ಮೈಸೂರಿನಲ್ಲಿ ಗ್ಯಾಂಗ್‍ರೇಪ್ ಪ್ರಕರಣ – ಘಟನೆಯ ಬಗ್ಗೆ ಬಿಚ್ಚಿಟ್ಟ ಸಂತ್ರಸ್ತೆಯ ಸ್ನೇಹಿತ

Public TV
1 Min Read

ಮೈಸೂರು: ಸ್ನೇಹಿತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಬಳಿಕ ನನ್ನ ತಂದೆಗೆ ಕರೆ ಮಾಡಿ 3 ಲಕ್ಷ ರೂ. ಹಣ ತರಿಸುವಂತೆ ಒತ್ತಾಯಿಸಿದರು ಎಂದು ಸಂತ್ರಸ್ತೆಯ ಸ್ನೇಹಿತ ಹೇಳಿಕೆ ನೀಡಿದ್ದಾನೆ.

ಅದು ನಾನು ವಾಕಿಂಗ್ ಮಾಡುವ ಸ್ಥಳ. ಅಲ್ಲಿಗೆ ನನ್ನ ಸ್ನೇಹಿತೆ ಜೊತೆ ಹೋಗಿ ಕುಳಿತಿದ್ದೆ. ಈ ವೇಳೆ ನಾಲ್ವರು ಏಕಾ ಏಕಿ ಅಲ್ಲಿಗೆ ಬಂದು ಹಲ್ಲೆ ನಡೆಸಿದರು. ದೊಣ್ಣೆಗಳಿಂದ ಹಲ್ಲೆ ಮಾಡಿದರು. ನನ್ನ ಸ್ನೇಹಿತೆಯನ್ನು ಎಳೆದುಕೊಂಡು ಹೋದರು. ನಾನು ಪ್ರಜ್ಞೆ ತಪ್ಪಿ ಅಲ್ಲೇ ಬಿದ್ದೆ ಎಂದಿದ್ದಾನೆ.

ಪ್ರಜ್ಞೆ ಬಂದಾಗ ಅವರು ಪಕ್ಕದಲ್ಲಿ ನಿಂತಿದ್ದರು. ನಂತರ ನನ್ನ ತಂದೆಗೆ ಕರೆ ಮಾಡಿ 3 ಲಕ್ಷ ಹಣ ತರಿಸುವಂತೆ ಒತ್ತಾಯಿಸಿದರು. ನಾನು ನನ್ನ ಸ್ನೇಹಿತೆ ಬಗ್ಗೆ ಕೇಳಿದೆ. ಆಗ ಪಕ್ಕದ ಪೊದೆಯಿಂದ ಆಕೆಯನ್ನು ಕರೆದುಕೊಂಡು ಬಂದರು. ಆಕೆಯನ್ನು ನನ್ನ ಪಕ್ಕದಲ್ಲಿ ಕೂರಿಸಿದರು. ಆಕೆಗೂ ಗಾಯಗಳಾಗಿತ್ತು ಎಂದು ಘಟನೆಯ ಮಾಹಿತಿ ಬಿಚ್ಚಿಟ್ಟಿದ್ದಾನೆ. ಇದನ್ನೂ ಓದಿ: ಗ್ಯಾಂಗ್ ರೇಪ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಸೋಮಶೇಖರ್

ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೋರಿ ಮೇಲೆ ಕುಳಿತಿದ್ದಳು. ಈ ವೇಳೆ ಪಾನಮತ್ತ ಯುವಕರ ತಂಡವೊಂದು ಅಲ್ಲಿಗೆ ಬಂದು ಯುವಕನಿಗೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ನಂತರ ವಿದ್ಯಾರ್ಥಿನಿಯನ್ನು ದೂರ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇತ್ತ ಪೊದೆಯಲ್ಲಿ ನಿತ್ರಾಣವಾಗಿದ್ದ ಜೋಡಿಯನ್ನು ನೋಡಿದ ಯುವಕ ಸ್ನೇಹಿತರು ಕೂಡಲೇ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಅಲ್ಲದೆ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ:  ರೇಪ್ ಬಿಟ್ಟು ಕಿರುಕುಳ ಕೇಸ್ ದಾಖಲಿಸಿದ್ದಾರೆ: ವಿ.ಎಸ್.ಉಗ್ರಪ್ಪ

Share This Article
Leave a Comment

Leave a Reply

Your email address will not be published. Required fields are marked *