ಮುಚ್ಚಲಾಗಿತ್ತು. ಮೃಗಾಲಯದ ಕೊಳ-3ರಲ್ಲಿ ವಲಸೆ ಹಕ್ಕಿಗಳು ಮೃತಪಟ್ಟಿದ್ದು, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಆಂಡ್ ಅನಿಮಲ್ ಡಿಸೀಸ್ (ಎನ್‍ಐಎಚ್‍ಎಸ್‍ಎಡಿ) ಸಂಸ್ಥೆಯು ಮೃತಪಟ್ಟ ಹಕ್ಕಿಗಳಲ್ಲಿ ಎಚ್5ಎನ್8 ವೈರಾಣು ಇರುವ ಬಗ್ಗೆ ದೃಢಪಟಿಸಿತ್ತು. ಈ ಹಿನ್ನೆಲೆಯಲ್ಲಿ ಜನವರಿ 4 ರಿಂದ ಫೆಬ್ರವರಿ 2ರವರೆಗೆ ಮೃಗಾಲಯವನ್ನು ಅಲ್ಲಿನ ಆಡಳಿತ ಮಂಡಳಿ ಬಂದ್ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *