ಜಿಟಿಡಿಯಿಂದ ಜೆಡಿಎಸ್‍ಗೆ ಮತ್ತೊಂದು ಶಾಕ್ – ಹುಣಸೂರು ಬಿಜೆಪಿ ಟಿಕೆಟ್ ಹರೀಶ್ ಗೌಡ್ರಿಗೆ?

Public TV
1 Min Read

ಮೈಸೂರು: ರಾಜ್ಯದಲ್ಲಿ ಇದೀಗ ಉಪಚುನಾವಣೆಯ ಕಾವು ಜೋರಾಗಿದ್ದು, ಅಭ್ಯರ್ಥಿಗಳ ಸ್ಪರ್ಧೆ ವಿಚಾರಕ್ಕೆ ಪೈಪೋಟಿ ನಡೆಯುತ್ತಿದೆ. ಈ ಸಂಬಂಧ ಇನ್ನೂ ಗೊಂದಲಗಳು ಬಗೆಹರಿದಿಲ್ಲ. ಅದರಲ್ಲೂ ಮೈಸೂರಿನ ಹುಣಸೂರು ಕ್ಷೇತ್ರದಲ್ಲಿ ಚುನಾವಣೆ ಕಾವು ನಿಧಾನವಾಗಿ ಏರುತ್ತಿದೆ. ಕಾಂಗ್ರೆಸ್ಸಿನಿಂದ ಅಭ್ಯರ್ಥಿ ಪಕ್ಕಾ ಆಗಿದ್ದಾರೆ. ಆದರೆ ಬಿಜೆಪಿ, ಜೆಡಿಎಸ್‍ನಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬ ಕುತೂಹಲ ಹುಟ್ಟಿಸಿದೆ.

ನಾನು ಚುನಾವಣಾ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಯಾವುದೇ ಅನುಮಾನ ಬೇಡ. ನನ್ನ ಮಗನನ್ನ ಹುಣಸೂರಲ್ಲಿ ನಿಲ್ಲಿಸಲ್ಲ ಎಂದು ಜಿಟಿ ದೇವೇಗೌಡರು ಹೇಳಿದ್ದರು. ಆದರೆ ಇದು ಅರ್ಧಸತ್ಯನಾ ಅನ್ನೋ ಪ್ರಶ್ನೆ ಇದೀಗ ಎದ್ದಿದೆ. ಯಾಕಂದರೆ ಹುಣಸೂರಲ್ಲಿ ಜಿಟಿಡಿ ಪುತ್ರ ಹರೀಶ್ ಗೌಡ ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆ ಅನ್ನೋ ಚರ್ಚೆಗಳು ನಡೆಯುತ್ತಿವೆ.

ಹರೀಶ್‍ಗೆ ಬಿಜೆಪಿಯಿಂದ ಟಿಕೆಟ್ ಯಾಕೆ?
ಹುಣಸೂರು ಕ್ಷೇತ್ರದಲ್ಲಿ ಜಿಟಿಡಿ ಪುತ್ರ ಹರೀಶ್‍ಗೌಡರ ಸಂಘಟನೆ ಇದೆ. ಜಿ.ಟಿ.ದೇವೇಗೌಡರಿಗೂ ಕ್ಷೇತ್ರದ ಮೇಲೆ ಹಿಡಿತವಿದೆ. ಅಪ್ಪ-ಮಕ್ಕಳಿಗೆ ಒಕ್ಕಲಿಗ ಮತಗಳನ್ನು ಛಿದ್ರ ಮಾಡುವ ಶಕ್ತಿ ಇದೆ. ಹಾಗೆಯೇ ಲಿಂಗಾಯತ, ಎಸ್‍ಸಿ, ಎಸ್‍ಟಿ ಮತಗಳನ್ನೂ ಸೆಳೆಯುವ ಶಕ್ತಿ ಇರುವುದರಿಂದ ಜಿಟಿಡಿ ಮಗನೇ ಸೂಕ್ತ ಅಭ್ಯರ್ಥಿ ಎಂದು ಬಿಜೆಪಿ ನಿರ್ಧರಿಸಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗುದೆ.

ಬಿಜೆಪಿಯ ಕೆಲ ನಾಯಕರು ಈ ಬಗ್ಗೆ ಜಿಟಿಡಿ ಜೊತೆ ಚರ್ಚೆ ನಡೆಸಿದ್ದಾರೆ. ಆದರೆ ಜಿಟಿಡಿ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ, ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತಾಡಿ ಕಳುಹಿಸಿದ್ದಾರೆ. ಕಾರಣ, ಅನರ್ಹ ಶಾಸಕರ ಕಥೆ ಕೋರ್ಟಿನಲ್ಲಿ ಏನಾಗುತ್ತೆ? ಆ ತೀರ್ಪು ಆಧರಿಸಿ ಎಚ್.ವಿಶ್ವನಾಥ್ ನಡೆ ಏನೆಂದು ಗೊತ್ತಾಗುತ್ತೆ. ಆಮೇಲೆ ತೀರ್ಮಾನ ಮಾಡೋದು ಎಂಬುದು ಜಿಟಿಡಿ ಲೆಕ್ಕಾಚಾರವಾಗಿದೆ.

ಒಟ್ಟಿನಲ್ಲಿ ಬೈ ಎಲೆಕ್ಷನ್‍ಗೂ ನಮಗೂ ಸಂಬಂಧವೇ ಇಲ್ಲ ಅಂತಿದ್ದ ಜಿಟಿಡಿ ಈಗ ಗೊಂದಲಕ್ಕೆ ಸಿಲುಕಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ನೋಡಿಕೊಂಡು ಜಿಟಿಡಿ ಬಿಜೆಪಿಗೆ ಹೋಗ್ತಾರಾ..? ಇಲ್ಲಾ ತಾವು ಜೆಡಿಎಸ್‍ ನಲ್ಲೇ ಇದ್ದು ತಮ್ಮ ಮಗನನ್ನು ಬಿಜೆಪಿಗೆ ಕಳುಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *