ನಮಗೆ ಅನ್ಯಾಯ ಮಾಡಿದ್ದರ ಶಾಪ ಫಡ್ನವಿಸ್‍ಗೆ ತಟ್ಟಿದೆ – ಶಿವಲಿಂಗೇಗೌಡ

Public TV
1 Min Read

ಮೈಸೂರು: ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಅವತ್ತು ನಮಗೆ ಅನ್ಯಾಯ ಮಾಡಿದ್ದರ ಶಾಪದಿಂದ ಇಂದು ಅವರ ಅಧಿಕಾರ ಹೋಯ್ತು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

ಇಂದು ಹುಣಸೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ನಿಮ್ಮ ತೀರ್ಪಿಗೆ ಅನ್ಯಾಯ ಮಾಡಿ ಕುಮಾರಸ್ವಾಮಿ ಅವರ ಸರ್ಕಾರ ಬೀಳಿಸಿ ಅವರಿಗೆ ಅನ್ಯಾಯ ಮಾಡಿದ್ದಾರೆ. ರಾಜೀನಾಮೆ ನೀಡಿ ಮುಂಬೈಗೆ ಹೋಗಿ ಕುಳಿತುಕೊಂಡಿದ್ದರು ಎಂದು ಅನರ್ಹ ಶಾಸಕರ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಅಂದು ನಾವು ಅನರ್ಹ ಶಾಸಕರನ್ನು ಹುಡುಕಿಕೊಂಡು ಮುಂಬೈಗೂ ಕೂಡ ಹೋಗಿದ್ದೆವು. ಆದರೆ ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ನಮ್ಮನ್ನು ಹೋಟೆಲ್ ಒಳಗೆ ಬಿಡದೆ ರಸ್ತೆಯಲ್ಲಿ ನಿಲ್ಲಿಸಿದರು. ಅಂದು ನಾವು ರಸ್ತೆಯಲ್ಲಿ ನಿಂತುಕೊಂಡು ತಿಂಡಿ ಮಾಡಿದ್ದೇವೆ. ಅವತ್ತು ದೇವೇಂದ್ರ ಫಡ್ನವಿಸ್ ನಮಗೆ ಮೋಸ ಮಾಡಿದ್ದ ಕಾರಣದಿಂದಲೇ ಅವರ ಅಧಿಕಾರ ಹೋಯ್ತು ಎಂದು ಹೇಳಿದರು.

ಅಂದು ನಮಗೆ ಮುಂಬೈ ಗೊತ್ತಿಲ್ಲ. ಭಾಷೆ ಗೊತ್ತಿಲ್ಲ ಆದರೆ ಅವತ್ತು ನಮ್ಮನ್ನು ಮಹಾರಾಷ್ಟ್ರ ಪೊಲೀಸರು ಜೀಪಿನಲ್ಲಿ ಕರೆದುಕೊಂಡು ಹೋಗಿ ಸಂಜೆವರೆಗೂ ಮಹಾರಾಷ್ಟ್ರದ ರಸ್ತೆಗಳನ್ನೆಲ್ಲ ಸುತ್ತಿಸಿದರು. ನಂತರ ಸಂಜೆ ವೇಳೆ ಕರೆದುಕೊಂಡು ಬಂದು ನಮ್ಮನ್ನು ಬಿಟ್ಟರು. ಆ ಕಾರಣದಿಂದಲೇ ಫಡ್ನವಿಸ್ ಅವರು ಇಂದು ಬಹುಮತ ಸಾಬೀತು ಮಾಡಲಾಗದೆ ಅಧಿಕಾರ ಕಳೆದುಕೊಂಡರು ಎಂದು ಶಿವಲಿಂಗೇಗೌಡರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *