ಚಂದನ್‍ ಶೆಟ್ಟಿ ತನ್ನ ಲವ್ ಕೇಸ್‌ನ್ನ ಮೈಸೂರು ದಸರಾದಲ್ಲಿ ತಂದ ಹಾಕಿ ತಲೆನೋವು ಕೊಟ್ಟ: ವಿ.ಸೋಮಣ್ಣ

Public TV
1 Min Read

ಮೈಸೂರು: ಗಾಯಕ ಚಂದನ್‍ ಶೆಟ್ಟಿ ತನ್ನ ಲವ್ ಕೇಸ್‌ನ್ನ ಮೈಸೂರು ದಸರಾದಲ್ಲಿ ತಂದ ಹಾಕಿ ತಲೆನೋವು ಕೊಟ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಚಂದನ್ ಶೆಟ್ಟಿ ಚಿಕ್ಕವನಿದ್ದಾಗಿನಿಂದ ನನಗೆ ಗೊತ್ತು. ಅವನ ಲವ್ ಕೇಸ್ ಅನ್ನು ಮೈಸೂರು ಯುವ ದಸರಾದಲ್ಲಿ ತಂದು ಹಾಕಿಬಿಟ್ಟ. ಅವನು ಎಲ್ಲಾದರೂ ಮಜಾ ತಗೋಬಹುದಿತ್ತು. ಅದನ್ನ ಬಿಟ್ಟು ವೇದಿಕೆ ಮೇಲೆ ಪ್ರಪೋಸ್ ಮಾಡಿ ನನಗೆ ಹಿಂಸೆ ಕೊಡುತ್ತಿದ್ದಾನೆ. ಇದು ಯಾರಿಗೆ ಬೇಕಿತ್ತು ಎಂದು ವ್ಯಂಗ್ಯವಾಡಿದರು.

ಚಂದನ್ ಶೆಟ್ಟಿ ಫೋನ್ ಮಾಡಿ ತಪ್ಪಾಗಿದೆ ಎಂದು ಕೇಳಿಕೊಂಡ. ಆಗ ನಾನು, ಅಲ್ಲೋ ಚಂದನ್ ಶನಿದೇವರ ತರ ಬಂದು ಹೆಗಲು ಏರಿಬಿಟ್ಟೆಲ್ಲೋ. ನನ್ನ ಒಳ್ಳೆತನ ನೀನು ದೂರುಪಯೋಗ ಮಾಡಿಕೊಂಡೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದೆ. ಅವರ ತಾಯಿ ಕೂಡ ಫೋನ್ ಮಾಡಿ ಅರ್ಧ ಗಂಟೆ ಮಾತನಾಡಿ ಪಿಟೀಲು ಕೂಯ್ದರು ಎಂದು ಹೇಳಿದರು.

ಯುವ ದಸರಾ ವೇದಿಕೆ ಚಂದನ್ ಶೆಟ್ಟಿ ತನ್ನ ಗೆಳತಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ ಸುದ್ದಿ ಕೇಳಿದಾಗಿನಿಂದ ಮನಸ್ಸಿಗೆ ಸಮಾಧಾನ ಸಿಗುತ್ತಿಲ್ಲ. ಇಂತಹ ಘಟನೆಗಳಿಗೆ ನಾವೇ ಹೊಣೆ ಆಗುತ್ತೇವೆ. ಹೀಗಾಗಿ ನಿನ್ನೆ ರಾತ್ರಿ ಚಾಮುಂಡಿ ತಾಯಿ ದರ್ಶನ ಮಾಡಿ, ಇದಕ್ಕೊಂದು ಪರಿಹಾರ ನೀಡಮ್ಮ ಅಂತ ಬೇಡಿಕೊಂಡಿದ್ದೇನೆ. ನಾನು ನಿಂತಿದ್ದನ್ನು ಕಂಡು ಜನರು ಬೈಯಲು ಶುರು ಮಾಡಿದರು. ಹೀಗಾಗಿ ಅಲ್ಲಿಂದ ಹೊರಗೆ ಬಂದೆ ಎಂದು ಸುದ್ದಿಗೋಷ್ಠಿನಲ್ಲಿ ನಗೆ ಹರಿಸಿದರು.

ಚಂದನ್‍ಶೆಟ್ಟಿ ಗೌರವ ಧನ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಕೇಳುತ್ತಿದ್ದಂತೆ, ತಂದೆ ಅಕ್ಟೋಬರ್ 8ರ ವರೆಗೆ ಆ ವಿಚಾರ ಬಿಟ್ಟುಬಿಡಿ. ಮೊದಲು ದಸರಾ ಮುಗಿಯಲಿ ಆಮೇಲೆ ಎಲ್ಲವನ್ನೂ ವಿಚಾರ ಮಾಡೋಣ. ಚಂದನ್ ಶೆಟ್ಟಿ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *