ಹಳ್ಳಿಹಕ್ಕಿಗೆ ಹೆಚ್ಚಾಯ್ತು ಸಿದ್ದು ಮೇಲೆ ಪ್ರೀತಿ – ದೇವೇಗೌಡ್ರನ್ನು ದೇವರೆಂದ ವಿಶ್ವನಾಥ್

Public TV
2 Min Read

ಮೈಸೂರು: ಹಳ್ಳಿಹಕ್ಕಿಗೆ ಇತ್ತೀಚೆಗೆ ಯಾಕೋ ಏನೋ ಸಿದ್ದು ಮೇಲೆ ಪ್ರೀತಿ ಜಾಸ್ತಿ ಆದಂಗೆ ಕಾಣಿಸುತ್ತಿದೆ. ಸಿದ್ದರಾಮಯ್ಯರನ್ನು ಕಂಡ್ರೆ ಉರಿದು ಬೀಳ್ತಿದ್ದ ವಿಶ್ವನಾಥ್ ಈಗ ಸಿದ್ದು ನಾನು ಅಣ್ತಮ್ಮ ಅಂತಿದ್ದಾರೆ. ಹಳ್ಳಿಹಕ್ಕಿಯ ಈ ನಡೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಒಂದ್ಕಡೆ ಹುಣಸೂರು ಚುನಾವಣಾ ಕಣ ರಂಗೇರ್ತಿದೆ. ಮತ್ತೊಂದು ಕಡೆ ಹಳ್ಳಿಹಕ್ಕಿ ಪ್ರಚಾರ ಕಣದಲ್ಲಿ ಹೊಸ ಹೊಸ ರಾಗ ತೆಗೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಯಾವಾಗ ಯಾರನ್ನ ಟೀಕಿಸ್ತಾರೋ, ಯಾರನ್ನು ಹೊಗಳ್ತಾರೋ ಅನ್ನೋದು ಗೊತ್ತಾಗಲ್ಲ. ಯಾಕಂದ್ರೆ ಅಷ್ಟರ ಮಟ್ಟಿಗೆ ವಿಶ್ವನಾಥ್ ವರ್ತನೆ ಬದಲಾಗ್ತಿದೆ. ವಿಶ್ವನಾಥ್ ಬೈ ಎಲೆಕ್ಷನ್ ಅಖಾಡದಲ್ಲಿ ಅಚ್ಚರಿಯ ಸ್ಟೇಟ್‍ಮೆಂಟ್‍ಗಳನ್ನು ಕೊಡುತ್ತಿದ್ದು, ರಾಜಕೀಯವಲಯದಲ್ಲಿ ಕುತೂಹಲ ಕೆರಳಿಸಿದೆ.

ಸಿದ್ದರಾಮಯ್ಯರನ್ನು ಯಾವಾಗ್ಲೂ ಟೀಕಿಸುತ್ತಿದ್ದ ವಿಶ್ವನಾಥ್ ದಿಢೀರನೇ ಪ್ಲೇಟ್ ಚೇಂಜ್ ಮಾಡಿದ್ದಾರೆ. ಸಿದ್ದರಾಮಯ್ಯರನ್ನು ನಾನು ಇಷ್ಟಪಡ್ತಿನಿ. ಯಾಕಂದ್ರೆ ಅವರೊಬ್ಬ ಒಬ್ಬ ಉತ್ತಮ ಆಡಳಿತಗಾರ. ಭ್ರಷ್ಟಾಚಾರಿ ಅಲ್ಲ. ಅಂತ ಹೊಸ ಹೊಸ ಹೇಳಿಕೆಗಳನ್ನು  ಕೊಡುತ್ತಿದ್ದಾರೆ.

ವಿಶ್ವನಾಥ್ ಈ ಹೊಸ ವರಸೆಗೆ ಕುರುಬ ಸಮುದಾಯದ ಮತಗಳು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಹುಣಸೂರು ಕ್ಷೇತ್ರದಲ್ಲಿ 40 ಸಾವಿರ ಕುರುಬ ಸಮುದಾಯದ ಮತಗಳಿವೆ. ಸಿದ್ದರಾಮಯ್ಯ ಪರವಾಗಿ ಈ ಮತಗಳು ಹೆಚ್ಚು ಕಾಂಗ್ರೆಸ್ಸಿನತ್ತ ಹೋಗುವ ಸಾಧ್ಯತೆ ಇದೆ. ಹಾಗಾಗಿ ಇದನ್ನು ತಡೆಯುವ ಸಲುವಾಗಿ ವಿಶ್ವನಾಥ್, ಸಿದ್ದರಾಮಯ್ಯರನ್ನು ಗುಣಗಾನ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇಷ್ಟು ಮಾತ್ರವಲ್ಲ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ್ರಿಗೂ ವಿಶ್ವನಾಥ್ ದೇವರ ಸ್ಥಾನ ನೀಡಿದ್ದಾರೆ. ದೇವೇಗೌಡ್ರ ಫೋಟೋವನ್ನು ದೇವರ ಮನೆಯಲ್ಲಿ ಇಡ್ತೀನಿ. ದೇವೇಗೌಡ್ರು ನನ್ನ ಹೃದಯದಲ್ಲಿದ್ದಾರೆ ಎನ್ನುತ್ತಿದ್ದಾರೆ. ಇಲ್ಲಿ ಮತಗಳಿಕೆಯ ಲೆಕ್ಕಕ್ಕಿಂತ ಆ ಮತಗಳು ಪಕ್ಷದಲ್ಲೇ ಉಳಿಸುವ ತಂತ್ರ ಎದ್ದು ಕಾಣ್ತಿದೆ.

ಹುಣಸೂರು ಮತಕ್ಷೇತ್ರದಲ್ಲಿ 45 ಸಾವಿರ ಒಕ್ಕಲಿಗ ಮತಗಳಿದ್ದರೂ, ಆ ಮತಗಳ ಮೇಲೆ ವಿಶ್ವನಾಥ್‍ಗೆ ವಿಶ್ವಾಸವಿದ್ದಂತೆ ಕಾಣ್ತಿಲ್ಲ. ಹಾಗಾಗಿ ತಮಗೆ ಆ ವೋಟ್ ಬೀಳದಿದ್ರೂ ಪರವಾಗಿಲ್ಲ, ಕಾಂಗ್ರೆಸ್ ಪಾಲಾಗಬಾರದು. ಆ ವೋಟುಗಳು ಜೆಡಿಎಸ್ ಬುಟ್ಟಿಯನ್ನಷ್ಟೆ ಸೇರಬೇಕು ಎಂಬುದು ಇವರ ಲೆಕ್ಕ. ಆದರೆ ಹಳ್ಳಿ ಹಕ್ಕಿಯ ಈ ಲೆಕ್ಕಾಚಾರದ ಗುರಿ ಸರಿಯಾಗಿ ತಲುಪುತ್ತಾ, ಇಲ್ಲ ಮತದಾರ ಇನ್ಯಾವ ಸ್ಟ್ರಾಟಜಿಯಲ್ಲಿ ಇದ್ದಾನೋ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *