ಹಳ್ಳಿಹಕ್ಕಿ ಸೋತ್ರೆ ಜಗತ್ತು ಮುಳುಗುತ್ತಾ- ಶ್ರೀನಿವಾಸ್ ಪ್ರಸಾದ್ ಪ್ರಶ್ನೆ

Public TV
1 Min Read

ಮೈಸೂರು: ಹುಣಸೂರು ಉಪ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಅದರಲ್ಲಿ ಅನುಮಾನಗಳೇ ಬೇಡ. ಆದರೂ, ಒಂದು ವೇಳೆ ವಿಶ್ವನಾಥ್ ಸೋತರೆ ಜಗತ್ತು ಮುಳುಗೋಗುತ್ತಾ? ಸಿದ್ದರಾಮಯ್ಯ ಎಷ್ಟು ಸಲ ತೋಡೆ ತಟ್ಟಿ ಬಿದ್ದೋಗಿಲ್ಲ ಹೇಳಿ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರ ಉಪ ಚುನಾವಣೆ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಈ ರೀತಿ ಮರುಪ್ರಶ್ನೆ ಹಾಕಿದ್ದಾರೆ. ಈ ಪ್ರಶ್ನೆಗಳನ್ನು ಕೇಳುವ ಮೂಲಕ ಉಪಚುನಾವಣೆ ಫಲಿತಾಂಶಕ್ಕೂ ಮುನ್ನ ಸೋಲಿನ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಈ ಮೂಲಕ ಎಚ್. ವಿಶ್ವನಾಥ್ ಹುಣಸೂರು ಉಪ ಚುನಾವಣೆಯಲ್ಲಿ ಸೋತರು ಏನೂ ಪರಿಣಾಮ ಬಿರೋಲ್ಲ ಎಂದು ಸಂಸದರು ಸ್ಪಷ್ಟವಾಗಿ ಹೇಳಿದ್ದಾರೆ.

ವಿಶ್ವನಾಥ್ ಬಿಜೆಪಿಗೆ ಬರಲು ಪ್ರಮುಖ ಕಾರಣರಾಗಿದ್ದ ಶ್ರೀನಿವಾಸ್ ಪ್ರಸಾದ್, ಇದೀಗ ಫಲಿತಾಂಶ ಹೊರಬೀಳುವ ಮುನ್ನವೇ ವಿಶ್ವನಾಥ್ ಸೋತರೆ ಏನು ಆಗೋಲ್ಲ ಎಂದ ಹೇಳಿರುವುದು ಕುತೂಹಲ ಹುಟ್ಟಿಸಿದೆ. ಇದೇ ವೇಳೆ ನಾಳೆಯ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಇದು ಜನತೆಗೆ ಬಿಟ್ಟ ವಿಚಾರ. ಅನರ್ಹರ ಬಗ್ಗೆ ಜನರ ಮನಸ್ಥಿತಿ ಏನಿದೆ ಅಂತ ನಾಳೆ ಗೊತ್ತಾಗಲಿದೆ ಎಂದ ಅವರು, ಸರ್ಕಾರ ಸ್ಥಿರವಾಗಿದೆ. ನಾಳೆ ಗೆದ್ದು ಮತ್ತಷ್ಟು ಸ್ಥಿರ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ವೈಟ್ ವಾಶ್ ಆಗುತ್ತಾರೆ ಎಂದು ಮತ್ತೆ ಪುನರುಚ್ಚರಿಸಿದ ಶ್ರೀನಿವಾಸ್ ಪ್ರಸಾದ್, ಸೋಲುವವರ ಬಗ್ಗೆ ಈಗ ಮಾತನಾಡೋದು ಬೇಡ ಎಂದು ಹೇಳುವ ಮೂಲಕ ಮಾಜಿ ಸಿಎಂಗೆ ಟಾಂಗ್ ನೀಡಿದರು. ಗೆದ್ದವರೆಲ್ಲರಿಗೂ ಮಂತ್ರಿಭಾಗ್ಯ ಅಂತ ಸ್ವತಃ ಸಿಎಂ ಹೇಳಿದ್ದಾರೆ. ಬಿಜೆಪಿ ಅನರ್ಹರಿಗೆ ಕೊಟ್ಟ ಭರವಸೆ ಈಡೇರಿಸಲಿದೆ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *