ಸತ್ತೆ ಹೋದ್ರು ಎಂದು ಕೊಂಡ ಅರ್ಚಕ ಪವಾಡ ಸದೃಶವಾಗಿ ಬಚಾವ್

Public TV
1 Min Read

ಮೈಸೂರು: ಕಳೆದ ಶನಿವಾರ ಬೆಳಗ್ಗೆ ಸ್ನೇಹಿತರ ಜೊತೆ ಸವಾಲು ಹಾಕಿ ಭೋರ್ಗರೆಯುತ್ತಿದ್ದ ಕಪಿಲಾ ನದಿಯಲ್ಲಿ ಈಜಲು ಬಿದ್ದಿದ್ದ ನಂಜನಗೂಡಿನ ಅರ್ಚಕ ವೆಂಕಟೇಶ್ ಪವಾಡ ಸದೃಶವಾಗಿ ಪರಾಗಿದ್ದಾರೆ.

ನಂಜನಗೂಡಿನ ಸೇತುವೆ ಮೇಲಿಂದ ಹೆಜ್ಜಿಗೆ ಸೇತುವೆವರೆಗೂ ಈಜುತ್ತೇನೆ ಎಂದು ವೆಂಕಟೇಶ್ ಸ್ನೇಹಿತರ ಜೊತೆ ಸವಾಲಾಕಿದ್ದರು. ಆದರೆ ಹರಿಯುವ ನದಿಯಲ್ಲಿ ಹಾದಿ ತಪ್ಪಿದ ವೆಂಕಟೇಶ್ ತಾವು ತಲುಪಬೇಕಾದ ಸ್ಥಳ ಬಿಟ್ಟು ಬೇರೆ ಸ್ಥಳಕ್ಕೆ ಹೋಗಿದ್ದರು. ನದಿಯೊಳಗೆ ಹಾಕಿದ್ದ ದೊಡ್ಡ ಪೈಪ್ ಒಳಗೆ ನುಸುಳಿ ಬಿಟ್ಟಿದ್ದರು. ನಂತರ ಅಲ್ಲಿಂದ ಪಾರಾಗಿ ಸೇತುವೆಯೊಂದನ್ನು ಹಿಡಿದು ಅದರ ಅಡಿ ಮಲಗಿದ್ದರು.

ಶನಿವಾರದಿಂದ ನಾಪತ್ತೆಯಾಗಿದ್ದ ಕಾರಣ ಅವರು ಸತ್ತೆ ಹೋಗಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ಸಂಜೆ ವೇಳೆಗೆ ಈಜಿಕೊಂಡು ಮತ್ತೆ ದಡ ಸೇರಲು ಯಶಸ್ವಿಯಾಗಿದ್ದಾರೆ. ಕಳೆದ 2 ದಿನಗಳಿಂದ ಊಟವಿಲ್ಲದೆ ಸೇತುವೆ ಕೆಳಗೆ ಮಲಗಿದ್ದ ಅವರು ನೀರಿನಲ್ಲಿ ತೇಲಿ ಬಂದ ಎಳನೀರು ಕುಡಿದು ಕಾಲ ಕಳೆದಿದ್ದರು.

ನೀರಿನಲ್ಲಿ ಕೊಚ್ಚಿ ಹೋಗಿದ್ದ ಅವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದೆ. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಹಣಕ್ಕಾಗಿ ಸವಾಲು ಎಸೆದು ಈಜಲು ಹೋಗಿಲ್ಲ. ಹೊಳೆ ತುಂಬಿದ ವೇಳೆ ಈಜುವುದು ಒಂದು ಹವ್ಯಾಸವಾಗಿದ್ದು, ನೀರಿನಲ್ಲಿ ಈಜುವುದು ನಮಗೇ ಒಂದು ರೀತಿ ಸಾಹಸವಾಗಿದೆ. ಈ ಹಿಂದೆ ಹಲವು ಬಾರಿ ನಾವು ಇಂತಹದ್ದೆ ಸಾಹಸ ಮಾಡಿದ್ದೇವೆ. ಆದರೆ ನನಗೆ ಈ ಸೇತುವೆಯ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಆದ್ದರಿಂದ ಸಮಸ್ಯೆ ಎದುರಾಗಿತ್ತು. ಯೋಗ ಹಾಗೂ ಉಪವಾಸ ಇರುವುದು ಅಭ್ಯಾಸವಿರುವುದರಿಂದ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಯಾರ ಸಹಾಯವನ್ನು ನಿರೀಕ್ಷೆ ಮಾಡದೆ ಮತ್ತೆ ಈಜಿ ದಡಕ್ಕೆ ಬಂದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *