ಮೈಸೂರು ಮೇಯರ್, ಉಪ ಮೇಯರ್ ಎಲೆಕ್ಷನ್: ಬಿಜೆಪಿ ಬಾಯಿಗೆ ಬಿತ್ತು ಡಬಲ್ ಲಡ್ಡು!

Public TV
3 Min Read

ಮೈಸೂರು: ಜೆಡಿಎಸ್ ಜೊತೆ ಮೈತ್ರಿ ಇಲ್ಲ ಇಲ್ಲ ಎಂದು ಹೇಳುತ್ತಲೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿ ಮೈಸೂರು ಮಹಾ ನಗರ ಪಾಲಿಕೆಯ ಗದ್ದುಗೆ ಏರಿದೆ. ಮೈಸೂರು ಪಾಲಿಕೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ ಮೇಯರ್ ಹಾಗೂ ಉಪ ಮೇಯರ್ ಎರಡು ಗದ್ದುಗೆ ಅಲಂಕರಿಸಿದೆ. ಜೆಡಿಎಸ್ ಜಾತಿ ಕೆಟ್ಟರು ಸುಖ ಇಲ್ಲ ಎಂಬ ಸ್ಥಿತಿಗೆ ತಲುಪಿದೆ.

ಮೈಸೂರು ಮಹಾ ನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಶಿವಕುಮಾರ್ ಹಾಗೂ ಉಪ ಮೇಯರ್ ಆಗಿ ರೂಪ ಆಯ್ಕೆಯಾಗಿದ್ದಾರೆ. ಇಂದು ಮೈಸೂರು ಮಹಾ ನಗರ ಪಾಲಿಕೆಯಲ್ಲಿ ನಡೆದ ಮೇಯರ್ – ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಡಬಲ್ ಧಮಾಕ ಸಿಕ್ಕಿದೆ. ಇದನ್ನೂ ಓದಿ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗದಿದ್ದರೇ ಕೊಲೆ ಮಾಡುವುದಾಗಿ ಬೆದರಿಕೆ- ಇಬ್ಬರ ವಿರುದ್ಧ ಎಫ್‍ಐಆರ್

ಮೈಸೂರು ಪಾಲಿಕೆಯ ಅಧಿಕಾರದ ಗದ್ದುಗೆ ಏರಲು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲ. ಹೀಗಾಗಿ ಕಳೆದ ಬಾರಿ ಚುನಾವಣಾ ಕಲಾಪದ ಹಾಜರಾತಿಯ ಅಧಾರದ ಮೇಲೆ ಬಿಜೆಪಿಗೆ ಮೇಯರ್ ಪಟ್ಟ ಸಿಕ್ಕಿತ್ತು. ಕಾಂಗ್ರೆಸ್ ಜೊತೆ ಕೈ ಜೋಡಿಸದೆ ಬಿಜೆಪಿಗೆ ಜೆಡಿಎಸ್ ಸಹಾಯ ಮಾಡಿತ್ತು. ಹೀಗಾಗಿ ಈ ಬಾರಿ ಬಿಜೆಪಿ ತಮ್ಮನ್ನು ಬೆಂಬಲಿಸುತ್ತೆ ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್ ಇತ್ತು. ಆದರೆ ಬಿಜೆಪಿ ಮೈತ್ರಿ ಸಾಧ್ಯವೇ ಇಲ್ಲ. ನಾವು ಏಕಾಂಗಿಯಾಗಿ ಸ್ಪರ್ಧೆಗೆ ಇಳಿಯುತ್ತೇವೆ ಎಂದು ಘೋಷಿಸಿ ಅದೇ ಪ್ರಕಾರ ನಾಮಪತ್ರ ಕೂಡ ಸಲ್ಲಿಸಿತ್ತು. ಜೆಡಿಎಸ್ – ಬಿಜೆಪಿ ಮೈತ್ರಿ ಆಗದ ಕಾರಣ ಕಾಂಗ್ರೆಸ್ ಒಂದೆರಡು ಜೆಡಿಎಸ್ ಸದಸ್ಯರ ಸೆಳೆಯುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವ ಪ್ಲಾನ್ ಮಾಡಿತ್ತು.

ಕಾಂಗ್ರೆಸ್ ಜೆಡಿಎಸ್ ಅನ್ನು ಇಬ್ಭಾಗ ಮಾಡುವ ಸೂಚನೆ ಕಾಣುತ್ತಿದ್ದಂತೆ ಅಲರ್ಟ್ ಆದ ಜೆಡಿಎಸ್, ಚುನಾವಣೆಗೆ ಒಂದು ತಾಸು ಇರುವಂತೆ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿ ಮೇಯರ್ ಸ್ಥಾನ ಬಿಜೆಪಿಗೆ ಉಪ ಮೇಯರ್ ಸ್ಥಾನ ಜೆಡಿಎಸ್‌ಗೆ ಎಂಬ ಒಪ್ಪಂದ ಆಯ್ತು. ಇದು ಕಾಂಗ್ರೆಸ್‌ಗೆ ಆದ ದೊಡ್ಡ ಆಘಾತ ನೀಡಿತು. ಇದನ್ನೂ ಓದಿ: ಸ್ವಾತಂತ್ರ್ಯ ಕೊಡಿಸಿದ್ದು ಕಾಂಗ್ರೆಸ್: ಎಂ.ಬಿ ಪಾಟೀಲ್

ಕೊನೆಯ ಕ್ಷಣದ ಪ್ಲಾನ್‌ನಂತೆ ಜೆಡಿಎಸ್ ಮೇಯರ್ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ವಾಪಾಸ್ ಪಡೆದು ಬಿಜೆಪಿಯ ಅಭ್ಯರ್ಥಿಗೆ ಮತ ಹಾಕಿತು. ಇದರಿಂದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ 47 ಮತ ಪಡೆದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸೈಯದ್ ಹಸ್ರತ್ 28 ಮತ ಪಡೆದರು. ಇದರ ನಂತರ ನಡೆದ ಉಪ ಮೇಯರ್ ಚುನಾವಣೆ ಪ್ರಕ್ರಿಯೆಯ ಆರಂಭದಲ್ಲೇ ಜೆಡಿಎಸ್‌ಗೆ ದೊಡ್ಡ ಮರ್ಮಾಘಾತ ಉಂಟಾಯಿತು. ಜೆಡಿಎಸ್‌ನ ರೇಷ್ಮಾ ಬಾನು ಅನಾಯಸವಾಗಿ ಉಪ ಮೇಯರ್ ಆಗುತ್ತಾರೆ ಎಂದು ಜೆಡಿಎಸ್ ಅಂದುಕೊಂಡಿತ್ತು. ಆದರೆ ಬಿಸಿಎ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ರೇಷ್ಮಾ ಬಾನು ಬಿಸಿಎ ಜಾತಿ ಪ್ರಮಾಣ ಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಗಳು ರೇಷ್ಮಾ ಬಾನು ನಾಮಪತ್ರ ತಿರಸ್ಕರಿಸಿದರು. ಇದು ಜೆಡಿಎಸ್‌ಗೆ ಆಘಾತ ಉಂಟು ಮಾಡಿತು.

ಬಿಜೆಪಿ ಜೊತೆ ಸೇರಿದರು ಜೆಡಿಎಸ್‌ಗೆ ಉಪ ಮೇಯರ್ ಸ್ಥಾನ ಕೈತಪ್ಪಿದ ಕಾರಣ ಕಾಂಗ್ರೆಸ್ ಕಲಾಪದ ಒಳಗೆಯೆ ಸಂಭ್ರಮಿಸಿತು. ಜೆಡಿಎಸ್ ಅನ್ನು ಬಿಜೆಪಿ ಬಿ ಟೀಂ ಎನ್ನುತ್ತಾ ಶೇಮ್ ಶೇಮ್ ಘೋಷಣೆ ಕೂಗಿ ಜೆಡಿಎಸ್ ಸದಸ್ಯರನ್ನು ಹಂಗಿಸಿದರು. ಕಾಂಗ್ರೆಸ್ ಸದಸ್ಯರ ವ್ಯಂಗ್ಯಕ್ಕೆ ಉತ್ತರ ಕೊಡಲಾಗದೆ ಜೆಡಿಎಸ್ ಸದಸ್ಯರು ಪೇಚು ಮೊರೆ ಹಾಕಿಕೊಂಡರು. ಇದನ್ನೂ ಓದಿ: ಸ್ವಚ್ಛ ಭಾರತ್ ಬೆಂಗಳೂರು ಎಲ್ಲಿಗೆ ಹೋಗಿದೆ? ಬೀದಿಯಲ್ಲಿ ಕಸ ಬಿದ್ದು ಕೊಳೆಯುತ್ತಿದೆ: ಡಿಕೆ ಸುರೇಶ್‌

ಯಾವಾಗ ಜೆಡಿಎಸ್ ಉಪ ಮೇಯರ್ ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಯ್ತೋ ಆಗಲೆ ಬಿಜೆಪಿಗೆ ಎರಡನೇ ಲಡ್ಡು ಬಾಯಿಗೆ ಬಿದ್ದಂತಾಯ್ತು. ಬಿಜೆಪಿಯಿಂದ ಉಪ ಮೇಯರ್ ಸ್ಥಾನಕ್ಕೆ ನೆಪ ಮಾತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಸದಸ್ಯೆ ರೂಪಾಗೆ ಅನಾಯಾಸವಾಗಿ ಉಪ ಮೇಯರ್ ಸ್ಥಾನ ಒಲಿದು ಬಂತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *